ಕರ್ನಾಟಕ

karnataka

ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಮೇಲೆ ಕಾಂಗ್ರೆಸ್ ಕಣ್ಣು: ಅತೃಪ್ತರನ್ನು ಸೆಳೆಯಲು ತೆರೆಮರೆಯಲ್ಲಿ ಸಿದ್ಧತೆ

By ETV Bharat Karnataka Team

Published : Jan 27, 2024, 9:57 PM IST

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲದೇ, ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರುವ, ಗೆಲುವಿಗೆ ನಿರ್ಣಾಯಕವಾದಂತಹ ಮತಗಳನ್ನು ಸೆಳೆಯಬಲ್ಲ ಸಾಮರ್ಥ್ಯ ಇರುವ ಮುಖಂಡರುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಕುರಿತಂತೆ ಆಪರೇಷನ್ ಹಸ್ತ ನಡೆಸಲು ವೇದಿಕೆ ಸಿದ್ಧವಾಗಿದೆ ಎಂದು ಪಕ್ಷದ ವಿವಿಧ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

BJP Congress
ಬಿಜೆಪಿ ಕಾಂಗ್ರೆಸ್​

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ಮತ್ತು ಅತೃಪ್ತರನ್ನು ಸೆಳೆಯಲು ಕಾಂಗ್ರೆಸ್ ಪಕ್ಷ ರಾಜಕೀಯ ಕಾರ್ಯತಂತ್ರ ರೂಪಿಸ ತೊಡಗಿದೆ. ಬಿಜೆಪಿ ಟಿಕೆಟ್ ಸಿಗುವುದು ಅನುಮಾನ ಇರುವ ಪ್ರಮುಖ ಮುಖಂಡರನ್ನು ಸಂಪರ್ಕಿಸಿ ಕಾಂಗ್ರೆಸ್​ಗೆ ಕರೆತರುವ ಪ್ರಯತ್ನ ಸದ್ದುಗದ್ದಲವಿಲ್ಲದೇ ನಡೆದಿದೆ.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲದೇ ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರುವಂತಹ, ಗೆಲುವಿಗೆ ನಿರ್ಣಾಯಕವಾದಂತಹ ಮತಗಳನ್ನು ಸೆಳೆಯಬಲ್ಲ ಸಾಮರ್ಥ್ಯ ಇರುವ ಮುಖಂಡರುಗಳನ್ನು ಸಹ ಪಕ್ಷಕ್ಕೆ ಕರೆತರುವ ಕುರಿತಂತೆ ಆಪರೇಷನ್ ಹಸ್ತ ನಡೆಸಲು ವೇದಿಕೆ ಸಿದ್ಧವಾಗಿದೆ. ಬಿಜೆಪಿ ಜೆಡಿಎಸ್ ಲೋಕಸಭೆ ಚುನಾವಣೆ ಪೂರ್ವ ಮೈತ್ರಿಯಿಂದಾಗಿ ಎರಡೂ ಪಕ್ಷಗಳ ಮುಖಂಡರುಗಳ ನಡುವೆ ಏರ್ಪರ್ಟ್ಟಿರುವ ಗೊಂದಲಗಳ ಲಾಭ ಪಡೆದು ಮೈತ್ರಿ ವಿದ್ಯಮಾನಗಳಿಂದ ಅಸಮಾಧಾನಗೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನೂ ಕಾಂಗ್ರೆಸ್​​​ಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಆಪ್ತರ ಮೂಲಕ ಬಿಜೆಪಿಯ ಹಲವಾರು ಮುಖಂಡರುಗಳನ್ನು ಸಂಪರ್ಕಿಸಿ ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಸೇರಲು ಆಫರ್ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್​ ಗಾಳ:ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಲೋಕಸಭೆ ಸದಸ್ಯೆ ಸುಮಲತ ಅಂಬರೀಶ್ ಅವರಿಗೆ ಕಾಂಗ್ರೆಸ್ ಮುಖಂಡರು ಗಾಳ ಹಾಕಿದ್ದಾರೆ ಎನ್ನಲಾಗಿದೆ. ಮೈತ್ರಿಯ ಹಿನ್ನೆಲೆ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಕ್ಷೇತ್ರ ಕಳೆದುಕೊಳ್ಳುವ ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲು ಯೋಚಿಸಿದ್ದಾರೆ ಎನ್ನಲಾಗಿದೆ. ಆದರೆ, ಸಂಸದೆ ಸುಮಲತಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಇದುವರೆಗೆ ಯಾವುದೇ ಸುಳಿವನ್ನು ನೀಡಿಲ್ಲ.

ಕಾಂಗ್ರೆಸ್ ಸೇರಲು ಒತ್ತಡವಿರುವುದನ್ನು ಸುಮಲತಾ ಅವರು ಖಚಿತಪಡಿಸಿದ್ದು, ಬಿಜೆಪಿ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆಯನ್ನು ಅವರು ಎದುರು ನೋಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಹ ತನ್ನ ತಂತ್ರಗಾರಿಕೆ ಪ್ರಯೋಗ ಮಾಡಲು ಎರಡೂ ಪಕ್ಷಗಳ ನಡುವಿನ ಸೀಟು ಹಂಚಿಕೆಯನ್ನೂ ಕಾಯತೊಡಗಿದೆ.

ಸಂಸದ ಮುದ್ದು ಹನುಮೇಗೌಡ ಸೆಳೆಯುವ ಪ್ರಯತ್ನ:ಕಾಂಗ್ರೆಸ್ ಪಕ್ಷವು ತುಮಕೂರು ಕ್ಷೇತ್ರದಲ್ಲಿಯೂ ಬಿಜೆಪಿ ಮುಖಂಡ ಮಾಜಿ ಸಂಸದ ಮುದ್ದುಹನುಮೇಗೌಡ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದೆ ಎಂದು ತಿಳಿದು ಬಂದಿದೆ. ಬಿಜೆಪಿಯ ಸಂಸದ ಜಿ ಎಸ್ ಬಸವರಾಜ್ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ನಿರ್ಧಾರ ತೆಗೆದುಕೊಂಡಿದ್ದರಿಂದ ಮುದ್ದು ಹನುಮೇಗೌಡರು ಬಿಜೆಪಿ ಪಕ್ಷದ ಲೋಕಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಮಾಜಿ ಸಚಿವ ವಿ ಸೋಮಣ್ಣ ಸಹ ತುಮಕೂರು ಲೋಕಸಭೆ ಕ್ಷೇತ್ರದ ಟಿಕೆಟ್​ಗೆ ತಮ್ಮ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

ತುಮಕೂರು ಕ್ಷೇತ್ರವನ್ನು ಬಿಜೆಪಿ ಒಂದು ವೇಳೆ ಜಾತ್ಯತೀತ ಜನತಾದಳಕ್ಕೆ ಬಿಟ್ಟುಕೊಟ್ಟರೆ ಈ ಬೆಳವಣಿಗೆಯಿಂದ ಬೇಸರಗೊಳ್ಳುವ ಮಾಜಿ ಸಂಸದ ಮುದ್ದುಹನುಮೇಗೌಡ ಮತ್ತು ಮಾಜಿ ಸಚಿವಿ ಸೋಮಣ್ಣ ಅವರನ್ನು ಪಕ್ಷಕ್ಕೆ ಸೆಳೆಯುವ ಇಂಗಿತವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಮಾಜಿ ಸಚಿವ ಕುಮಾರ ಬಂಗಾರಪ್ಪ:ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಮಾಜಿ ಸಚಿವ ಕುಮಾರ ಬಂಗಾರಪ್ಪ, ಹಾಸನದಲ್ಲಿ ಮಾಜಿ ಶಾಸಕ ಎ ಟಿ ರಾಮಸ್ವಾಮಿ, ಬೆಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ, ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆ ಎಂದು ತಿಳಿದು ಬಂದಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಶಾಸಕರ ಬೆಂಬಲ ಪಡೆಯುವ ಸಾಧ್ಯತೆಗಳ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಆಪರೇಷನ್ ಕಮಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕ ಎಸ್ ಟಿ ಸೋಮಶೇಖರ್, ಕೆ ಗೋಪಾಲಯ್ಯ, ಭೈರತಿ ಬಸವರಾಜ್ ಸೇರಿದಂತೆ ಹಲವು ಶಾಸಕರ ಮತ್ತು ಮಾಜಿ ಶಾಸಕರ ಸಪೋರ್ಟ್ ಪಡೆಯಲು ಮಾತುಕತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ

ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಅವರು ಹಠಾತ್ತನೆ ಕಾಂಗ್ರೆಸ್ ಪಕ್ಷ​ ತೊರೆದು ಬಿಜೆಪಿ ಸೇರಿದ ಅನಿರೀಕ್ಷಿತ ವಿದ್ಯಮಾನದಿಂದ ಪಕ್ಷದ ಮುಖಂಡರು ಎಚ್ಚೆತ್ತು ಕೊಂಡಿದ್ದು, ಆಪರೇಷನ್ ಹಸ್ತವನ್ನು ಚುರುಕುಗೊಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ ನಿಂದ ಸುಮಾರು 30 ಜನ ಮುಖಂಡರುಗಳು ಕಾಂಗ್ರೆಸ್ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ ಎಂದು ಹಿರಿಯ ಸಚಿವ ಚೆಲುವರಾಯಸ್ವಾಮಿ ಹೇಳಿಕೆ ನೀಡಿರುವುದು ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಪಕ್ಷ ಬಲೆ ಬೀಸುತ್ತಿರುವುದನ್ನು ಖಚಿತಪಡಿಸಿದೆ.

ಇದನ್ನೂಓದಿ:ಭಾರತ ಸಂವಿಧಾನದ ರಚನೆ ಮತ್ತು ವಿಶೇಷತೆಗಳು: ಒಂದು ಅವಲೋಕನ

ABOUT THE AUTHOR

...view details