ಕರ್ನಾಟಕ

karnataka

ನೈರುತ್ಯ ರೈಲ್ವೆ ಒಂದೇ ತಿಂಗಳಲ್ಲಿ 2ನೇ ಅತಿ ಹೆಚ್ಚು ಸರಕುಗಳನ್ನು ಲೋಡ್​ ಮಾಡಿ ಇತಿಹಾಸ ಸೃಷ್ಟಿಸಿದೆ: ಸಂಜೀವ್ ಕಿಶೋರ

By ETV Bharat Karnataka Team

Published : Jan 26, 2024, 11:03 PM IST

ಹುಬ್ಬಳ್ಳಿಯ ರೈಲ್ವೆ ಕ್ರೀಡಾಂಗಣದ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಹಿನ್ನೆಲೆ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಧ್ವಜಾರೋಹಣ ನೆರವೇರಿಸಿದರು.

75th-republic-day-celebration-in-at-railway-sports-ground-in-hubli
ನೈರುತ್ಯ ರೈಲ್ವೆ ಒಂದೇ ತಿಂಗಳಲ್ಲಿ 2ನೇ ಅತಿ ಹೆಚ್ಚು ಸರಕುಗಳನ್ನು ಲೋಡ್​ ಮಾಡಿ ಇತಿಹಾಸ ಸೃಷ್ಟಿಸಿದೆ: ಸಂಜೀವ್ ಕಿಶೋರ

ಹುಬ್ಬಳ್ಳಿ:ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಹುಬ್ಬಳ್ಳಿಯ ರೈಲ್ವೆ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನೈರುತ್ಯ ರೈಲ್ವೆಯು ದೇಶದ ಎಲ್ಲ ಭಾಗಗಳಿಗೆ ಪ್ರಯಾಣಿಕರನ್ನು ಸಾಗಿಸುವುದರ ಜೊತೆಗೆ ಕೈಗಾರಿಕೆಗಳಿಗೆ ಕಬ್ಬಿಣದ ಅದಿರು, ಉಕ್ಕು, ಕಲ್ಲಿದ್ದಲು ಮತ್ತು ಇತರ ಕಚ್ಚಾ ವಸ್ತುಗಳನ್ನು ಸಾಗಿಸುವ ಮೂಲಕ ಈ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

"ಈ ಹಣಕಾಸು ವರ್ಷದಲ್ಲಿ ಇದುವರೆಗೆ ಒಟ್ಟು ಮೂಲ ಆದಾಯ 6,480.05 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11.57% ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದ ಡಿಸೆಂಬರ್ ವರೆಗೆ ಸಾಗಿಸಲಾದ ಪ್ರಯಾಣಿಕರ ಸಂಖ್ಯೆ 111.51 ಮಿಲಿಯನ್ ನಿಂದ 122.78 ಮಿಲಿಯನ್​ಗೆ ಏರಿದೆ, ಅಂದರೆ 10.11% ಹೆಚ್ಚಳವಾಗಿದೆ. ನೈರುತ್ಯ ರೈಲ್ವೆಯು 2023-24ರ ಆರ್ಥಿಕ ವರ್ಷದಲ್ಲಿ 2024ರ ಜನವರಿ 23 ರವರೆಗೆ 39.64 ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿದ್ದು, ಇದು 8.8% ಹೆಚ್ಚಳವಾಗಿದೆ. ಡಿಸೆಂಬರ್ 2023 ರಲ್ಲಿ ನೈರುತ್ಯ ರೈಲ್ವೆ 4.68 ಮಿಲಿಯನ್ ಟನ್ ಮೂಲ ಸರಕುಗಳನ್ನು ಲೋಡ್ ಮಾಡಿದೆ. ನೈರುತ್ಯ ರೈಲ್ವೆಯ ಒಂದು ತಿಂಗಳಲ್ಲಿ ಎರಡನೇ ಅತಿ ಹೆಚ್ಚು ಲೋಡ್ ಮಾಡುವ ಮೂಲಕ ಇತಿಹಾಸದಲ್ಲಿ ನಿರ್ಮಿಸಿದೆ" ಎಂದು ತಿಳಿಸಿದರು.

"ನೈರುತ್ಯ ರೈಲ್ವೆಯ ಸುರಕ್ಷತಾ ದಾಖಲೆಯು ಭಾರತೀಯ ರೈಲ್ವೆಯಲ್ಲಿ ಅತ್ಯುತ್ತಮವಾಗಿದೆ. ಸಮಯ ಪಾಲನೆಯಲ್ಲಿ ನೈರುತ್ಯ ರೈಲ್ವೆ ಭಾರತೀಯ ರೈಲ್ವೆಯ ಎಲ್ಲಾ ವಲಯಗಳಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 16 ರಸ್ತೆ ಮೇಲ್ಸೇತುವೆಗಳು / ರಸ್ತೆ ಕೆಳ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ ಮತ್ತು 06 ಲೆವೆಲ್ ಕ್ರಾಸಿಂಗ್ ಗೇಟ್​​​ಗಳನ್ನು ಮುಚ್ಚಲಾಗಿದೆ" ಎಂದರು.

"ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಗಾಗಿ ನೈರುತ್ಯ ರೈಲ್ವೆ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. 2023ರಲ್ಲಿ 565 ಕಿಲೋವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಸ್ಥಾಪಿಸಲಾಗಿದ್ದು, ಇದು ವಲಯದ ಒಟ್ಟು ಸಾಮರ್ಥ್ಯವನ್ನು 5,550 ಕಿಲೋವ್ಯಾಟ್ ಹೆಚ್ಚಳವಾಗಿದೆ. 2023 ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ, 56 ರೈಲುಗಳಲ್ಲಿ ಹೆಚ್​ಒಜಿ ವ್ಯವಸ್ಥೆಯನ್ನು ಅಳವಡಿಸಿದ ಪರಿಣಾಮವಾಗಿ 54.19 ಕೋಟಿ ರೂ.ಗಳ ಮೌಲ್ಯದ 73.73 ಲಕ್ಷ ಲೀಟರ್ ಹೈಸ್ಪೀಡ್ ಡೀಸೆಲ್ ಉಳಿಸಲಾಗಿದೆ" ಎಂದು ಹೇಳಿದರು.

"ಪ್ರಯಾಣಿಕರ ಬೇಡಿಕೆಗಾಗಿ, 2023ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 319 ಫೆಸ್ಟಿವಲ್ ವಿಶೇಷ ಎಕ್ಸ್​ಪ್ರೆಸ್ ರೈಲುಗಳನ್ನು ಓಡಿಸಲಾಯಿತು, 05 ರೈಲುಗಳನ್ನು ವಿಸ್ತರಣೆ ಮಾಡಲಾಗಿದೆ. ರೈಲುಗಳಿಗೆ 2,439 ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ ಮತ್ತು 36 ರೈಲುಗಳ ವೇಗ ಹೆಚ್ಚಿಸುವ ಮೂಲಕ 610 ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸಿವೆ. ನೈಋತ್ಯ ರೈಲ್ವೆ ವತಿಯಿಂದ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯಾತ್ರೆ ಗಾಗಿ 10 ಟ್ರಿಪ್ ಸೇವೆ ಒದಗಿಸಿದೆ. ಜನ ಪ್ರತಿನಿಧಿಗಳಗಾಗಿ ಅಮೃತ್ ಕಲಶ ಯಾತ್ರೆಗೆ ಕರ್ನಾಟಕದಿಂದ 02 ವಿಶೇಷ ರೈಲುಗಳನ್ನು ಓಡಿಸಲಾಗಿದೆ" ಎಂದು ತಿಳಿಸಿದರು.

"ನಮ್ಮ ನೈರುತ್ಯ ವಲಯದ ಕ್ರೀಡಾ ಪಟುಗಳು ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಚೀನಾದ ಹ್ಯಾಂಗ್ ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಬೆಳ್ಳಿ ಪದಕ, ಫ್ರಾನ್ಸ್ ನಲ್ಲಿ ನಡೆದ ವಿಶ್ವ ರೈಲ್ವೆ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಮತ್ತು ತೈವಾನ್ ನಲ್ಲಿ ನಡೆದ ತೈವಾನ್ ಇಂಟರ್ ನ್ಯಾಷನಲ್ ಓಪನ್ ಸೈಕ್ಲಿಂಗ್ ಕಪ್ ನಲ್ಲಿ 2 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ" ಎಂದರು.

ಇದನ್ನೂ ಓದಿ:ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 1069.34 ಕೋಟಿ ಆದಾಯ ಗಳಿಕೆ: ಶಿಲ್ಪಿ ಅಗರ್ವಾಲ್

ABOUT THE AUTHOR

...view details