ಕರ್ನಾಟಕ

karnataka

ಅಪಘಾತ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೂವರು ದುರ್ಮರಣ, ಕನಕಪುರದಲ್ಲಿ ಇಬ್ಬರು ಸಾವು

By ETV Bharat Karnataka Team

Published : Feb 17, 2024, 10:33 AM IST

Updated : Feb 17, 2024, 12:22 PM IST

ರಾಮನಗರ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಐವರು ಸಾವನ್ನಪ್ಪಿದ್ದಾರೆ.

ಅಪಘಾತ
ಅಪಘಾತ

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತ

ರಾಮನಗರ:ರೇಷ್ಮೆ ‌ನಗರಿ‌ ರಾಮನಗರ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯ‌ಲ್ಲಿ ಲಾರಿಗೆ ಟಿಟಿ ವಾಹನ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮಲಿಂಗಪ್ಪ, ಸೋಮಣ್ಣ ಹಾಗೂ ರಾಜೇಶ್ವರಿ ಎಂಬುವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಟಿಟಿ ವಾಹನ ತೆರಳುತ್ತಿತ್ತು. ಟಿಟಿ ವಾಹನ ಚಾಲಕ ಅತಿಯಾದ ವೇಗದಿಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮೃತರು ಮೈಸೂರಿನ ಜಿಲ್ಲೆಗೆ ಸೇರಿದವರು ಎಂದು ತಿಳಿದು ಬಂದಿದೆ. ಭೀಕರ ಅಪಘಾತದಲ್ಲಿ ಟಿಟಿಯಲ್ಲಿದ್ದ ಐದಾರು ಮಂದಿಗೆ ಗಾಯಗಳಾಗಿವೆ. ಅವರನ್ನೆಲ್ಲ ಚನ್ನಪಟ್ಟಣ ಸಾರ್ವಜನಿಕ ‌ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚನ್ನಪಟ್ಟಣ ಸಂಚಾರಿ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನಕಪುರದ ಅಪಘಾತದಲ್ಲಿ ಇಬ್ಬರು ಸಾವು:ಮತ್ತೊಂದು ಕಡೆ, ಕಬ್ಬಿಣದ ಸರಳು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕನಕಪುರ – ಸಾತನೂರು ರಸ್ತೆ ಜಕ್ಕೇಗೌಡನ ಗ್ರಾಮದಲ್ಲಿ ನಡೆದಿದೆ. ಮೃತರು ಕೋಲ್ಕತ್ತಾ ಮೂಲದ ಕಾರ್ಮಿಕರು ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರ್ಮಿಕರು BWSSB ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿ ಮಾಡಲು ಬಂದಿದ್ದರು. ಇವರೆಲ್ಲ ಕನಕಪುರದಿಂದ ಜಕ್ಕೇಗೌಡನದೊಡ್ಡಿ ಕಡೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಇಬ್ಬರ ಮೇಲೆ ಕಬ್ಬಿಣದ ಸರಳುಗಳು ಬಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಸಾತನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಿವಮೊಗ್ಗ: ಹುಂಡೈ ಕಾರು ಶೋರೂಂಗೆ ಆಕಸ್ಮಿಕ ಬೆಂಕಿ - ಮೂರು ಸಂಪೂರ್ಣ, 7 ಕಾರುಗಳಿಗೆ ಭಾಗಶಃ ಹಾನಿ

ಇತ್ತೀಚೆಗೆ ಹೊಸಕೋಟೆಯಲ್ಲಿ ತಾಯಿ ಮಗಳ ಮೇಲೆ ಹರಿದ ಕ್ಯಾಂಟರ್: ಹೊಸಕೋಟೆ ನಗರದ ಕೋರ್ಟ್ ಸರ್ಕಲ್ ಬಳಿ ತಾಯಿ ಮಗಳ ಮೇಲೆ ಕ್ಯಾಂಟರ್ ಹರಿದ ಘಟನೆ ನಡೆದಿತ್ತು. ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು.

ಬನ್ನೇರುಘಟ್ಟ ಮೂಲದ ಯುವತಿ ಸುಧಾ (20) ಸ್ಥಳದಲ್ಲೇ ಸಾವನ್ನಪ್ಪಿದವರು. ಬೆಂಗಳೂರಿಂದ ಹೊಸಕೋಟೆ ಮೂಲಕ ಕೋಲಾರದ ಕಡೆಗೆ ಕ್ಯಾಂಟರ್ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್ ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಬೈಕ್ ಸವಾರ ನಜೀರ್ ಖಾನ್, ಕ್ಯಾಂಟರ್ ಚಾಲಕ ಶರೀಫ್​ ಉಲ್ಲಾಗೆ ಗಂಭೀರ ಗಾಯವಾಗಿದೆ. ಕೆಎಸ್ಆರ್​ಟಿಸಿ ಬಸ್​ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Last Updated : Feb 17, 2024, 12:22 PM IST

ABOUT THE AUTHOR

...view details