ಕರ್ನಾಟಕ

karnataka

ಕಸಕ್ಕೆ ಬೆಂಕಿ ಕೊಡಲು ಹೋದ ವೇಳೆ ಭಾರಿ ಅವಘಡ: ಬಂಟ್ವಾಳದಲ್ಲಿ ದಂಪತಿ ಸಜೀವದಹನ

By ETV Bharat Karnataka Team

Published : Jan 28, 2024, 4:55 PM IST

ಕಸಕ್ಕೆ ಬೆಂಕಿ ಕೊಡಲು ಹೋದ ದಂಪತಿ ಸಜೀವ ದಹನವಾಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

ದಂಪತಿ ಸಜೀವ ದಹನ
ದಂಪತಿ ಸಜೀವ ದಹನ

ಬಂಟ್ವಾಳ: ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಸಮೀಪದ ತುಂಡುಪದವು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದ ದುರ್ಘಟನೆಯೊಂದರಲ್ಲಿ ದಂಪತಿ ಬೆಂಕಿಗೆ ಆಹುತಿಯಾಗಿದ್ದಾರೆ. ಮನೆಯ ಹೊರಗೆ ಕಸಕಡ್ಡಿಗಳಿಗೆ ಬೆಂಕಿ ಹಚ್ಚಲು ಹೋಗಿ ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಗಿಲ್ಬರ್ಟ್ ಕಾರ್ಲೊ ಮತ್ತು ಕ್ರಿಸ್ಟೀನ್ ಕಾರ್ಲೊ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಡುಪದವು ಎಂಬಲ್ಲಿ ಗಿಲ್ಬರ್ಟ್ ಕಾರ್ಲೊ (78) ಮತ್ತು ಕ್ರಿಸ್ಟೀನ್ ಕಾರ್ಲೊ (70) ವಾಸವಾಗಿದ್ದು, ಅವರ ಮೂವರು ಹೆಣ್ಣುಮಕ್ಕಳಲ್ಲಿ ಇಬ್ಬರು ಹೊರದೇಶದಲ್ಲಿ ಹಾಗೂ ಒಬ್ಬರು ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಭಾನುವಾರ ಮಧ್ಯಾಹ್ನದ ವೇಳೆ ಮನೆ ಪಕ್ಕ ಕಸಕ್ಕೆ ಹಾಕಿದ ಬೆಂಕಿ ವ್ಯಾಪಿಸಿ ಈ ಅವಘಡ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನು ನಂದಿಸಲು ಹೋದ ಮಹಿಳೆ ಹಾಗೂ ಅವರನ್ನು ರಕ್ಷಿಸಲು ಹೋದ ಪತಿ ಇಬ್ಬರೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಅಕ್ಕಪಕ್ಕದಲ್ಲಿರುವ ಮನೆಯವರಿಗೆ ವಿಷಯ ಗೊತ್ತಾಗುವ ಮೊದಲೇ ಇಬ್ಬರೂ ಅಸುನೀಗಿದ್ದಾರೆ. ಕೂಡಲೇ ಅಗ್ನಿಶಾಮಕದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬೆಂಕಿಯನ್ನು ಸ್ಥಳೀಯರು ನಂದಿಸಿದ್ದು, ಆ ಹೊತ್ತಿಗಾಗಲೇ ಇಬ್ಬರೂ ಸಾವನ್ನಪ್ಪಿದ್ದರು. ಈ ಸಂಬಂಧ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಮನೆ ಮುಂದೆ ಸ್ನೇಹಿತನ ಹತ್ಯೆ, ಐವರು ಆರೋಪಿಗಳ ಬಂಧನ

ABOUT THE AUTHOR

...view details