ETV Bharat / bharat

ಅಟ್ಟಪಾಡಿ ಮಧು ಕೊಲೆ ಪ್ರಕರಣ: 13 ಅಪರಾಧಿಗಳಿಗೆ 7 ವರ್ಷ ಜೈಲು, ದಂಡ ವಿಧಿಸಿದ ವಿಶೇಷ ನ್ಯಾಯಾಲಯ

author img

By

Published : Apr 5, 2023, 2:01 PM IST

ನಿನ್ನೆ ಮಣ್ಣಾರ್​ಕ್ಕಾಡ್​ ಎಸ್ಸಿ ಎಸ್ಟಿ ವಿಶೇಷ ನ್ಯಾಯಾಲಯ ಅಟ್ಟಪಾಡಿ ಮಧು ಕೊಲೆ ಪ್ರಕರಣದ 16 ಆರೋಪಿಗಳಲ್ಲಿ 14 ಮಂದಿಯನ್ನು ದೋಷಿಗಳೆಂದು ಘೋಷಿಸಿತ್ತು.

Attapadi Madhu
ಕೊಲೆಯಾಗಿದ್ದ ಅಟ್ಟಪಾಡಿ ಮಧು

ಪಾಲಕ್ಕಾಡ್​ (ಕೇರಳ): ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದ ಅಟ್ಟಪಾಡಿ ಮಧು ಕೊಲೆ ಪ್ರಕರಣದಲ್ಲಿ 14 ಆರೋಪಿಗಳನ್ನು ದೋಷಿಗಳೆಂದು ನಿನ್ನೆ ಘೋಷಿಸಿದ್ದ ಮಣ್ಣಾರ್​ಕ್ಕಾಡ್​ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯ, ಇಂದು 13 ಅಪರಾಧಿಗಳಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶ ಕೆ ಎಂ ರತೀಶ್​​ ಕುಮಾರ್​ ತೀರ್ಪು ಪ್ರಕಟಿಸಿದ್ದಾರೆ. ನಿನ್ನೆ ದೋಷಿಗಳೆಂದು ತೀರ್ಪು ನೀಡಿದ್ದ ನ್ಯಾಯಾಲಯ ಬುಧವಾರ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿತ್ತು.

ಘಟನೆ ನಡೆದ ಐದು ವರ್ಷಗಳ ಬಳಿಕ ನ್ಯಾಯಾಲಯ ಪ್ರಕರಣದ ಕುರಿತು ತೀರ್ಪು ನೀಡಿದೆ. ಮಧು ಕೊಲೆ ಪ್ರಕರಣದಲ್ಲಿ ಒಟ್ಟು 16 ಮಂದಿ ಆರೋಪಿಗಳಿದ್ದು, ಇಬ್ಬರನ್ನು 4ನೇ ಮತ್ತು 11ನೇ ಆರೋಪಿಗಳನ್ನು ನಿನ್ನೆ ನ್ಯಾಯಾಲಯ ಖುಲಾಸೆಗೊಳಿಸಲಾಗಿತ್ತು. ಇಂದು ಉಳಿದ 14 ಮಂದಿ ಅಪರಾಧಿಗಳಲ್ಲಿ 13 ಮಂದಿಗಷ್ಟೇ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 16 ನೇ ಆರೋಪಿ ಮುನೀರ್ ಈ ಪ್ರಕರಣದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಿದ್ದು, ದಂಡವನ್ನು ಕೂಡ ಈಗಾಗಲೇ ಪಾವತಿಸಿರುವುದರಿಂದ ಮುಂದೆ ಶಿಕ್ಷೆ ಅನುಭವಿಸಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನಿನ್ನೆ ಎಸ್ಸಿ ಎಸ್ಟಿ ವಿಶೇಷ ನ್ಯಾಯಾಲಯ ಅಟ್ಟಪ್ಪಾಡಿ ಮಧು ಹತ್ಯೆ ಪ್ರಕರಣದಲ್ಲಿ 14 ಜನರನ್ನು ಐಪಿಸಿ 304 (2) ಕೊಲೆ ಪ್ರಕರಣದ ಆರೋಪದಡಿಯಲ್ಲಿ ದೋಷಿಗಳೆಂದು ಘೋಷಿಸಿದೆ. ಶಿಕ್ಷೆ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ, ವಿಚಾರಣೆಯನ್ನು ಕೋರ್ಟ್​ ಇಂದಿಗೆ ಮುಂದೂಡಿತ್ತು. ಒಂದನೇ ಆರೋಪಿ ಹುಸೇನ್ ಮೇಚೇರಿಲ್, ಮರಕಾರ, ಶಂಸುದ್ದೀನ್, ರಾಧಾಕೃಷ್ಣನ್, ಅಬೂಬಕರ್, ಸಿದ್ದಿಕ್, ಉಬೈದ್, ನಜೀಬ್, ಜೈಜುಮೋನ್, ಸಜೀವ್, ಸತೀಶ್, ಹರೀಶ್, ಬಿಜು, ಮುನೀರ್ ಅವರನ್ನು ದೋಷಿಗಳೆಂದು ಘೋಷಿಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು ನಿನ್ನೆ ಪ್ರಕರಣದಿಂದ ಖುಲಾಸೆಗೊಳಿಸಿದೆ. ನಾಲ್ಕನೇ ಆರೋಪಿ ಅನೀಶ್ ಮತ್ತು ಹನ್ನೊಂದನೇ ಆರೋಪಿ ಅಬ್ದುಲ್ ಕರೀಂ ಅವರು ಖುಲಾಸೆಗೊಂಡವರು. ಮಾರ್ಚ್​ 10ರಂದು ಮಧು ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯ ಮಾರ್ಚ್​ 18 ರಂದು ತೀರ್ಪು ಪ್ರಕಟಿಸುವುದಾಗಿ ಘೋಷಿಸಿತ್ತು. ಆದರೆ ಮಾರ್ಚ್​ 18 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ತೀರ್ಪನ್ನು ಮಾರ್ಚ್​ 30ಕ್ಕೆ ಮುಂದೂಡಿತ್ತು. ಮಾರ್ಚ್​ 30 ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಮತ್ತೆ ಏಪ್ರಿಲ್​ 4ಕ್ಕೆ ಮುಂದೂಡಿತ್ತು. ನಿನ್ನೆ ತೀರ್ಪು ಪ್ರಕಟನೆಯ ದಿನ ಮಧು ಅವರ ತಾಯಿ ಲಲ್ಲಿ ಹಾಗೂ ಸಹೋದರಿ ಸರಸು ಅವರಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಮಧು ಅವರ ತಾಯಿ ಬಿಗಿ ಭದ್ರತೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು.

ಏನಿದು ಪ್ರಕರಣ?: 2018 ಫೆಬ್ರುವರಿ 22 ರಂದು ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಚಿಂಡಕಿ ಕಾಲೋನಿಯ ಮಲ್ಲನ್ ಮತ್ತು ಮಲ್ಲಿ ದಂಪತಿಯ ಪುತ್ರ 30 ವರ್ಷದ ಮಧು ಎಂಬಾತ ಗುಂಪು ದಾಳಿಯಲ್ಲಿ ಸಾವನ್ನಪ್ಪಿದ್ದನು. ಮಧುವನ್ನು ಕಳ್ಳನೆಂದು ಆರೋಪಿಸಿ ಗುಂಪು ಆತನನ್ನು ಹಿಡಿದು ಅಟ್ಟಪಾಡಿ (ಗಿರಿಜನರ ಗ್ರಾಮ) ಎಂಬಲ್ಲಿನ ಮುಕಾಲಿಗೆ ಕರೆದೊಯ್ದು ಥಳಿಸಿತ್ತು. ನಂತರ ಪೊಲೀಸರು ಆಗಮಿಸಿ ಮಧುವನ್ನು ವಶಕ್ಕೆ ಪಡೆದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದನು.

ಆರೋಪಿಗಳ ದಾಳಿಯಿಂದ ಮಧು ಸಾವನ್ನಪ್ಪಿದ್ದನು ಎಂದು ಪ್ರಕರಣ ದಾಖಲಾಗಿತ್ತು. ಕೆಲ ಆರೋಪಿಗಳು ಮಧುವನ್ನು ಹಿಡಿದು ಥಳಿಸಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್​ ಆಗಿತ್ತು. ಈ ವೀಡಿಯೊಗಳನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಘಟನೆ ನಡೆದು ನಾಲ್ಕು ವರ್ಷ ಕಳೆದರೂ ವಿಚಾರಣೆ ಆರಂಭವಾಗದ ಕಾರಣ ಮಧು ಅವರ ತಾಯಿ 2022ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆಯ ಆರಂಭದಲ್ಲಿ ಸಾಕ್ಷಿಗಳು ಪಕ್ಷಾಂತರಗೊಂಡ ನಂತರ ಹೈಕೋರ್ಟ್ ಮಧ್ಯಪ್ರವೇಶಿಸಿದ ನಂತರ ತನಿಖೆ ಮತ್ತು ವಿಚಾರಣೆಯನ್ನು ಪೂರ್ಣಗೊಳಿಸಲಾಯಿತು.

ಇದನ್ನೂ ಓದಿ: ಕೇರಳದ ಆದಿವಾಸಿ ಜನಾಂಗದ ಮಧು ಹತ್ಯೆ ಪ್ರಕರಣ: 14 ಮಂದಿ ದೋಷಿ ಎಂದು ಪ್ರಕಟಿಸಿದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.