ETV Bharat / bharat

ತೆಲಂಗಾಣದಲ್ಲಿ ಮಂಗಗಳನ್ನು ಕೊಂದು ಬೇಯಿಸಿ ತಿಂದ ಭಿಕ್ಷುಕರು!: ಇಬ್ಬರ ಬಂಧನ, ನಾಲ್ವರು ಪರಾರಿ

author img

By ETV Bharat Karnataka Team

Published : Dec 13, 2023, 3:36 PM IST

ದೈವ ಸ್ವರೂಪಿ ಎಂದೇ ಭಾವಿಸುವ ಮಂಗಗಳನ್ನು ಭಿಕ್ಷುಕರು ಕೊಂದು ತಿಂದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.

ತೆಲಂಗಾಣದಲ್ಲಿ ಮಂಗಗಳನ್ನು ಕೊಂದು ಬೇಯಿಸಿ ತಿಂದ ಭಿಕ್ಷುಕರು
ತೆಲಂಗಾಣದಲ್ಲಿ ಮಂಗಗಳನ್ನು ಕೊಂದು ಬೇಯಿಸಿ ತಿಂದ ಭಿಕ್ಷುಕರು

ಹೈದರಾಬಾದ್​: ತೆಲಂಗಾಣದ ನಿರ್ಮಲ ಜಿಲ್ಲೆಯ ಚಿಂತಲ್​​ ಬೋರಿ ಎಂಬ ಗ್ರಾಮದಲ್ಲಿ ಅಮಾನುಷ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 6 ಜನರ ಭಿಕ್ಷುಕರು ಕೋತಿಗಳನ್ನು ಸಾಯಿಸಿ, ಅದರ ಮಾಂಸವನ್ನು ಬೇಯಿಸಿ ತಿಂದಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಭೈಂಸಾ ಮಂಡಲದ ಚಿಂತಲ್​​ ಬೋರಿಯಲ್ಲಿ ಕಳೆದ ಮೂರು ದಿನಗಳಿಂದ 6 ಜನರು ಭಿಕ್ಷಾಟನೆ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಗ್ರಾಮದ ಬಳಿಕ ನಾಲ್ಕು ಮಂಗಗಳನ್ನು ಕೊಂದು, ಬೇಯಿಸಿ ತಿನ್ನುತ್ತಿದ್ದರು. ಮಾಂಸವನ್ನು ಬೇಯಿಸುವ ವೇಳೆ ಅವರಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಆಗ ಸಿಟ್ಟಾದ ಓರ್ವ ಈ ಬಗ್ಗೆ ಗ್ರಾಮದ ಜನರಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದಾನೆ. ಅದರಂತೆ ಓರ್ವ ಭಿಕ್ಷುಕ ಗ್ರಾಮಕ್ಕೆ ತೆರಳಿ ಮಂಗಗಳನ್ನು ಕೊಂದು ತಿನ್ನುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.

ತಕ್ಷಣವೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ವೀಕ್ಷಿಸಿದಾಗ ಈ ದಾರುಣ ಘಟನೆ ಕಂಡುಬಂದಿದೆ. ಗ್ರಾಮಸ್ಥರನ್ನು ಕಂಡ ಭಿಕ್ಷುಕರಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಇನ್ನಿಬ್ಬರು ಸ್ಥಳದಲ್ಲೇ ಸಿಕ್ಕಿದ್ದರು. ವಿಚಾರಣೆ ನಡೆಸಿದ ವೇಳೆ ತಾವೇ ಮಂಗಗಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ತಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಗ್ರಾಮಸ್ಥರ ಕಾಲಿಗೆ ಬಿದ್ದಿದ್ದಾರೆ.

ಸ್ಥಳದಲ್ಲಿ ಕೋತಿಗಳ ದೇಹ ಪತ್ತೆ: ಜನರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಭಿಕ್ಷುಕರು ನಾಲ್ಕು ಕೋತಿಗಳನ್ನು ಹತ್ಯೆ ಮಾಡಿ ಬೇಯಿಸಿದ್ದು ಕಂಡುಬಂತು. ಮಂಗಗಳ ಕೈ, ಕಾಲು, ತಲೆಯನ್ನು ಬೇಯಿಸಿದ್ದರು. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದರು. ಹನುಮನ ಅವತಾರ ಎಂದು ಪೂಜಿಸುವ ಕೋತಿಗಳನ್ನು ಕೊಂದು ತಿಂದಿದ್ದನ್ನು ಪ್ರಶ್ನಿಸಿದಾಗ, ತಪ್ಪಾಯಿತು ಕ್ಷಮಿಸಿ ಎಂದು ಕೋರಿದ್ದಾರೆ. ಬಳಿಕ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರು ಮಂದಿಯಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಹೆರಿಗೆ ಮತ್ತು ಕಣ್ಣಿನ ಆಸ್ಪತ್ರೆಗೆ ನುಗ್ಗಿದ ಚಿರತೆ; ಬೆಚ್ಚಿಬಿದ್ದ ಸಿಬ್ಬಂದಿ ರೋಗಿಗಳು - ವಿಡಿಯೋ

ಹಾಸನದಲ್ಲಿ ಕೋತಿಗಳ ಮಾರಣಹೋಮ: ಆಹಾರ ಅರಸಿ ಬಂದ 38 ಮಂಗಗಳನ್ನು ನಿರ್ದಯವಾಗಿ ವಿಷವಿಕ್ಕಿ ಕೊಂದು ಹಾಕಿದ್ದ ಅತ್ಯಂತ ಅಮಾನವೀಯ ಘಟನೆ ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿತ್ತು. ಪುಟ್ಟ ಮರಿಗಳ ಜೊತೆಗೆ ಸಾಮೂಹಿಕವಾಗಿ ಮೂಕ ಜೀವಿಗಳನ್ನು ಹತ್ಯೆ ಮಾಡಲಾಗಿತ್ತು. ರಸ್ತೆಯಲ್ಲಿ ದೊಡ್ಡದಾದ ಚೀಲ ಬಿದ್ದಿದ್ದನ್ನು ತೆಗೆದು ನೋಡಿದಾಗ, 60ಕ್ಕೂ ಹೆಚ್ಚು ಮಂಗಗಳು ಅದರೊಳಗೆ ಬಂಧಿಯಾಗಿರುವುದು ಗೊತ್ತಾಗಿತ್ತು. ಇದರಲ್ಲಿ 38 ಮಂಗಗಳು ಸಾವನ್ನಪ್ಪಿದ್ದವು. 15ಕ್ಕೂ ಹೆಚ್ಚು ಕೋತಿಗಳು ಸಾವು ಬದುಕಿನ ನಡುವೆ ನರಳಾಡುತ್ತಿದ್ದವು. ಗ್ರಾಮಸ್ಥರು ರಾತ್ರಿಯೇ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಪಶು ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನಿತ್ರಾಣಗೊಂಡಿದ್ದ ಕೋತಿಗಳಿಗೆ ನೀರು, ಆಹಾರ ನೀಡಿ ಬದುಕಿಸುವ ಪ್ರಯತ್ನ ಮಾಡಿದ್ರೂ ಅದರಲ್ಲಿ ಹಲವು ಮಂಗಗಳು ಸಾವಿಗೀಡಾದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.