ಕರ್ನಾಟಕ

karnataka

ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು: ಮುಖ್ಯಮಂತ್ರಿ ಚಂದ್ರು

By ETV Bharat Karnataka Team

Published : Mar 12, 2024, 1:03 PM IST

ಸಂಸದ ಅನಂತ ಕುಮಾರ್​ ಹೆಗಡೆ ವಿರುದ್ಧ ರಾಜ್ಯ ಸರ್ಕಾರ ಸ್ವಯಂ ಪ್ರೇರಿತ ದೂರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು

ಬೆಂಗಳೂರು:ಭಾರತದ ಪ್ರಜಾಪ್ರಭುತ್ವವನ್ನು ಕಾಪಿಟ್ಟುಕೊಂಡು ಬಂದಿರುವ ಸಂವಿಧಾನವನ್ನು ಬದಲಿಸುತ್ತೇವೆ ಎನ್ನುವುದು ದೇಶದ್ರೋಹದ ಹೇಳಿಕೆಯಾಗಿದೆ. ಪದೇ ಪದೇ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್​ ಹೆಗಡೆ ವಿರುದ್ಧ ರಾಜ್ಯ ಸರ್ಕಾರ ಸ್ವಯಂ ಪ್ರೇರಿತ ದೂರು (ಸುಮೊಟೊ) ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ 'ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸೀಟು ಗೆಲ್ಲಬೇಕು. ರಾಜ್ಯಸಭೆಯಲ್ಲೂ ನಮಗೆ ಬಹುಮತ ಸಿಕ್ಕದರೆ ಸಂವಿಧಾನ ತಿದ್ದುಪಡಿ ಮಾಡಲಾಗುತ್ತದೆ. ಆಗ ಇದೆ ನೋಡಿ ನಿಜವಾದ ಮಾರಿ ಹಬ್ಬ ಎಂದು ಅನಂತ್ ಕುಮಾರ್ ಹೇಳಿಕೆ ನೀಡಿರುವ ವಿಚಾರವಾಗಿ ಚಂದ್ರು ಪ್ರತಿಕ್ರಿಯಿಸಿದರು.

'ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜನತೆ ಬಿಜೆಪಿಯನ್ನು ಅಧಿಕಾರದಿಂದ ಹೊರಗೆ ದಬ್ಬಿದ್ದಾರೆ. ಇದೀಗ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಹೊತ್ತಿರುವ ರಾಜ್ಯ ಸರ್ಕಾರ ಅನಂತ ಕುಮಾರ್​ರಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಗಟ್ಟಿಗುಂಡಿಗೆಯ ನಿರ್ಧಾರಗಳನ್ನು ಕೈಗೊಳ್ಳಬೇಕು. ಎಲ್ಲ ವಿಚಾರಕ್ಕೂ ಹೆದರಿಕೊಂಡು ಕುಳಿತುಕೊಳ್ಳುವುದು ತಮ್ಮ ಹುದ್ದೆಗೆ ಶೋಭೆಯಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಅನಂತ್​ ಕುಮಾರ್​ರ ಸಂವಿಧಾನ ತಿದ್ದುಪಡಿಯ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಅದು ಕೇವಲ ಅನಂತಕುಮಾರ್‌ ಹೆಗಡೆ ಅವರ ವೈಯಕ್ತಿಕ ಹೇಳಿಕೆ ಅಲ್ಲ. ಬಿಜೆಪಿ ಮತ್ತು ಆರ್‌ಎಸ್ಎಸ್‌ನ ಮೂಲ ಉದ್ದೇಶವೇ ಸಂವಿಧಾನ ಬದಲಿಸುವುದಾಗಿದೆ. ಪ್ರಜಾಪ್ರಭುತ್ವವನ್ನು ಹದ್ದುಬಸ್ತಿನಲ್ಲಿಟ್ಟು ಸರ್ವಾಧಿಕಾರವನ್ನು ಹೇರುವುದಾಗಿದೆ. ಉಳ್ಳವರು ಬಡವರನ್ನು ಗುಲಾಮಗಿರಿ ತಳ್ಳುವ ವ್ಯವಸ್ಥಿತ ಕುತಂತ್ರವಾಗಿದೆ. ನಮ್ಮ ದೇಶದಲ್ಲಿ ಉತ್ತರ ಕೋರಿಯಾ, ರಷ್ಯಾ, ಚೀನಾದಂತಹ ಆಡಳಿತ ಹೇರುವ ಪ್ರಯತ್ನ ನಡೆದಿದೆ. ಪ್ರಜೆಗಳು ಎಚ್ಚೆತ್ತುಕೊಳ್ಳದಿದ್ದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳಲಿದ್ದಾರೆ. ಒಬಿಸಿ, ಎಸ್‌ಸಿ, ಎಸ್‌ಟಿ, ದಲಿತರು, ಬುಡಕಟ್ಟು ಜನಾಂಗದವರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಆರ್‌ಎಸ್ಎಸ್‌ನವರ ಕಾಲಾಳುಗಳಾಗುತ್ತಾರೆ' ಎಂದು ಎಚ್ಚರಿಸಿದ್ದಾರೆ.

ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ತಳ್ಳಿ ಹಾಕುತ್ತಿರುವುದು ನ್ಯಾಯವಾದ ನಡೆಯಲ್ಲ. ಬಿಜೆಪಿಗೆ ಸಂವಿಧಾನದ ಮೇಲೆ ನಿಜಕ್ಕೂ ಗೌರವ ಇದ್ದರೆ ಅನಂತ್‌ ಕುಮಾರ್​ ಹೆಗಡೆಗೆ ಟಿಕೆಟ್​ ನೀಡಬಾರದು. ಆತನನ್ನು ಪಕ್ಷದಿಂದ ಶಾಶ್ವತವಾಗಿ ಉಚ್ಛಾಟನೆ ಮಾಡಬೇಕು. ಇಲ್ಲದಿದ್ದರೆ ಅನಂತ್​ ಕುಮಾರ್‌ ಹೇಳಿಕೆಯು ಪಕ್ಷದ ಅಧಿಕೃತ ಹೇಳಿಕೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ನವರು ಮೂಲಭೂತವಾಗಿ ಸಂವಿಧಾನ ತಿರುಚಿದ್ದಾರೆ: ಅನಂತ್​ಕುಮಾರ್​ ಹೆಗಡೆ

ABOUT THE AUTHOR

...view details