ಕರ್ನಾಟಕ

karnataka

ಪರಿಷತ್ ಬೈಎಲೆಕ್ಷನ್ ದಿನ ಬಜೆಟ್ ಮಂಡನೆಗೆ ಅವಕಾಶ ಬೇಡ: ಚು.ಆಯೋಗಕ್ಕೆ ಬಿಜೆಪಿ ದೂರು

By ETV Bharat Karnataka Team

Published : Jan 26, 2024, 1:58 PM IST

ವಿಧಾನ ಪರಿಷತ್​ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ದಿನವೇ ರಾಜ್ಯ ಸರ್ಕಾರ ಬಜೆಟ್​ ಮಂಡನೆಗೆ ಸಿದ್ಧವಾಗಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಬಿಜೆಪಿ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

Former DCM Ashwattha Narayana
ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ

ಬೆಂಗಳೂರು:ಪುಟ್ಟಣ್ಣ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್​ನ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ದಿನದಂದೇ ಬಜೆಟ್ ಮಂಡನೆಗೆ ಸಿದ್ಧವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜಭವನದ ಕದ ತಟ್ಟಿದ್ದ ರಾಜ್ಯ ಬಿಜೆಪಿ ನಾಯಕರು ಇದೀಗ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಬಜೆಟ್ ದಿನಾಂಕ ಮುಂದೂಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.

ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವದ ಬಿಜೆಪಿ ನಿಯೋಗ ಭೇಟಿ ನೀಡಿತು. ಕಾಂಗ್ರೆಸ್ ಸರ್ಕಾರದ ವಿರುದ್ಧ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿತು. ಉಪ ಚುನಾವಣೆ ನಡೆಯುವ ದಿನವೇ ಬಜೆಟ್ ಮಂಡನೆ ಮಾಡುವುದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಹಾಗಾಗಿ ಬಜೆಟ್ ದಿನಾಂಕವನ್ನು ಮುಂದೂಡಿಕೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿತು.

ಗಣರಾಜ್ಯೋತ್ಸವ ಆಚರಣೆ

ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ಮಾತನಾಡಿದ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ, "ಚುನಾವಣೆ ದಿನವೇ ಬಜೆಟ್ ಮಂಡನೆಗೆ ಕಾನೂನು ಪ್ರಕಾರ ಅವಕಾಶ ಇಲ್ಲ. ಮಾಡಲ್ ಕೋಡ್ ಆಫ್ ಕಂಡಕ್ಟ್​, ಎಲೆಕ್ಷನ್ ಕಮಿಷನ್ ನಿಯಮ ಹಾಗೂ ಪೀಪಲ್ ರೆಪ್ರೆಸೆಂಟೇಟಿವ್ ಆ್ಯಕ್ಟ್ ಪ್ರಕಾರ ಅದಕ್ಕೆ ಅವಕಾಶ ಇಲ್ಲ. ಈಗಾಗಲೇ ಈ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಈಗ ಚುನಾವಣಾ ಆಯೋಗದ ಆಯುಕ್ತರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಒಂದೆರಡು ದಿನದಲ್ಲಿ ಪರಿಶೀಲಿಸಿ, ಕ್ರಮದ ಕುರಿತು ತಿಳಿಸುತ್ತೇವೆ ಎಂದಿದ್ದಾರೆ" ಎಂದರು.

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಸೇರ್ಪಡೆ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ್, "ಶೆಟ್ಟರ್ ನಮ್ಮ ಹಿರಿಯ ನಾಯಕರು, ಎಲ್ಲರ ವಿಶ್ವಾಸ ಗಳಿಸಿಕೊಂಡಂತವರು. ಇಡೀ ದಕ್ಷಿಣ ಭಾರತದ ಜನಸಂಘದ ಪ್ರಥಮ ಶಾಸಕರು ಅವರ ಕುಟುಂಬದವರೇ. ಅವರ ಕಣಕಣದಲ್ಲೂ ಭಾರತೀಯ ಜನತಾ ಪಾರ್ಟಿ ಇದೆ. ಯಾವುದೋ ಒಂದು ವ್ಯತ್ಯಾಸದಲ್ಲಿ ನಮ್ಮ ಪಕ್ಷವನ್ನು ಬಿಟ್ಟು ಹೋಗಿದ್ದರು. ಯಾವದೋ ಕೆಟ್ಟಕಾಲದಲ್ಲಿ ಪಕ್ಷ ಬಿಟ್ಟು ಹೋದರು. ಮತ್ತೊಮ್ಮೆ ಮರಳಿ ಗೂಡಿಗೆ ಸೇರಿರುವ ಶೆಟ್ಟರ್​ ಅವರಿಗೆ ಸ್ವಾಗತ ಬಯಸುತ್ತೇವೆ. ಎಲ್ಲರಿಗೂ ಸಂತೋಷವಾಗಿದೆ" ಎಂದು ಹೇಳಿದರು.

"ಶೆಟ್ಟರ್ ಮರಳಿದ್ದರಿಂದ ಕರ್ನಾಟಕದಲ್ಲಿ ದೊಡ್ಡ ಶಕ್ತಿ ತುಂಬಿದಂತಾಗಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ದೊಡ್ಡ ಸಂಚಲನವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಸೀಟುಗಳನ್ನೂ ಗೆಲ್ಲುತ್ತೇವೆ. ಮತ್ತೊಮ್ಮೆ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು. ಕರ್ನಾಟಕ ಜನರ ಆಶಯ ಭಾರತೀಯರ ಆಶಯ ಖಂಡಿತಾ ಈಡೇರುತ್ತದೆ" ಎಂದು ತಿಳಿಸಿದರು.

"ಕಾಂಗ್ರೆಸ್ ಮುಳುಗುವಂತ ಪಕ್ಷ ಅದರಲ್ಲಿ ಯಾರು ಇರುವುದಕ್ಕೆ ಇಷ್ಟಪಡುತ್ತಾರೆ? ಅದರಲ್ಲಿ ಏನು ಭವಿಷ್ಯ ಇದೆ? ಏನಾದರೂ ಒಳ್ಳೆ ಆಡಳಿತ ಕೊಡಬೇಕು ಎನ್ನುವ ಉದ್ದೇಶ ಇದೆಯಾ? ಬೆಳಗ್ಗೆದ್ದರೆ ಸಾಕು ಬರೀ ಕೆಟ್ಟ ಸಂಸ್ಕೃತಿಯ ರಾಜಕೀಯ. ಆಡಳಿತಕ್ಕೆ ಬಂದವರು ಆಡಳಿತದ ಮೂಲಕ ತಮ್ಮ ಭಾಷೆಯನ್ನು ತೋರಬೇಕು. ಆದರೆ ಇದರಲ್ಲಿ ಆಡಳಿತ ಭಾಷೆ ಅನ್ನೋದೇ ಕಾಣಿಸಲ್ಲ. ಗುಣ ಮಟ್ಟದ ಶಿಕ್ಷಣ ಇಲ್ಲ, ಗುಣಮಟ್ಟದ ಆರೋಗ್ಯ ಇಲ್ಲ, ಗುಣಮಟ್ಟದ ಸೇವೆ ಇಲ್ಲ. ಬೆಳಗಾದರೆ ಸಾಕು ಬರೀ ರಾಜಕೀಯ ರಾಜಕೀಯ."

ಗಣರಾಜ್ಯೋತ್ಸವ ಆಚರಣೆ

"ಪ್ರಿಯಾಂಕ್ ಖರ್ಗೆ ರಾಮನ ನಂಬಲ್ಲ ಎನ್ನುತ್ತಾರೆ. ಅವರೆಲ್ಲಾ ಬರೀ ಒಲೈಕೆ ರಾಜಕಾರಣ ಮಾಡುತ್ತಾರೆ, ರಾಜಕೀಯ ಪ್ರೇರಿತವಾಗಿದ್ದಾರೆ. ಮಂತ್ರಿಗಳಾಗಿ ಜನರ ಭಾವನೆಗಳಿಗೆ ಧಕ್ಕೆ ತರುವಂತದ್ದು, ಅಗೌರವಿಸುವುದನ್ನು ಮಾಡುತ್ತಾರೆ. ಸಂವಿಧಾನ ಗೌರವಿಸುವ ವ್ಯಕ್ತಿ ಇನ್ನೊಬ್ಬರ ಭಾವನೆಗೆ ಧಕ್ಕೆ ತರುವಂತ ಕೆಲಸ ಮಾಡಲ್ಲ. ಅದರಲ್ಲಿ ವಿಶೇಷವಾಗಿ ಮುಖ್ಯಮಂತ್ರಿ, ಮಂತ್ರಿಯಾದವರು ಜನರ ಭಾವನೆಗೆ ಧಕ್ಕೆ ತರಬಾರದು. ಆದರೆ ಇವರು ಅದಕ್ಕೆ ವಿರುದ್ಧವಾಗಿದ್ದಾರೆ. ಜನರನ್ನು ಅಗೌರಿಸುವವರು ಸಂವಿಧಾನದಲ್ಲಿ ಮುಂದುವರಿಯಲು ಸಾಧ್ಯನಾ" ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು.

ಸರ್ಕಾರ ಬೀಳಿಸುವುದು ನಮ್ಮ ಉದ್ದೇಶವಲ್ಲ: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯಲ್ಲ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, "ಕಾಂಗ್ರೆಸ್ ಸರ್ಕಾರ ಬೀಳಿಸುವ ಯಾವುದೇ ಉದ್ದೇಶ ನಮ್ಮಲ್ಲಿ ಇಲ್ಲ. ಆದರೆ ನಾನು ಮುಖ್ಯಮಂತ್ರಿ, ನಾನು ಉಪಮುಖ್ಯಮಂತ್ರಿ ನೀನು ಯಾರು ಅಂತ ಕಾಂಗ್ರೆಸ್ ಪಕ್ಷದವರು ಬಾಕ್ಸಿಂಗ್ ಮಾಡುತ್ತಿದ್ದಾರೆ. ನಾವೇನು ಅವರ ಪಕ್ಷ ಹೊಡಿಬೇಕಾ? ನಾವು ಏನು ಮಾಡಬೇಕಾಗಿಲ್ಲ. ಎಲ್ಲವನ್ನೂ ಬಯಲಿಗೆ ಎಳೆದು ನಾವು ಮತ ಪಡೆದುಕೊಳ್ಳುತ್ತೇವೆ" ಎಂದರು.

"ಸಂವಿಧಾನ ಜಾರಿಗೆ ಬಂದ ಈ ದಿನದ ಮಹತ್ವವನ್ನೇ ಕಾಂಗ್ರೆಸ್​ನವರು ಅರ್ಥ ಮಾಡಿಕೊಂಡಿಲ್ಲ. ಏನೇನೋ ಮಾತನಾಡುವವರು ಕಾಂಗ್ರೆಸ್​ ಪಕ್ಷದಲ್ಲಿದ್ದಾರೆ.ಅದಕ್ಕಾಗಿ ಜನ ಸಂಪೂರ್ಣವಾಗಿ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಉಳಿಯಲ್ಲ. ಹಲವಾರು ಜನ ನಮ್ಮ ಪಕ್ಷಕ್ಕೆ ಸೇರುವವರಿದ್ದಾರೆ. ಸರ್ಕಾರ ಬೀಳಿಸುವುದು ನಮ್ಮ ಉದ್ದೇಶ ಅಲ್ಲ. ನಾವು ಪ್ರಜಾತಂತ್ರದಲ್ಲಿ ನಂಬಿಕೆ ಇರುವವರು. ಜನರು ಅವರಿಗೆ ಅವಕಾಶ ಕೊಟ್ಟಿದ್ದಾರೆ ಸರ್ಕಾರ ಮಾಡುತ್ತಿದ್ದಾರೆ. ನಾವೇನು ಅದಕ್ಕೆ ಅಡಚಣೆ ಮಾಡುತ್ತಿಲ್ಲ. ಅಗೌರವವಾಗಿ ರಾಜಕೀಯ ಪ್ರೇರೇಪಿತವಾಗಿ ರಾಜಕಾರಣ ಮಾಡಬೇಡಿ. ಸಂವಿಧಾನ ಗೌರವಿಸಿ ಸಂವಿಧಾನ ಪ್ರಕಾರ ಆಡಳಿತ ಮಾಡಿ ಅಂತ ಅಷ್ಟೆ ನಾವು ಹೇಳುವುದು. ನರೇಂದ್ರ ಮೋದಿ ಅವರನ್ನು ಪ್ರತಿಯೊಬ್ಬ ಭಾರತೀಯ ಪ್ರೀತಿಸುತ್ತಾನೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಾರೆ. 28ಕ್ಕೆ 28 ಸ್ಥಾನವನ್ನು ಕರ್ನಾಟಕದಲ್ಲಿ ನಾವು ಗೆಲ್ಲುತ್ತೇವೆ" ಎಂದರು.

ಗಣರಾಜ್ಯೋತ್ಸವ ಹಿನ್ನೆಲೆ ಅಶ್ವತ್ಥ ನಾರಾಯಣ ಧ್ವಜಾರೋಹಣ:75ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದ ಮುಂಭಾಗದಲ್ಲಿ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥನಾರಾಯಣ, "ಭಾರತದ ಸಮಸ್ತ ನಾಗರಿಕರಿಗೆ ಅವರ ಹಕ್ಕು ಮತ್ತು ಜವಾಬ್ದಾರಿ ಕೊಟ್ಟಂತಹ ಪವಿತ್ರ ಸಂವಿಧಾನ ನಮ್ಮದು. ಹಾಗಾಗಿ ಸಂವಿಧಾನ ಜಾರಿಗೆ ಬಂದಂತಹ ಈ ದಿನವನ್ನು ದೇಶದಾದ್ಯಂತ ಬಹಳಷ್ಟು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತಿದೆ. ಸಂವಿಧಾನ ಎಲ್ಲಾ ಧರ್ಮ ಗ್ರಂಥಗಳಿಗಿಂತ ಶ್ರೇಷ್ಠ. ಪ್ರತಿಯೊಬ್ಬರು ಪೂಜಿಸುವ ಸಂವಿಧಾನವೇ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ. ಇಡೀ ಸಮಾಜಕ್ಕೆ ಸಂವಿಧಾನದ ಹಕ್ಕು, ಸಮಾನತೆ ನೀಡಿದೆ. ಸಮಾಜದಲ್ಲಿ ಎಲ್ಲಾ ದೋಷಗಳು ಸಂವಿಧಾನದ ಮೂಲಕ ನಿವಾರಣೆ ಆಗಿದೆ" ಎಂದರು.

ಗಣರಾಜ್ಯೋತ್ಸವ ಆಚರಣೆ

ಮಾಜಿ ಸಚಿವ ಸುನಿಲ್ ಕುಮಾರ್ ಮಾತನಾಡಿ, "ನಮ್ಮೆಲ್ಲರ ಜವಾಬ್ದಾರಿಯನ್ನು ಮತ್ತೆ ಮತ್ತೆ ನೆನಪಿಸುವುದೇ ಗಣರಾಜ್ಯೋತ್ಸವ. ಸಾಮಾನ್ಯ ವ್ಯಕ್ತಿ ಕೂಡ ದೊಡ್ಡ ವ್ಯಕ್ತಿ ಆಗಬಹುದು ಅನ್ನುವುದನ್ನು ನಮ್ಮ ಪ್ರಜಾಪ್ರಭುತ್ವ ತೋರಿಸಿಕೊಟ್ಟಿದೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಅಂದರೆ ಅದು ಭಾರತ. ಎಲ್ಲಾ ಕಾಲದಲ್ಲಿ ಕೂಡ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ನಾವು, ನೀವೆಲ್ಲರೂ ಮಾಡಬೇಕು. ಪ್ರಜಾಪ್ರಭುತ್ವಕ್ಕೆ ಆತಂಕ ಬಂದಾಗ ಈ ದೇಶದ ಜನ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಹೋರಾಟ ಮಾಡಿದ್ದಾರೆ" ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ನಂದೀಶ್ ರೆಡ್ಡಿ ಸೇರಿ ಹಲವು ನಾಯಕರು ಭಾಗಿಯಾದರು.

ಇದನ್ನೂ ಓದಿ:ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆ: ಬೊಮ್ಮಾಯಿ ಹೇಳಿದ್ದೇನು?

ABOUT THE AUTHOR

...view details