ಕರ್ನಾಟಕ

karnataka

ಪ್ರೀತಿಯ ಸಂಕೇತ ಗುಲಾಬಿ ಹೂವಿನ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ

By ETV Bharat Karnataka Team

Published : Feb 14, 2024, 3:30 PM IST

ಗುಲಾಬಿ ಹೂವು ಬೆಳೆಯಲು ಹೆಚ್ಚು ನೀರು ಮತ್ತು ಅನುಕೂಲಕರ ವಾತಾವರಣ ಬೇಕು. ಆದರೆ, ಈ ಎರಡು ಸಮಸ್ಯೆಗಳಿಂದ ಉತ್ಪಾದನೆ ಕುಂಠಿತಗೊಳ್ಳುತ್ತಿದೆ.

climate change is impacting rose growing
climate change is impacting rose growing

ನವದೆಹಲಿ: ಪ್ರೇಮಿಗಳ ದಿನದಂದು ಕೆಂಗುಲಾಬಿ ನೀಡುವ ಮೂಲಕ ಅನೇಕರು ಪ್ರೇಮ ನಿವೇದಿಸಿಕೊಳ್ಳುತ್ತಾರೆ. ಆದರೆ, ಇದೇ ಗುಲಾಬಿ ಹವಾಮಾನ ಬದಲಾವಣೆಯ ಪರಿಣಾಮಕ್ಕೆ ತುತ್ತಾಗುತ್ತಿದೆ. ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಜಗತ್ತಿನೆಲ್ಲೆಡೆ ಗುಲಾಬಿ ಬೆಳೆಯ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿದೆ ಎಂದು ಕ್ರಿಶ್ಚಿಯನ್​ ಏಡ್​​ನ ಹೊಸ ವರದಿ ತಿಳಿಸಿದೆ.

ಜಾಗತಿಕವಾಗಿ ಗುಲಾಬಿ ಹೂವುಗಳ ರಫ್ತಿನಲ್ಲಿ ಪೂರ್ವ ಆಫ್ರಿಕಾದ ಮೂರು ಮತ್ತು ದಕ್ಷಿಣ ಅಮೆರಿಕದ ಎರಡು ದೇಶಗಳು ಮುಂದಿವೆ. ಕೀನ್ಯಾದಲ್ಲಿ ಶೇ.19.1ರಷ್ಟು, ಇಥಿಯೋಪಿಯಾದಲ್ಲಿ ಶೇ.5.1 ಮತ್ತು ಉಗಾಂಡಾದಲ್ಲಿ ಶೇ.1 ಮತ್ತು ಈಕ್ವೆಡಾರ್​ನಲ್ಲಿ ಶೇ.21.2 ಮತ್ತು ಕೊಲಂಬಿಯಾದಲ್ಲಿ ಶೇ.12.4ರಷ್ಟು ಗುಲಾಬಿ ಬೆಳೆಯಲಾಗುತ್ತದೆ.

ವರದಿಯ ಪ್ರಕಾರ, ಪೂರ್ವ ಆಫ್ರಿಕಾದಲ್ಲಿ ಈಗಾಗಲೇ ಬರ ಮತ್ತು ಅಧಿಕ ತಾಪಮಾನ ಪರಿಣಾಮ ಬೀರುತ್ತಿದೆ. ಇಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಶಾಖ ಮತ್ತು ತಾಪಮಾನ ಹೆಚ್ಚಲಿದ್ದು, ಗುಲಾಬಿ ಬೆಳೆಯಲು ಸವಾಲು ಎದುರಾಗಲಿದೆ.

ಗುಲಾಬಿ ಬೆಳೆಯಲು ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು. ಆದರೆ, ವರದಿ ಹೇಳುವಂತೆ ಈ ಪ್ರದೇಶಗಳಲ್ಲಿ 2020 ಮತ್ತು 2022ರಲ್ಲಿ 100ಕ್ಕೂ ಹೆಚ್ಚು ಬಾರಿ ಬರ ತಲೆದೋರಿದೆ. ಇಲ್ಲಿ ಹವಾಮಾನ ಬದಲಾವಣೆ ತೀವ್ರವಾಗಿದೆ.

ಇದೇ ರೀತಿಯ ಪರಿಸ್ಥಿತಿ ಇದೀಗ ಗುಲಾಬಿ ಬೆಳೆಯುವ ದಕ್ಷಿಣ ಅಮೆರಿಕದ ಪ್ರದೇಶದಲ್ಲೂ ಸೃಷ್ಟಿಯಾಗುತ್ತಿದೆ. ಈಕ್ವೆಡಾರ್​ ಮತ್ತು ಕೊಲಂಬಿಯಾದಲ್ಲಿ ಹೆಚ್ಚಿನ ಎತ್ತರದ ಪ್ಯಾರಾಮೊ ಪರಿಸರ ವ್ಯವಸ್ಥೆಗಳಲ್ಲಿ, ತಂಪು ವಾತಾವರಣ ಮತ್ತು ಉತ್ತಮ ಮಳೆ ಬೀಳುತ್ತಿದ್ದು ಬೆಳೆಗೆ ಪೂರಕವಾಗಿದೆ. ಹವಾಮಾನ ಬದಲಾವಣೆಯಿಂದ ಪ್ಯಾರೋಮೊ ಸೇರಿದಂತೆ ಆಂಡೆನ್​ ಪ್ರದೇಶದಲ್ಲಿ ತಾಪಮಾನ ಹೆಚ್ಚಾಗಿದೆ.

ಇದರ ಜೊತೆಗೆ, ಉಷ್ಣವಲಯದ ಆಂಡಿಸ್​​ನಲ್ಲಿ ಹಿಮ ಕರಗುವಿಕೆಯೂ ಕೂಡ ಪ್ರಮುಖ ಸವಾಲಾಗಿದೆ. ಇದರಿಂದಾಗಿ ಇಲ್ಲಿ 1990 ಮತ್ತು 2020ರ ನಡುವೆ ಶೇ.30ರಷ್ಟು ಭೂಮಿ ಕಳೆದುಹೋಗಿದೆ. ನೀರಿನ ಕೊರತೆಯೂ ಕೂಡ ಗುಲಾಬಿಗೆ ದೊಡ್ಡ ತೊಡಕು. ಇದರಿಂದ ಇಂಗ್ಲಿಷ್​ ರೋಸ್​ ಅಪಾಯದ ಪರಿಸ್ಥಿತಿಯಲ್ಲಿದೆ.

ಬ್ರಿಟಿಷರಿಗೆ ಗುಲಾಬಿ ಹೂವುಗಳ ಮೇಲೆ ವಿಶೇಷ ಪ್ರೀತಿ ಇದೆ. ಜಗತ್ತಿನಲ್ಲಿ ಅತೀ ಹೆಚ್ಚು ಗುಲಾಬಿಯನ್ನು ಆಮದು ಮಾಡಿಕೊಳ್ಳುವ ನಾಲ್ಕನೇ ದೇಶ ಯುಕೆ. ಆದರೆ ಹವಾಮಾನ ಬದಲಾವಣೆಯು ಗುಲಾಬಿ ಬೆಳೆಗಾರರನ್ನು ಕಂಗೆಡಿಸಿದೆ. ಜನವರಿಯಿಂದ ಏಪ್ರಿಲ್‌ವರೆಗೆ ತಾಪಮಾನ ಹೆಚ್ಚಳದಿಂದಾಗಿ ಗುಲಾಬಿ ಸಸ್ಯಗಳು ಒಂದು ತಿಂಗಳ ಮುಂಚೆಯೇ ಅರಳಲು ಪ್ರಾರಂಭಿಸುತ್ತವೆ. ಹೆಚ್ಚಾದ ಮಳೆ ಕೂಡ ಈ ಗಿಡಕ್ಕೆ ಸಮಸ್ಯೆ ಉಂಟುಮಾಡುತ್ತದೆ. ಇದರಿಂದ ಕೆಂಪು ಗುಲಾಬಿಯಲ್ಲಿ ಕಪ್ಪು ಚುಕ್ಕೆ ಮೂಡಬಹುದು. ಇದೇ ಕಾರಣಕ್ಕೆ ಅನೇಕ ಪ್ರಸಿದ್ಧ ವಿಧದ ಗುಲಾಬಿಗಳು ಕಣ್ಮರೆಯಾಗಿವೆ ಎನ್ನುತ್ತಾರೆ ಬೆಳೆಗಾರರು.

ಡೇವಿಡ್ ಆಸ್ಟಿನ್ ಅವರ ಪ್ರಶಸ್ತಿ ವಿಜೇತ ಶ್ರಾಪ್‌ಶೈರ್ ಲಾಡ್ ತಳಿ ಈಗಾಗಲೇ ಮಾರಾಟದಲ್ಲಿ ಹಿಂದೆ ಬಿದ್ದಿದೆ. ಇದಕ್ಕೆ ಹುಳು ಕಾಟ ಮತ್ತು ಬದಲಾಗುತ್ತಿರುವ ಹವಾಮಾನ ಎಂದಿದ್ದಾರೆ. ಹವಾಮಾನ ಬದಲಾವಣೆಯನ್ನು ಪರಿಹರಿಸುವುದರ ಜೊತೆಗೆ, ಗುಲಾಬಿ ಕೃಷಿಗೆ ಸೂಕ್ತವಾದ ಪ್ರದೇಶಗಳನ್ನು ಸಂರಕ್ಷಿಸುವಲ್ಲಿ, ಜೀವವೈವಿಧ್ಯತೆ ಮತ್ತು ಪರಾಗಸ್ಪರ್ಶಕಗಳನ್ನು ರಕ್ಷಿಸುವಲ್ಲಿ, ಗುಲಾಬಿ ಉತ್ಪಾದನೆಯಲ್ಲಿ ಉತ್ತೇಜಿಸುವ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆರ್ಥಿಕ ಪ್ರಯೋಜನಗಳನ್ನು ಕಾಪಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಶೋಧನಾ ವರದಿ ಸಲಹೆ ನೀಡಿದೆ. (ಐಎಎನ್​ಎಸ್​)

ಇದನ್ನೂ ಓದಿ: Valentine's Day; ಪ್ರೇಮಿಗಳ ದಿನದ ಇತಿಹಾಸ ತಿಳಿಯಿರಿ

ABOUT THE AUTHOR

...view details