ಕಡಬ: ಶಾಲೆ ಬಳಿ ಕಾಡಾನೆಗಳು ಪ್ರತ್ಯಕ್ಷ, ಮಂಜಾಗ್ರತ ಕ್ರಮಕ್ಕೆ ಅರಣ್ಯ ಇಲಾಖೆಗೆ ಜನರ ಮನವಿ
Published : Feb 3, 2024, 10:11 PM IST
ಕಡಬ(ದಕ್ಷಿಣ ಕನ್ನಡ): ನೂಜಿಬಾಳ್ತಿಲ ಸಮೀಪದ ಪುತ್ತಿಗೆ ಶಾಲೆಗುಡ್ಡೆ ತಿರುವು ಬಳಿ ಪುಂಡಯಿತಬನ ಕಾಡಿನಲ್ಲಿ ಮೂರು ಕಾಡಾನೆಗಳು ಬೀಡು ಬಿಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಸಮೀಪದ ಕೃಷಿ ಭೂಮಿ ಕಡೆಗೆ ಆನೆಗಳು ಕಾಡಿನಿಂದ ಹೊರಗಡೆ ಬಂದಿವೆ. ಆದರೆ ಅವು ವಾಪಸ್ ಕಾಡಿಗೆ ಹೋಗಲು ಈ ಪ್ರದೇಶಗಳಲ್ಲಿ ಅಳವಡಿಸಿರುವ ಸೋಲಾರ್ ಬೇಲಿ ಅಡ್ಡಿಯಾಗಿದೆ ಎನ್ನಲಾಗಿದೆ.
ನೂಜಿಬಾಳ್ತಿಲ ಸಮೀಪದಲ್ಲಿರುವ ಸರಕಾರಿ ಶಾಲೆ ಬಳಿ ಕಾಡಾನೆಗಳು ಬೀಡು ಬಿಟ್ಟಿರುವ ಕುರಿತು ಜನರು ಆತಂಕ ವ್ಯಕ್ತಪಡಿಸಿದ್ದು, ಕೂಡಲೇ ಅರಣ್ಯ ಇಲಾಖೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಅರಣ್ಯ ವಲಯದ ಅಧಿಕಾರಿ ವಿಮಲ್ ಅವರು ಈಟಿವಿ ಭಾರತ ಜೊತೆ ಮಾತನಾಡಿ, ಶುಕ್ರವಾರ ಈ ನೂಜಿಬಾಳ್ತಿಲ ಹತ್ತಿರದ ಪ್ರದೇಶದಲ್ಲಿ ಕಾಡಾನೆಗಳು ಇರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ನಮ್ಮ ಅರಣ್ಯ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಈ ಪ್ರದೇಶದಲ್ಲಿ ಕಾಡಿನಿಂದ ಆನೆಗಳು ಹೊರಬರದಂತೆ ಸೋಲಾರ್ ಬೇಲಿ ಅಳವಡಿಸಲಾಗಿದೆ. ಆದರೆ ಆನೆಗಳು ಇನ್ನೊಂದು ಪ್ರದೇಶದಿಂದ ಕಾಡಿನಿಂದ ಹೊರಗಡೆ ಬಂದಿವೆ. ನಂತರ ಆ ಆನೆಗಳು ಸೋಲಾರ್ ಬೇಲಿ ಇರುವ ಕಡೆಯಿಂದ ಕಾಡಿನ ಪ್ರವೇಶಕ್ಕೆ ಪ್ರಯತ್ನಿಸಿವೆ, ಅವುಗಳಿಗೆ ಸಾಧ್ಯವಾಗಿಲ್ಲ. ನಂತರ ಅರಣ್ಯ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿ ವಿದ್ಯುತ್ ವ್ಯತ್ಯಯಗೊಳಿಸಿ, ಕಾಡಿಗೆ ಆನೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ನಿನ್ನೆ ರಾತ್ರಿ ಮತ್ತು ಇವತ್ತು ಬೆಳಗ್ಗೆ ನಮ್ಮ ಆರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಕಾಣಿಸಿರುವ ಆನೆಗಳಲ್ಲಿ ಒಂದು ಗಂಡಾನೆ ಮತ್ತು ಒಂದು ಮರಿ, ಒಂದು ಹೆಣ್ಣಾನೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂಓದಿ: ಚಾಮರಾಜನಗರ: ಬಂಡೀಪುರದಲ್ಲಿ ಕಾಡಾನೆ ಸಾವಿಗೆ ಹೃದಯಾಘಾತ, ಟ್ರಾಮಾ ಕಾರಣ; ಅಧಿಕಾರಿಗಳ ಮಾಹಿತಿ