ETV Bharat / bharat

ವಿಷಕಾರಿಯಾಗುತ್ತಿದೆ ಕುಡಿಯುವ ಜೀವಜಲ

author img

By

Published : Dec 28, 2020, 9:36 PM IST

2016ರಲ್ಲಿ ಬಿಡುಗಡೆಯಾದ 'ವರ್ಲ್ಡ್ ವಾಟರ್ ಏಡ್' ವರದಿಯ ಪ್ರಕಾರ, ನಮ್ಮ ದೇಶದಲ್ಲಿ ಸುರಕ್ಷಿತ ಶುದ್ಧ ನೀರಿನ ಲಭ್ಯತೆ ಕಡಿಮೆ ಮಟ್ಟದಲ್ಲಿದೆ. ನಮ್ಮ ದೇಶದ ಪ್ರಸ್ತುತ ನೀರಿನ ಅವಶ್ಯಕತೆ ವರ್ಷಕ್ಕೆ 110 ಕೋಟಿ ಘನ ಲೀಟರ್ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ. 2030ರ ವೇಳೆಗೆ ನಮ್ಮ ದೇಶದಲ್ಲಿ ನೀರಿನ ಕೊರತೆ ಶೇ. ಐವತ್ತಕ್ಕಿಂತ ಹೆಚ್ಚಾಗುತ್ತದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹೇಳಿದೆ.
most-of-indias-plastic-waste-dumped-in-rivers
ವಿಷಕಾರಿಯಾಗುತ್ತಿದೆ ಕುಡಿಯುವ ನೀರು: ಭಾರ ಲೋಹಗಳಿಂದ ಕಲುಷಿತ!

ನೀರು, ಪ್ರಕೃತಿಯಲ್ಲಿ ಇರುವ ಪ್ರತಿಯೊಂದು ಜೀವಿಗಳಿಗೆ ಸಂಜೀವಿನಿ. ಪರಿಸರ ಸಂರಕ್ಷಣೆಯಲ್ಲಿ ನೀರು ವಿಶೇಷ ಪಾತ್ರ ವಹಿಸುತ್ತದೆ. ಮಾನವನ ದೇಹದ ವಿವಿಧ ಕೋಶ ಜಾಲಗಳು ಮತ್ತು ಅಂಗಗಳಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಪ್ರತಿದಿನ ಕನಿಷ್ಠ ಎಂಟರಿಂದ ಹತ್ತು ಲೋಟ ನೀರು ಬೇಕಾಗುತ್ತದೆ. ನಾವು ಕುಡಿಯುವ ನೀರು ಸ್ವಚ್ಛವಾಗಿರಬೇಕು. ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಸಂರಕ್ಷಿತ ಸಿಹಿನೀರು ಆರೋಗ್ಯಕರ ದೇಹದ ವ್ಯವಸ್ಥೆಗೆ ಭದ್ರ ಬುನಾದಿಯಂತಿದೆ. ನೀರಿನಿಂದ ಹರಡುವ ರೋಗಗಳು ನಮ್ಮ ದೇಶವನ್ನು ಆರ್ಥಿಕವಾಗಿ ಪೀಡಿಸುತ್ತಿವೆ ಎಂದು ಯುನಿಸೆಫ್‌ (UNICEF) ಹೇಳಿದೆ. ದೇಶಾದ್ಯಂತ ದಾಖಲಾದ ಸರಾಸರಿ ಮಳೆ 1170 ಮಿ.ಮೀ. ನೈಸರ್ಗಿಕ ಜಲ ಸಂಪನ್ಮೂಲಗಳೂ ಇವೆ. ಅದಕ್ಷತೆ ಮತ್ತು ನೀರಿನ ಸಂರಕ್ಷಣೆಯ ಕೊರತೆಯಿಂದಾಗಿ ಅದರ ಸಿಂಹಪಾಲು ಸಾಗರಕ್ಕೆ ವ್ಯರ್ಥವಾಗಿ ಹರಿಯುತ್ತಿದೆ. ಅತಿಯಾದ ನೀರಿನ ಮಾಲಿನ್ಯ, ಜನಸಂಖ್ಯೆಯ ಬೆಳವಣಿಗೆ ಮತ್ತು ವಾತಾವರಣದ ಉಷ್ಣತೆ ನಮ್ಮ ದೇಶದಲ್ಲಿ ತೀವ್ರ ನೀರಿನ ಕೊರತೆ ಸೃಷ್ಟಿಸುತ್ತಿದೆ.

ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಪ್ರಕಾರ, 2016-17ರ ವೇಳೆಗೆ ದೇಶದ ಶೇಕಡಾ 65ರಷ್ಟು ಜನರಿಗೆ ಮಾತ್ರ ಕೊಳವೆ ಮತ್ತು ಕೈ ಪಂಪ್‌ಗಳ ಮೂಲಕ ಸುರಕ್ಷಿತ ಕುಡಿಯುವ ನೀರು ಲಭ್ಯ ಇತ್ತು. ಸಾವಿರಾರು ಹಳ್ಳಿಗಳು ಸಾಮಾನ್ಯ ನೀರು ಸರಬರಾಜು ವ್ಯವಸ್ಥೆಯಿಂದ ದೂರ ಇವೆ. 2016ರಲ್ಲಿ ಬಿಡುಗಡೆಯಾದ 'ವರ್ಲ್ಡ್ ವಾಟರ್ ಏಡ್' ವರದಿಯ ಪ್ರಕಾರ, ನಮ್ಮ ದೇಶದಲ್ಲಿ ಸುರಕ್ಷಿತ ಶುದ್ಧ ನೀರಿನ ಲಭ್ಯತೆ ಕಡಿಮೆ ಮಟ್ಟದಲ್ಲಿದೆ. ನಮ್ಮ ದೇಶದ ಪ್ರಸ್ತುತ ನೀರಿನ ಅವಶ್ಯಕತೆ ವರ್ಷಕ್ಕೆ 110 ಕೋಟಿ ಘನ ಲೀಟರ್ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ. 2025ರ ವೇಳೆಗೆ ಈ ಪ್ರಮಾಣ 120 ಕೋಟಿ ಘನ ಲೀಟರ್ ಮತ್ತು 2050ರ ವೇಳೆಗೆ ಇದು 144 ಕೋಟಿ ಘನ ಲೀಟರ್ ಆಗಬಹುದು ಎಂಬ ಲೆಕ್ಕಾಚಾರ ಇದೆ. 2030ರ ವೇಳೆಗೆ ನಮ್ಮ ದೇಶದಲ್ಲಿ ನೀರಿನ ಕೊರತೆ ಶೇ ಐವತ್ತಕ್ಕಿಂತ ಹೆಚ್ಚಾಗುತ್ತದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಹೇಳಿದೆ.

ಸೀಸದಿಂದ ಕಲುಷಿತ!

ಇಂದು ನಮ್ಮ ದೇಶದಲ್ಲಿ ಶುದ್ಧ ಕುಡಿಯುವ ನೀರನ್ನು ಪಡೆಯುವುದು ಒಂದು ದೊಡ್ಡ ಭಾಗ್ಯ ಎನಿಸಿದೆ. ನಮಗೆ ಲಭ್ಯ ಇರುವ ಕುಡಿಯುವ ನೀರಿನ ಗುಣಮಟ್ಟ ತೃಪ್ತಿಕರವಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ನಮ್ಮ ದೇಶದಲ್ಲಿ ನೀರಿನ ಶುದ್ಧತೆ ಅಳೆಯುವ ಪ್ರಕ್ರಿಯೆಯಲ್ಲಿ ನಿಖರತೆಯ ಕೊರತೆಯಿಂದಾಗಿ, ಅನೇಕ ಜನ ತಮಗೆ ಗೊತ್ತಿಲ್ಲದೆ ಕಲುಷಿತ ನೀರನ್ನು ಬಳಕೆ ಮಾಡುತ್ತಿದ್ದಾರೆ. ಐಸಿಎಂಆರ್ ಮತ್ತು ಎನ್ಐಎನ್ ಅಂತಹ ಸಂಸ್ಥೆಗಳು ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರಗಳು ಮತ್ತು ಸೀಸ, ಆರ್ಸೆನಿಕ್, ನಿಕಲ್ ಮತ್ತು ತಾಮ್ರದಂತಹ ಭಾರವಾದ ಲೋಹಗಳಿಂದ ಕಲುಷಿತವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿವೆ. ಕಾರ್ಖಾನೆಗಳು ಮತ್ತು ಮನೆಯ ತ್ಯಾಜ್ಯಗಳಿಂದ ಹೊರಹೊಮ್ಮುವ ರಾಸಾಯನಿಕ ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ. ಕೃಷಿ ಮತ್ತು ಮೀನು ಸಾಕಾಣಿಕೆಯಲ್ಲಿ ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಕೆ ವಿಪರೀತವಾಗಿದೆ. ಆಹಾರ, ಕುಡಿಯುವ ನೀರು ಮತ್ತು ಹಾಲಿನಲ್ಲಿರುವ ವಿಷ ರೋಗಗಳು ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆರ್ಗಾನೊ-ಕ್ಲೋರೈಡ್‌ನಿಂದ ಕಲುಷಿತಗೊಂಡ ನೀರು ಮಾನವ ನರಮಂಡಲ, ಪಿತ್ತಜನಕಾಂಗ, ಮೂತ್ರಪಿಂಡಗಳು ಮತ್ತು ಸ್ನಾಯುಗಳ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಭಾರೀ ಮಳೆ ಮತ್ತು ಪ್ರವಾಹದ ಸಮಯದಲ್ಲಿ ಈ ಕಲುಷಿತ ನೀರಿನ ಪರಿಣಾಮ ಜನರ ಮೇಲೆ ಇನ್ನೂ ಹೆಚ್ಚಾಗಿ ಇರುತ್ತದೆ.

ಪ್ಲಾಸ್ಟಿಕ್ ತ್ಯಾಜ್ಯ ಮಾಲಿನ್ಯ:

ನೀರಿನ ಮಾಲಿನ್ಯದ ಲಾಭ ಪಡೆದುಕೊಂಡು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕುಡಿಯುವ ನೀರಿನ ಮಾರಾಟ ಹೆಚ್ಚುತ್ತಿದೆ. ಇದು ಕುಡಿಯುವ ನೀರಿನ ಅಗತ್ಯಗಳನ್ನು ಸ್ವಲ್ಪ ಮಟ್ಟಿಗೆ ಪೂರೈಸಬಹುದಾದರೂ ಇದು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಾರಣವಾಗುತ್ತಿದೆ. ಸುಮಾರು ಶೇ ಎಂಬತ್ತರಷ್ಟು ಪ್ಲಾಸ್ಟಿಕ್ ಬಾಟಲಿಗಳು ಮಣ್ಣು ಮತ್ತು ನೀರಿನ ಮೂಲಗಳನ್ನು ಕಲುಷಿತಗೊಳಿಸಿ ಅಪಾಯಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಪ್ಲಾಸ್ಟಿಕ್ ಸಂಪೂರ್ಣವಾಗಿ ಕರಗಲು ಸುಮಾರು ಒಂದು ಸಾವಿರ ವರ್ಷ ಬೇಕಾಗುತ್ತದೆ. ಮಾನವರು, ಜಾನುವಾರು ಮತ್ತು ಸಸ್ಯವರ್ಗದ ಮೇಲೆ ಅದು ಆ ಮಟ್ಟಿಗೆ ತೀವ್ರ ಪರಿಣಾಮ ಬೀರುತ್ತದೆ. ಪ್ರಸ್ತುತ, ಒಂದೇ ವರ್ಷದಲ್ಲಿ ಶತಕೋಟಿಗಟ್ಟಲೆ ಟನ್ ಪ್ಲಾಸ್ಟಿಕ್ ತ್ಯಾಜ್ಯ ವಿಶ್ವಾದ್ಯಂತ ರಾಶಿಗೂಡುತ್ತಿದೆ.

ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ನೀರಿನ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನೀರಿನ ಮಾಲಿನ್ಯ ತಡೆಗಟ್ಟುವಲ್ಲಿ ಈಗಲಾದರೂ ಗಮನಹರಿಸಬೇಕು. ಕಾಲಕಾಲಕ್ಕೆ ನೀರಿನ ಮಾದರಿಗಳನ್ನು ಪರೀಕ್ಷಿಸುವ ಮೂಲಕ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕಾಳಜಿ ವಹಿಸಬೇಕು. ನಿಷೇಧಿತ ಕೀಟನಾಶಕಗಳ ಬಳಕೆ ಕಟ್ಟುನಿಟ್ಟಾಗಿ ನಿಯಂತ್ರಣಕ್ಕೆ ಬರಬೇಕು. ರಾಸಾಯನಿಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಮತ್ತು ಅವುಗಳನ್ನು ಸಾವಯವ ಕೃಷಿಯತ್ತ ಪ್ರೋತ್ಸಾಹಿಸಬೇಕು. ಪ್ಲಾಸ್ಟಿಕ್‌ಗಳ ವ್ಯಾಪಕ ಬಳಕೆಯನ್ನು ನಿಲ್ಲಿಸಲು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.