ಕರ್ನಾಟಕ

karnataka

ಕರ್ನಾಟಕದ ಕಾಂಗ್ರೆಸ್ ಮತ್ತು ತಮಿಳುನಾಡಿನ ಡಿಎಂಕೆ ಒಂದೇ ನಾಣ್ಯದ ಎರಡು ಮುಖಗಳು: ಅಣ್ಣಾಮಲೈ - Annamalai Campaign

By ETV Bharat Karnataka Team

Published : Apr 22, 2024, 3:35 PM IST

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ರೋಡ್‌ ಶೋ ನಡೆಸಿದರು.

Tamil Nadu BJP state president Annamalai conducted the road show
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರೋಡ್ ಶೋ ನಡೆಸಿದರು.

ಬೆಂಗಳೂರು:ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರ, ತಮಿಳುನಾಡಿನ ಡಿಎಂಕೆ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸಮಾಜಘಾತುಕ ಶಕ್ತಿಗಳನ್ನು ಪೋಷಿಸುವುದು ಈ ಪಕ್ಷಗಳ ಕಾರ್ಯಸೂಚಿ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ‌.

ಅಣ್ಣಾಮಲೈ ಅವರಿಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಜಯನಗರ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಈ ಬಾರಿ ಹೊಸ ಅಲೆ ಸೃಷ್ಟಿಯಾಗಿದೆ. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ನನ್ನ ಸಹೋದರ ತೇಜಸ್ವಿ ಸೂರ್ಯರನ್ನು ಗೆಲ್ಲಿಸಿ':ಅಭ್ಯರ್ಥಿ ತೇಜಸ್ವಿ ಸೂರ್ಯ ಚಿಕ್ಕ ವಯಸ್ಸಿನಲ್ಲೇ ಸಂಸದರಾಗಿ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿಯೂ ಯುವಶಕ್ತಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಸೂರ್ಯ ಅವರ ಕಾರ್ಯವೈಖರಿಯಿಂದ ಅತ್ಯುತ್ತಮ ಯುವ ಸಂಸದ ಗೌರವ ಸಿಕ್ಕಿದೆ. ಇಂತಹವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿರುವುದರಿಂದ ಬೆಂಗಳೂರಿಗೆ ಅನೇಕ ಯೋಜನೆಗಳು ಬರಲು ಸಾಧ್ಯವಾಗಿದೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತೇಜಸ್ವಿ ಸೂರ್ಯಗೆ ಅನೇಕ ಕನಸುಗಳಿವೆ. ನನ್ನ ಸಹೋದರ ತೇಜಸ್ವಿಯನ್ನು ಅಧಿಕ ಮತಗಳ ಅಂತರದಿಂದ ಮತ್ತೊಮ್ಮೆ ಗೆಲ್ಲಿಸಿ, ಆಶೀರ್ವದಿಸಿ ಎಂದು ಅವರು ಮನವಿ ಮಾಡಿದರು.

ತೇಜಸ್ವಿ ಸೂರ್ಯ ಮಾತನಾಡಿ, ನವಭಾರತದ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಬಹುದೊಡ್ಡದು. ಅದರಂತೆ ಪ್ರಧಾನಿ ನರೇಂದ್ರ ಮೋದಿಯವರು ಯುವ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ರಕ್ಷಣಾ ಪಡೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಸರ್ಕಾರದ ಪ್ರೋತ್ಸಾಹದಿಂದ ಯುವಜನರಲ್ಲಿ ಕ್ರೀಡಾಸಕ್ತಿ ಹೆಚ್ಚುತ್ತಿದೆ. ಈ ಮೂಲಕ ವಿವಿಧ ವಲಯಗಳಲ್ಲಿ ತಮ್ಮ ಪ್ರತಿಭೆ, ಸಾಮರ್ಥ್ಯ ತೋರಲು ಸಾಧ್ಯವಾಗಿದೆ ಎಂದರು.

ದಕ್ಷ ಪೊಲೀಸ್‌ ಅಧಿಕಾರಿಯಾಗಿ ಅಣ್ಣಾಮಲೈ ನಮ್ಮ ರಾಜ್ಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಜನರ ಪ್ರೀತಿ ಗಳಿಸಿದ್ದಾರೆ. ಇದೀಗ ರಾಜಕೀಯ ಪ್ರವೇಶಿಸಿ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎದುರಾಳಿ ಪಕ್ಷಗಳಿಗೆ ನಿದ್ದೆಗೆಡಿಸಿದ್ದಾರೆ. ಯುವ ಪ್ರತಿಭೆಗೆ ಬಿಜೆಪಿ ತಮಿಳುನಾಡಿನ ಸಾರಥ್ಯ ನೀಡಿದ್ದು, ರಾಜ್ಯದಲ್ಲಿ ಅಣ್ಣಾಮಲೈ ಪಕ್ಷವನ್ನು ಬಲಪಡಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂಓದಿ:ನಾಳೆ ಬೆಂಗಳೂರಿಗೆ ಅಮಿತ್ ಶಾ ಭೇಟಿ: ತೇಜಸ್ವಿ ಸೂರ್ಯ ಪರ ರೋಡ್ ಶೋ - Amit shah road show in Bengaluru

ABOUT THE AUTHOR

...view details