ಹಾವೇರಿ:ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಎಸ್ಐಟಿ ಮಾಡುತ್ತಿದೆ. ವರದಿ ಬಂದ ಮೇಲೆ ನೋಡೋಣ. ಈಗ ಯಾರ ಮೇಲೂ ಆರೋಪ ಮಾಡಿ ಏನೂ ಪ್ರಯೋಜನವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಇದನ್ನು ಎಲ್ಲರೂ ಖಂಡಿಸಿದ್ದಾರೆ. ನಾವೂ ಖಂಡಿಸುತ್ತೇವೆ. ಸತ್ಯಾಸತ್ಯತೆ ಹೊರಗೆ ಬರಬೇಕು ಎಂದರೆ ತನಿಖೆ ಪೂರ್ಣಗೊಳ್ಳಬೇಕು ಎಂದು ಹೇಳಿದರು.
ಈ ಪ್ರಕರಣದಲ್ಲಿ ರಾಜಕೀಯ ನಾವು ಮಾಡಬಹುದಿತ್ತು. ಆದರೆ ನಮಗೆ ಅವಶ್ಯಕತೆ ಇಲ್ಲ. ನಾವೇನಿದ್ದರೂ ಅಭಿವೃದ್ಧಿ ಮೇಲೆ ಮತ ಕೇಳುತ್ತೇವೆ. ಬಿಜೆಪಿಗರು ಅವರಿಗೇ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನ ಇರುತ್ತಾರೆ. ಅವರು ಹಾಸನ ಪ್ರಕರಣದ ಬಗ್ಗೆ ಉತ್ತರ ಕೋಡಬೇಕು ಎಂದು ಒತ್ತಾಯಿಸಿದರು.
ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ರಾಜ್ಯ ಸರ್ಕಾರ ಸಿಲುಕಿಸಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ನಾವ್ಯಾಕೆ ಸಿಲುಕಿಸುತ್ತೇವೆ?. ಯಾರು ಮಾಡಿದ್ದಾರೆ, ಯಾರು ಮಾಡಿಸಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಗೆ ಬರುತ್ತದೆ. ಬೇರೆ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಒತ್ತಾಯಿಸಿರಲಿಲ್ಲ. ಹಾಗಾಗಿ ಎಸ್ಐಟಿ ತನಿಖೆಗೆ ಕೊಟ್ಟಿರಲಿಲ್ಲ. ಈ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಒತ್ತಾಯಿಸಿದ್ದಾರೆ, ಅದಕ್ಕೆ ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಪ್ರಕರಣದ ತನಿಖೆ ಮಾಡಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.