ಕರ್ನಾಟಕ

karnataka

ಹಣಕ್ಕೆ ಬೇಡಿಕೆ ಇಟ್ಟು ಖಾಸಗಿ ಶಾಲೆಯ ಮಾಲೀಕನಿಗೆ ಬೆದರಿಕೆ ಆರೋಪ: ಓರ್ವ ಅರೆಸ್ಟ್

By ETV Bharat Karnataka Team

Published : Feb 19, 2024, 8:20 AM IST

ಖಾಸಗಿ ಶಾಲೆಯ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸಂಘಟನೆಯೊಂದರ ಅಧ್ಯಕ್ಷನನ್ನು ಪೊಲೀಸರು ಬಂಧಿಸಿದ್ದಾರೆ.

Davanagere
ದಾವಣಗೆರೆ

ದಾವಣಗೆರೆ: ಖಾಸಗಿ ಶಾಲೆಗೆ ನುಗ್ಗಿ ಹಣಕ್ಕೆ ಬೇಡಿಕೆ ಇಟ್ಟು ಅದೇ ಶಾಲೆಯ ಮಾಲೀಕನಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಹಿಂದೂ ಜನಜಾಗೃತಿ ಸಂಘಟನೆ ಅಧ್ಯಕ್ಷನನ್ನು ಪೋಲಿಸರು ಬಂಧಿಸಿದ್ದಾರೆ. ಹಿಂದೂ ಜನ ಜಾಗೃತಿ ಸೇನಾ ಸಮಿತಿ ಸಂಘಟನೆಯ ಅಧ್ಯಕ್ಷ ಚೇತನ್ ಬಂಧಿತ.

ಚೇತನ್ ತನ್ನ ಸಹಚರರೊಂದಿಗೆ ಸೇರಿಕೊಂಡು ದಾವಣಗೆರೆ ನಗರದ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ಸೈಯದ್ ಅಕ್ಬರ್ ಅಲಿ ಎಂಬುವರಿಗೆ ಸೇರಿದ ಸ್ಕೂಲ್​ಗೆ ತೆರಳಿ ಅನಧಿಕೃತವಾಗಿ ಕೈಗಾರಿಕಾ ಪ್ರದೇಶದಲ್ಲಿ ಶಾಲೆ ನಡೆಸುತ್ತಿದ್ದೀರಿ ಎಂದು ಬೆದರಿಕೆ ಹಾಕಿದ್ದಾನೆ. ಜೊತೆಗೆ ಶಾಲೆಯ ವಿರುದ್ಧ ಶಿಕ್ಷಣ ಇಲಾಖೆಗೆ ಸಲ್ಲಿಸಿದ ದೂರು ಹಿಂಪಡೆಯಬೇಕಾದರೆ 5 ಲಕ್ಷ ಹಣ ಕೊಡಿ ಎಂದು ಶಾಲೆಯ ಮಾಲೀಕನಿಗೆ ಬೇಡಿಕೆ ಇಟ್ಟಿದ್ದನ್ನು. ಹಣ ಕೊಡದಿದ್ದರೆ ಶಾಲೆ ಮುಚ್ಚಿಸುವ ಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲೆಯ ಮಾಲೀಕ ಸೈಯದ್ ಅಕ್ಬರ್ ಅಲಿಯಬೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ನೀಡಿದ್ದರು.‌ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಪ್ರಮುಖ ಆರೋಪಿಯಾದ ಚೇತನ್ (28) ಎಂಬುವರನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಅಂದು ಕೃತ್ಯಕ್ಕೆ ಬಳಕೆ ಮಾಡಿದ್ದ 15,000 ರೂ ಬೆಲೆ ಬಾಳುವ ಮೊಬೈಲ್, ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿ ಚೇತನ್ ಇದೇ ಪ್ರಕರಣದಂತೆ ಇತರ ಕಡೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಸ್ಫೋಟ: ವ್ಯಾಪಾರಿಗೆ ಗಾಯ, ದಂಪತಿ ವಶಕ್ಕೆ

ದಾವಣಗೆರೆಯಲ್ಲಿ ರೌಡಿ ಶೀಟರ್​ಗಳ ಪರೇಡ್:ನಗರ ದೇವತೆ ದುರ್ಗಾಂಬಿಕ ದೇವಿ ಜಾತ್ರೆ ಹಾಗೂ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಸ್ಪಿ ಉಮಾಪ್ರಶಾಂತ್ ಅವರು ಕೆಟಿಜೆ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ರೌಡಿ ಶೀಟರ್​​ಗಳ ಪರೇಡ್ ನಡೆಸಿದರು. ಪರೇಡ್ ಬಳಿಕ ಮಾತನಾಡಿದ ಅವರು ದಾವಣಗೆರೆ ಜಿಲ್ಲಾದ್ಯಂತ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ‌ಅಲ್ಲದೆ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಉತ್ತಮ ನಡವಳಿಕೆಗಳನ್ನು ಅಳವಡಿಸಿಕೊಂಡು ಸನ್ನಡೆತೆಯನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬದುಕು ರೂಪಿಸಿಕೊಳ್ಳಬೇಕೆಂಬ ಸಂದೇಶ ರವಾನಿಸಿದರು. ಈ ವೇಳೆ ದಾವಣಗೆರೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಮನಗರ: ಸುಗಂಧ ದ್ರವ್ಯ ಗೋದಾಮಿಗೆ ಬೆಂಕಿ ತಗುಲಿ ಮೂವರು ಸಜೀವ ದಹನ, ಐವರಿಗೆ ಗಾಯ

ABOUT THE AUTHOR

...view details