ಕರ್ನಾಟಕ

karnataka

ಬಿಜೆಪಿ ಹಿರಿಯರು, ಸ್ನೇಹಿತರು ನನ್ನನ್ನು ಸಂಪರ್ಕಿಸುತ್ತಿದ್ದಾರೆ: ಲಕ್ಷ್ಮಣ್ ಸವದಿ

By ETV Bharat Karnataka Team

Published : Jan 26, 2024, 3:44 PM IST

Updated : Jan 26, 2024, 3:57 PM IST

ಜಗದೀಶ್​ ಶೆಟ್ಟರ್ ಬಿಜೆಪಿ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.

mla-laxman-savadi-reaction-on-bjp-leaders-contacting-him-for-rejoining-bjp
ಮತ್ತೆ ಪಕ್ಷ ಬರುವಂತೆ ಬಿಜೆಪಿ ಹಿರಿಯರು, ಸ್ನೇಹಿತರು ನನ್ನನ್ನು ಸಂಪರ್ಕಿಸುತ್ತಿದ್ದಾರೆ: ಲಕ್ಷ್ಮಣ್ ಸವದಿ

ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ

ಚಿಕ್ಕೋಡಿ(ಬೆಳಗಾವಿ): "ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾಗಿರುವುದು ಅನಿರೀಕ್ಷಿತ ಬೆಳವಣಿಗೆ" ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಅಥಣಿ ಪಟ್ಟಣದಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಎರಡೇ ದಿನಗಳಲ್ಲಿ ಚಟುವಟಿಕೆ ಪ್ರಾರಂಭವಾಗಿತ್ತು, ನಿನ್ನೆ ದೆಹಲಿಗೆ ಹೋಗಿ ಬಿಜೆಪಿ ಸೇರ್ಪಡೆ ಆಗಿದ್ದಾರೆ. ನಾನು ಕೂಡಾ ಮಾಧ್ಯಮಗಳಲ್ಲಿ ನೋಡಿದೆ. ಇದೊಂದು ಅನಿರೀಕ್ಷಿತ ಬೆಳವಣಿಗೆ" ಎಂದರು.

ಜಗದೀಶ್​ ಶೆಟ್ಟರ್​ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಪಕ್ಷ ಮಾಡಬೇಕಾಗಿತ್ತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಎಂ ಅವರಿಗೆ ಸಂಪೂರ್ಣ ಮಾಹಿತಿ ಇರಬಹುದು. ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಶೆಟ್ಟರ್ ಸಿಎಂಗೆ ತಿಳಿಸಿದ್ದರು ಎಂಬ ಸಿಎಂ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಜಗದೀಶ್​ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶೆಟ್ಟರ್ ಹೋಗಿದ್ದರಿಂದ ಲೋಕಸಭಾ ಚುನಾವಣೆ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ. ಶೆಟ್ಟರ್ ಬದಲಿಗೆ ಬಿಜೆಪಿಯಿಂದ ಬರುತ್ತಾರೆ ಕಾದು ನೋಡಿ" ಎಂದು ಸವದಿ ಹೇಳಿದರು.

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ: "ಶೆಟ್ಟರ್ ಕಾಂಗ್ರೆಸ್​ ಪಕ್ಷವನ್ನು ಬಿಡುವುದರ ಬಗ್ಗೆ ನನಗೆ ಏನು ಹೇಳಿಲ್ಲ. ಯಾವುದೇ ಚರ್ಚೆಯನ್ನೂ ಕೂಡಾ ಮಾಡಿಲ್ಲ. ನಾನು ಮೊದಲು ಕಾಂಗ್ರೆಸ್ ಸೇರಿದ ಬಳಿಕ ಶೆಟ್ಟರ್ ಪಕ್ಷಕ್ಕೆ ಬಂದಿದ್ದು, ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು. "ಬಿಜೆಪಿಯ ಹಿರಿಯ ಮುಖಂಡರು ಮರಳಿ ಪಕ್ಷಕ್ಕೆ ಬರುವಂತೆ ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಇಪ್ಪತ್ತೈದು ವರ್ಷಗಳಿಂದ ಆ ಪಕ್ಷದಲ್ಲಿ ಇದ್ದೆ, ಒಳ್ಳೆಯ ಸ್ನೇಹಿತರು ಇದ್ದಾರೆ ಸಹಜವಾಗಿ ನನ್ನ ಸಂಪರ್ಕ ಮಾಡುತ್ತಿದ್ದಾರೆ. ಬಿಜೆಪಿಗೆ ಮರು ಸೇರ್ಪಡೆಯಾಗುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಾಗಿರುವುದು ನಾನು. ಬಿಜೆಪಿಯಲ್ಲಿರುವ ಹಿರಿಯರು, ನನ್ನ ಸ್ನೇಹಿತರು ನನ್ನನ್ನು ಸಂಪರ್ಕಿಸುತ್ತಿದ್ದಾರೆ" ಎಂದು ಇದೇ ವೇಳೆ ಅವರು ಹೇಳಿದರು.

ನಾನು, ನನ್ನ ಕುಟುಂಬದ ಯಾರೂ ಎಂಪಿ ಎಲೆಕ್ಷನ್​ಗೆ ಸ್ಪರ್ಧೆ ಮಾಡುವುದಿಲ್ಲ: "ಯಾರು ಸಂಪರ್ಕ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗವಾಗಿ, ಸಾರ್ವಜನಿಕವಾಗಿ ನಾನು ಹೇಳುವುದಿಲ್ಲ. ಬಿಜೆಪಿ ನಾಯಕರು ಮತ್ತೆ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಇನ್ನು ನಾನು ಮತ್ತು ನನ್ನ ಕುಟುಂಬದ ಯಾರೊಬ್ಬರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ" ಎಂದು ಹೇಳಿದರು

ಇದನ್ನೂ ಓದಿ:ಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ನೀಡಿದ್ದ ರಾಜೀನಾಮೆ ಅಂಗೀಕಾರ

Last Updated : Jan 26, 2024, 3:57 PM IST

ABOUT THE AUTHOR

...view details