ಧಾರವಾಡ: "ರಾಮಮಂದಿರಕ್ಕಾಗಿ ಹೋರಾಟ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಗೊಂದಲದಲ್ಲೇ ಇದೆ. ಅವರಿಗೆ ಸ್ಪಷ್ಟತೆ ಇಲ್ಲ. ದೇಶದ ಹಾಗೂ ಸಮಾಜದ ಹಿತಕ್ಕಿಂತ ವೋಟ್ ಬ್ಯಾಂಕ್ ರಾಜಕೀಯದ ಬಗ್ಗೆ ಅವರು ವಿಚಾರ ಮಾಡುತ್ತಾರೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನ ಪ್ರಾಣ ಪ್ರತಿಷ್ಠಾಪನೆ ದಿನ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಎಂಬ ಆಗ್ರಹ ಬಿಜೆಪಿ ನಾಯಕರಿಂದ ಕೇಳಿಬರುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.
"ಅವರದ್ದು ಕನ್ಫ್ಯೂಸ್ಡ್ ಲೀಡರ್ ವಿತ್ ಎ ಕನ್ಫ್ಯೂಸ್ಡ್ ಪಾರ್ಟಿಯಾಗಿದೆ. ಸಿಎಂ ಸಿದ್ದರಾಮಯ್ಯ ನವರು ನಾಳೆ ಸಾರ್ವತ್ರಿಕ ರಜೆ ಘೋಷಣೆ ಬಗ್ಗೆ ರಾಹುಲ್ ಗಾಂಧಿ ಅವರನ್ನ ಕೇಳಿದ್ದಾರೆ. ರಾಹುಲ್ ಗಾಂಧಿ ನಾಳೆ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ವಿಚಾರ ಮಾಡಿ ನಿರ್ಣಯ ಕೊಡಬಹುದು. ಆಗ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಷ್ಟೊತ್ತಿಗೆ ಕಾರ್ಯಕ್ರಮ ಮುಗಿದು ಹೋಗಿರುತ್ತದೆ. ಈ ರೀತಿ ಗೊಂದಲದ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ. ದೇಶದಲ್ಲಿ ಅವರದ್ದು ಮೂರು ಕಡೆ ಸರ್ಕಾರ ಇದೆ. ಅಲ್ಲಿಯೂ ಕೂಡಾ ಬರುವ ದಿನದಲ್ಲಿ ಇರಲ್ಲ, ರಾಮನ ಶಾಪ ಅವರಿಗೆ ತಟ್ಟುತ್ತದೆ" ಎಂದರು.
"ಈಗ ಅವರಿಗೆ ರಾಮ ಕನಸಲ್ಲಿ ಬಂದಿದ್ದ ಎನ್ನುವುದೇ ಅದ್ಭುತ ಸಂಗತಿ. ಕನಸಲ್ಲಿ ರಾಮ ಬಂದು ಕಾಂಗ್ರೆಸ್ಸಿಗರಿಗೆ ಸದ್ಬುದ್ಧಿ ಬರಲಿ ಎಂದು ಹೇಳಿರಬೇಕು. ರಾಮನ ಪ್ರಾಣ ಪ್ರತಿಷ್ಠಾಪನೆಗೆ ಇಡೀ ಜಗತ್ತಿನಲ್ಲಿ ಎಲ್ಲರೂ ಸಂತೋಷ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ನವರಿಗೆ ರಾಮ ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು. ಅದನ್ನು ಅವರು ಹೇಗೆ ಹೇಳ್ತಾರೆ, ರಾಮನಿಗೂ ಮೋಸ ಮಾಡುವವರು ಇವರು. ಅವರಿಗೆ ರಾಮನೇ ಸದ್ಬುದ್ಧಿ ಕೊಡಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದರು.