ETV Bharat / bharat

Girlfriend Mother Murder: ಪ್ರೀತಿಗೆ ಅಡ್ಡಿ.. ಉದ್ಯಮಿ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್​ ಪ್ರೇಮಿ

author img

By

Published : Jun 9, 2023, 1:12 PM IST

Agra Crime News
ಕೊಲೆ

Boyfriend Murdered Girlfriend Mother: ಪ್ರೀತಿಗೆ ಅಡ್ಡಿ ಮಾಡುತ್ತಿದ್ದಾರೆಂದು ಆಕ್ರೋಶಗೊಂಡ ಪಾಗಲ್​ ಪ್ರೇಮಿಯೊಬ್ಬ ಉದ್ಯಮಿ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಸಂಚಲನ ಮೂಡಿಸುವ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಸಿಕಂದರಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಸ್ತ್ರಿಪುರಂನಲ್ಲಿರುವ ಶೂ ವ್ಯಾಪಾರಿಯೊಬ್ಬರ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಗುರುವಾರ ತಡರಾತ್ರಿ ಯಮುನಾ ತೀರದ ವಂಖಂಡಿ ಮಹಾದೇವ ದೇವಸ್ಥಾನದ ಬಳಿಯ ಕಾಡಿನಲ್ಲಿ ಉದ್ಯಮಿ ಪತ್ನಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನದಿಂದ ಮಹಿಳೆ ನಾಪತ್ತೆಯಾಗಿದ್ದು, ವ್ಯಾಪಾರಿಯ ಅಪ್ರಾಪ್ತ ಮಗಳ ಪ್ರೇಮಿಯು ಆತನ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ವಾಸ್ತವವಾಗಿ, ಮೃತ ಮಹಿಳೆಗೆ ಒಬ್ಬ ಮಗಳಿದ್ದು, ಆಕೆಗೆ ಪ್ರಿಯಕರನನ್ನು ಭೇಟಿಯಾಗಲು ಪೋಷಕರು ನಿಷೇಧ ಹೇರಿದ್ದರು. ಇದರಿಂದ ಕೋಪಗೊಂಡ ಆರೋಪಿ ಕೊಲೆ ಮಾಡಿದ್ದಾನೆ. ಕೇಸ್​ಗೆ ಸಂಬಂಧಿಸಿದಂತೆ ಅಪ್ರಾಪ್ತೆ ಮೇಲೂ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದೆ.

ಗಂಟಲು ಮತ್ತು ಹೊಟ್ಟೆಯ ಮೇಲೆ ಹಲ್ಲೆ : ಶಾಸ್ತ್ರಿಪುರಂನ ಭಾವನಾ ಅರೋಮಾದ ನಿವಾಸಿ ಉದಿತ್ ಬಜಾಜ್ ಎಂಬುವರು ಶೂ ವ್ಯಾಪಾರ ಮಾಡಿಕೊಂಡಿದ್ದು, ಬುಧವಾರ ರಾತ್ರಿ ಸಿಕಂದರಾ ಪೊಲೀಸ್ ಠಾಣೆಯಲ್ಲಿ ಪತ್ನಿ ಅಂಜಲಿ ಬಜಾಜ್ (40) ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪತ್ನಿ ಅಂಜಲಿ ವಂಖಂಡಿ ಮಹಾದೇವ ದೇವಸ್ಥಾನದ ಬಳಿ ಮಧ್ಯಾಹ್ನ 3 ಗಂಟೆಯಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ಈ ಕುರಿತು ಕೇಸ್​ ದಾಖಲಿಸಿಕೊಂಡ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸಿದ್ದರು. ಗುರುವಾರ ತಡರಾತ್ರಿ ದೇವಸ್ಥಾನದ ಬಳಿ ಮಹಿಳೆಯ ಶವ ಪತ್ತೆಯಾಗಿದ್ದು, ಆಕೆಯ ಗಂಟಲು ಮತ್ತು ಹೊಟ್ಟೆಯ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ : ಬಾರ್ ಕ್ಯಾಷಿಯರ್ ಕೊಲೆ ಪ್ರಕರಣ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಮಗಳ ನಂಬರ್‌ನಿಂದ ತಾಯಿಗೆ ಬಂತು ಮೆಸೇಜ್​ : ಈ ಕುರಿತು ಮಾಹಿತಿ ನೀಡಿರುವ ಸಿಕಂದರಾ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಆನಂದ್ ಕುಮಾರ್ ಶಾಹಿ, "ವಾಟ್ಸ್​ಆ್ಯಪ್​​​ನಲ್ಲಿ ಸಂದೇಶ ಕಳುಹಿಸುವ ಮೂಲಕ ಅಪ್ರಾಪ್ತ ಪುತ್ರಿಯು ತಾಯಿಯನ್ನು (ಅಂಜಲಿ) ವಂಖಂಡಿ ಮಹಾದೇವ ದೇವಸ್ಥಾನಕ್ಕೆ ಬರುವಂತೆ ಕರೆದಿದ್ದರು. ಕೂಡಲೇ ದಂಪತಿ ದೇವಸ್ಥಾನದ ಬಳಿ ತಲುಪಿದಾಗ ಮರಳಿ ಮಗಳ ನಂಬರ್​ನಿಂದ ತಂದೆಯ ಮೊಬೈಲ್​ಗೆ ಮೆಸೇಜ್ ಬಂತು, ಗುರು ಕೊಳದ ಹತ್ತಿರ ಬರುವಂತೆ ತಿಳಿಸಲಾಗಿತ್ತು. ಕೂಡಲೇ ಉದಿತ್ ಬಜಾಜ್ ತಕ್ಷಣ ಪತ್ನಿ ಅಂಜಲಿಯನ್ನು ಅಲ್ಲಿಯೇ ಬಿಟ್ಟು ಹೆದ್ದಾರಿಯಲ್ಲಿರುವ ಗುರು ಕಾ ತಾಲ್ ತಲುಪಿದ್ದಾರೆ. ಈ ವೇಳೆ ಮತ್ತೆ ಉದಿತ್‌ಗೆ ಕರೆ ಮಾಡಿದ ಮಗಳು ಮನೆ ತಲುಪಿರುವುದಾಗಿ ಎಂದು ಹೇಳಿದ್ದಾರೆ. ಬಳಿಕ ಉದಿತ್ ದೇವಸ್ಥಾನಕ್ಕೆ ಮರಳಿದ್ದಾಗ ಪತ್ನಿ ನಾಪತ್ತೆಯಾಗಿದ್ದರು" ಎಂದರು.

ಮಗಳ ಪ್ರಿಯಕರನಿಂದ ಮನನೊಂದಿದ್ದ ತಾಯಿ : ಅಂಜಲಿ ಮತ್ತು ಆಕೆಯ ಅಪ್ರಾಪ್ತ ಒಬ್ಬಳೇ ಮಗಳ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ಮಗಳು ತನ್ನ ಪ್ರಿಯಕರ ಪ್ರಖರ್ ಗುಪ್ತಾನನ್ನು ಭೇಟಿಯಾಗುವುದು ಪೋಷಕರಿಗೆ ಇಷ್ಟವಿರಲಿಲ್ಲ. ಹೀಗಾಗಿ, ಆಕೆಯ ಫೋನ್​ ಅನ್ನು ಆಗಾಗ ಚೆಕ್​ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಪ್ರೇಮಿ ಪ್ರಖರ್ ಗುಪ್ತಾ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ : ಕೋರ್ಟ್​ ಆವರಣದಲ್ಲೇ ಪಾತಕಿ ಮುಖ್ತಾರ್‌ ಅನ್ಸಾರಿ ಆಪ್ತನಿಗೆ ಗುಂಡಿಕ್ಕಿ ಹತ್ಯೆ: ವಕೀಲರ ವೇಷದಲ್ಲಿ ಬಂದು ಕೃತ್ಯ!

ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು : ಇನ್ನು ದಯಾಲ್‌ಬಾಗ್ ಪ್ರದೇಶದ ನಿವಾಸಿ ಪ್ರಖರ್ ಗುಪ್ತಾ ಸೇರಿದಂತೆ ಆತನ ಸ್ನೇಹಿತನ ಪತ್ತೆಗೆ ಆರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಸಿಕಂದರಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಆನಂದ್ ಕುಮಾರ್ ಶಾಹಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.