ಕರ್ನಾಟಕ

karnataka

ದೇಶದ ಮೂಲೆ ಮೂಲೆಗೂ ರೈಲ್ವೆ ಸಂಪರ್ಕ ಕಲ್ಪಿಸಲು ಕೇಂದ್ರದಿಂದ ಶ್ರಮ: ಪ್ರಹ್ಲಾದ್​ ಜೋಶಿ

By ETV Bharat Karnataka Team

Published : Feb 26, 2024, 6:49 PM IST

'ಅಮೃತ ಭಾರತ್ ಯೋಜನೆ'ಯಡಿ ಧಾರವಾಡದ ಅಣ್ಣಿಗೇರಿ, ನವಲಗುಂದ ಮತ್ತು ಹುಲಗೂರ ರೈಲ್ವೆ ಕ್ರಾಸಿಂಗ್ ಕಾಮಗಾರಿಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಮಾತು

ಹುಬ್ಬಳ್ಳಿ:'ಅಮೃತ್ ಭಾರತ್ ಸ್ಟೇಷನ್ ಯೋಜನೆ'ಯಡಿ ದೇಶಾದ್ಯಂತ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು 1,500 ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ. ಇದೇ ಯೋಜನೆಯಡಿ ಧಾರವಾಡ ಲೋಕಸಭಾ ಕ್ಷೇತ್ರದ ಅಣ್ಣಿಗೇರಿ, ನವಲಗುಂದ ಗೇಟ್ ಲೆವೆಲ್ ಕ್ರಾಸಿಂಗ್ 18 ಹಾಗೂ ಹುಲಗೂರ ಲೆವೆಲ್ ಕ್ರಾಸಿಂಗ್ 267 ಮತ್ತು 266ರಲ್ಲಿಯೂ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸಲು ಶ್ರಮ: ದೇಶ ಎಂದರೆ ರಾಜಧಾನಿ ಅಥವಾ ಮೆಟ್ರೋ ನಗರಗಳಷ್ಟೇ ಅಲ್ಲ. ದೇಶದ ಮೂಲೆ ಮೂಲೆಗೂ ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ಇಂದಿನ ಉದ್ಘಾಟನೆ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಸಮಗ್ರ ಅಭಿವೃದ್ಧಿಯಿಂದ ಮಾತ್ರ ದೇಶದ ವಿಕಾಸ ಸಾಧ್ಯವೆಂದು ನಂಬಿರುವ ಪ್ರಧಾನಿ ಮೋದೀಜಿ, ಕಳೆದ ಹತ್ತು ವರ್ಷಗಳಿಂದ ಭಾರತೀಯರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ಧಾರವಾಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ಹಾಗೂ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಸಹಕರಿಸಿದ್ದಾರೆ. ಇವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಕಳಸಾ-ಬಂಡೂರಿ ಇಸಿ ವಿನಾಯಿತಿ ಸಿಕ್ಕಿದೆ: ಕಳಸಾ-ಬಂಡೂರಿ ಯೋಜನೆಗೆ ಪರಿಸರ ಇಲಾಖೆಯಿಂದ ವಿನಾಯಿತಿ ಸಿಕ್ಕಿದೆ. ಆದರೆ, ಅರಣ್ಯ ಇಲಾಖೆ ಮತ್ತು ವೈಲ್ಡ್ ಲೈಫ್ ಬೋರ್ಡ್ ಕ್ಲಿಯರೆನ್ಸ್ ಸಿಗಬೇಕಿದೆ ಅಷ್ಟೇ. ನಾವು ಆ ಪ್ರಯತ್ನವನ್ನೂ ಮಾಡುತ್ತಿದ್ದೇವೆ. ಆದರೆ, ಕಾಂಗ್ರೆಸ್​ನವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಗೋವಾಕ್ಕೆ ಹೋಗಿ ಕರ್ನಾಟಕಕ್ಕೆ ಹನಿ ನೀರೂ ಕೊಡಬೇಡಿ ಎಂದಿದ್ದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಖರ್ಗೆ ಅವರನ್ನು ಕರೆದುಕೊಂಡು ಹೋದರೂ ಸ್ಪಂದನೆ ಸಿಗಲಿಲ್ಲ. ಈಗ ನಮ್ಮ ಅವಧಿಯಲ್ಲಿ ಯೋಜನೆಗೆ ಇರುವ ಎಲ್ಲ ಅಡ್ಡಿ, ಆತಂಕಗಳನ್ನು ಪರಿಹರಿಸುತ್ತಿದ್ದೇವೆ ಎಂದು ಸಚಿವ ಜೋಶಿ ಹೇಳಿದರು.

ಕಳಸಾ-ಬಂಡೂರಿ ಯೋಜನೆಗೆ ಕಾಂಗ್ರೆಸ್‌ನಿಂದಲೇ ಅನ್ಯಾಯವಾಗಿದೆ. ನಮ್ಮ ಕುಡಿಯುವ ನೀರು ಕೊಟ್ಟು ಬಳಿಕ ಟ್ರಿಬ್ಯುನಲ್​ಗೆ ಕೊಡಿ ಎಂದು ಬೇಡಿಕೊಂಡರೂ ಕೇಳಲಿಲ್ಲ. ಟ್ರಿಬ್ಯುನಲ್​ಗೆ ಕೊಟ್ಟ ನಂತರವೂ ಹಲವಾರು ವರ್ಷಗಳ ಕಾಲ ಅದಕ್ಕೆ ಯಾವ ಸೌಲಭ್ಯವನ್ನೂ ಕಲ್ಪಿಸದೇ ಸತಾಯಿಸಿದವರು ಕಾಂಗ್ರೆಸ್‌ನವರು ಎಂದು ಆರೋಪಿಸಿದರು. ಆದರೆ ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ಪ್ರಧಾನಿ‌ ಮೋದಿಯವರಿಂದಲೇ ಸಾಧ್ಯ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ

ರಾಯಚೂರು ನಗರದ ರೈಲ್ವೇ ನಿಲ್ದಾಣದಲ್ಲಿ ಆಯೋಜನೆ ಮಾಡಲಾದ ಕಾರ್ಯಕ್ರಮವನ್ನು ಸಂಸದ ರಾಜಾಅಮರೇಶ್ವರ ನಾಯಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಯಚೂರು ನಿಲ್ದಾಣಕ್ಕೆ 21 ಕೋಟಿ ರೂಪಾಯಿ ಹಾಗೂ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ 17 ಕೋಟಿ 30 ಲಕ್ಷ ರೂಪಾಯಿ ಅನುದಾನದಲ್ಲಿ ಮೂಲಸೌಲಭ್ಯಗಳೂ ಸೇರಿದಂತೆ ಎಕ್ಸಲೇಟರ್, ಲಿಫ್ಟರ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ರೂಪಿಸುವ ಮೂಲಕ ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಿಸುವ ಕೆಲಸವಾಗುತ್ತಿದೆ ಎಂದರು.

ಈ ಕಾರ್ಯಕ್ರಮಕ್ಕೆ ಮುನ್ನ ಸುರಪುರ ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯಕ ನಿಧನಕ್ಕೆ ಎರಡು ನಿಮಿಷ ಮೌನಾಚಾರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.

ಇದನ್ನೂ ಓದಿ:ಬೆಂಗಳೂರು: 554 ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ

ABOUT THE AUTHOR

...view details