ಕರ್ನಾಟಕ

karnataka

ಮಯಾಂಕ್​ ಅಗರ್ವಾಲ್​ ಅಪಾಯದಿಂದ ಪಾರು, ಶೀಘ್ರವೇ ಬೆಂಗಳೂರಿಗೆ ರವಾನೆ: ಕೆಎಸ್​ಸಿಎ ಮಾಹಿತಿ

By ETV Bharat Karnataka Team

Published : Jan 31, 2024, 6:29 PM IST

ಅಸ್ವಸ್ಥರಾಗಿದ್ದ ಕ್ರಿಕೆಟಿಗ ಮಯಾಂಕ್​ ಅಗರ್ವಾಲ್​ ಚೇತರಿಸಿಕೊಂಡಿದ್ದು, ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.

ಮಯಾಂಕ್​ ಅಗರ್ವಾಲ್​
ಮಯಾಂಕ್​ ಅಗರ್ವಾಲ್​

ನವದೆಹಲಿ:ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ನೀರು ಎಂದು ಭಾವಿಸಿ ವಿಷಪೂರಿತ ದ್ರವ ಕುಡಿದು ಅಸ್ವಸ್ಥಗೊಂಡ ಕರ್ನಾಟಕದ ಕ್ರಿಕೆಟಿಗ ಮಯಾಂಕ್​ ಅಗರ್ವಾಲ್​ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಶೀಘ್ರವೇ ಬೆಂಗಳೂರಿಗೆ ಅವರನ್ನು ಕರೆತರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ.

ತ್ರಿಪುರಾದ ಅಗರ್ತಲಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಯಾಂಕ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೆಎಸ್​ಸಿಎ ಹಿರಿಯ ಅಧಿಕಾರಿಯೊಬ್ಬರು, ತ್ರಿಪುರಾದ ಆಸ್ಪತ್ರೆಯಲ್ಲಿ ಮಯಾಂಕ್​ಗೆ ಉತ್ತಮ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಫಿಟ್​ ಅಂಡ್​ ಫೈನ್​ ಆಗಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿನ ಫೋಟೋ ಬಿಡುಗಡೆ:ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖವಾಗುತ್ತಿರುವ ಮಯಾಂಕ್​ ಅಗರ್ವಾಲ್​ ಅವರು ಆಸ್ಪತ್ರೆಯಲ್ಲಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ. ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಮತ್ತೆ ಕ್ರಿಕೆಟ್​ಗೆ ಮರಳಲು ಪ್ರಯತ್ನಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಮತ್ತು ಎಕ್ಸ್​ ಖಾತೆಯಲ್ಲಿ ಅವರೇ ಮಾಹಿತಿ ನೀಡಿದ್ದಾರೆ.

ನಡೆದಿದ್ದೇನು?:ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ತ್ರಿಪುರಾ ವಿರುದ್ಧದ ಪಂದ್ಯದ ನಂತರ ತಮ್ಮ ತಂಡದೊಂದಿಗೆ ದೆಹಲಿಗೆ ವಿಮಾನವೇರಿದ್ದರು. ನೀರು ಎಂದುಕೊಂಡು ತಾನು ಕುಳಿತಿದ್ದ ಸೀಟಿನ ಎದುರಿನ ಪೌಚ್​ನಲ್ಲಿದ್ದ ದ್ರವ ಸೇವಿಸಿದ್ದಾರೆ. ತಕ್ಷಣವೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಸಹೋದ್ಯೋಗಿಗಳು ಸ್ಥಳೀಯ ಐಎಲ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಯಾಂಕ್ ಗಂಟಲಿನಲ್ಲಿ ಊತ ಮತ್ತು ಗುಳ್ಳೆಗಳಿರುವುದನ್ನು ಗಮನಿಸಿದ್ದಾರೆ. ಮಯಾಂಕ್​ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಾಲ್ಕು ಗಂಟೆಗೂ ಅಧಿಕ ಸಮಯ ಮಾತನಾಡಲು ಸಾಧ್ಯವಾಗದೇ ಒದ್ದಾಡಿದ್ದರು ಎಂದು ತಿಳಿದುಬಂದಿದೆ.

ಪ್ರಕರಣ ದಾಖಲು:ವಿಮಾನದಲ್ಲಿನ ಪೌಚ್​​ನಲ್ಲಿ ವಿಷಪೂರಿತ ದ್ರವ ಇಟ್ಟಿದ್ದರ ವಿರುದ್ಧ ದೂರು ನೀಡಲಾಗಿದೆ. ಘಟನೆಯನ್ನು ಸೂಕ್ತವಾಗಿ ತನಿಖೆ ಮಾಡಬೇಕು ಎಂದು ಕೋರಲಾಗಿದೆ. ಕರ್ನಾಟಕ ತಂಡದ ಮ್ಯಾನೇಜರ್ ಅಗರ್ವಾಲ್ ಪರವಾಗಿ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ತ್ರಿಪುರಾ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪಶ್ಚಿಮ ತ್ರಿಪುರಾ ಪೊಲೀಸ್ ಅಧೀಕ್ಷಕ ಕೆ.ಕಿರಣ್ ಕುಮಾರ್ ಅವರಿಗೆ ಲಿಖಿತ ದೂರು ಸಲ್ಲಿಸಲಾಗಿದೆ. ಅಗರ್ತಲಾದ ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಯಾಂಕ್ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕರಾಗಿದ್ದು, ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿದೆ. ಆ ಪಂದ್ಯದಲ್ಲಿ, ಮಯಾಂಕ್ ಎರಡು ಇನ್ನಿಂಗ್ಸ್‌ಗಳಲ್ಲಿ 51 ಮತ್ತು 17 ರನ್ ಗಳಿಸಿದ್ದರು. ಈ ಘಟನೆಯಿಂದಾಗಿ ಅವರು ಫೆಬ್ರವರಿ 2ರಂದು ಸೂರತ್‌ನಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಸದ್ಯ 4 ಪಂದ್ಯಗಳಲ್ಲಿ 2 ಗೆಲುವು, 1 ಡ್ರಾ ಹಾಗೂ 1 ಸೋಲಿನೊಂದಿಗೆ ಕರ್ನಾಟಕ ಸಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಮಯಾಂಕ್ ಅನುಪಸ್ಥಿತಿಯಲ್ಲಿ ಉಪನಾಯಕ ನಿಕಿನ್ ಜೋಸ್ ಮುಂದಿನ ಪಂದ್ಯಕ್ಕೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:ಕ್ರಿಕೆಟಿಗ ಮಯಾಂಕ್​ ಅಗರ್ವಾಲ್ ಆರೋಗ್ಯ ಸ್ಥಿರ; ಮುಂದುವರಿದ ಚಿಕಿತ್ಸೆ, ಪ್ರಕರಣ ದಾಖಲು

ABOUT THE AUTHOR

...view details