ಕರ್ನಾಟಕ

karnataka

ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್; ಅಭಿಮಾನಿಯಿಂದ ಚಿನ್ನದ ಸರ ಉಡುಗೊರೆ

By ETV Bharat Karnataka Team

Published : Jan 21, 2024, 9:26 PM IST

ದುನಿಯಾ ವಿಜಯ್ ಹುಟ್ಟುಹಬ್ಬದ ಸಂಭ್ರಮದಂದು ಅಭಿಮಾನಿಯೊಬ್ಬರು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ದುನಿಯಾ ವಿಜಯ್
ದುನಿಯಾ ವಿಜಯ್

ಚಿತ್ರರಂಗದಲ್ಲಿ ಒಂದೂವರೆ ದಶಕಗಳಿಂದ‌‌ ಕನ್ನಡಿಗರನ್ನ‌ ರಂಜಿಸುತ್ತಾ ಬರ್ತಾ ಇರೋ‌ ದುನಿಯಾ ವಿಜಯ್ ಅವರು ನಿನ್ನೆ (ಶನಿವಾರ) ತಮ್ಮ 50ನೇ ಬರ್ತ್​ಡೇ ಸಂಭ್ರಮದಲ್ಲಿದ್ದರು. ಈ ವೇಳೆ ಅವರ ಅಭಿಮಾನಿಯೊಬ್ಬರು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಫೈಟರ್ ಆಗಿ ಕನ್ನಡ ಚಿತ್ರರಂಗದಲ್ಲಿ ದುನಿಯಾ ಸಿನಿಮಾ‌‌‌ ಮೂಲಕ ನಟನಾಗಿ ಸೈ ಎನ್ನಿಸಿಕೊಂಡು, ಸ್ಟಾರ್ ನಟನಾದ ನಟ ದುನಿಯಾ ವಿಜಯ್ ತಮ್ಮ ಹುಟ್ಟೂರಿನಲ್ಲಿ ಭರ್ಜರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. 1974ರ ಜನವರಿ 20ರಂದು ಆನೇಕಲ್ ತಾಲೂಕಿನ ಕುಂಬಾರನಹಳ್ಳಿ ಗ್ರಾಮದಲ್ಲಿ ಜನಿಸಿದ ವಿಜಯ್ ಕುಮಾರ್ ಬಿ ಆರ್ ನಟನಾಗಿ ಬಡ್ತಿ ಪಡೆದುಕೊಂಡು ನಟಿಸಿದ ಮೊದಲ ಚಿತ್ರ 'ದುನಿಯಾ' ಭರ್ಜರಿ ಯಶಸ್ಸು ಕಂಡು ದುನಿಯಾ ವಿಜಯ್ ಎಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಡಮ್​ನ್ನ ಕ್ರಿಯೇಟ್ ಮಾಡಿಕೊಂಡರು.

ದುನಿಯಾ ವಿಜಯ್​ಗೆ ಚಿನ್ನದ ಸರವನ್ನು ನೀಡುತ್ತಿರುವ ಅಭಿಮಾನಿ

ಇನ್ನು ಇಷ್ಟು ವರ್ಷಗಳ ಕಾಲ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ನಟ ದುನಿಯಾ ವಿಜಯ್, ಈ ಬಾರಿ ತನ್ನ ಹುಟ್ಟೂರಾದ ಆನೇಕಲ್‌ನ ಕುಂಬಾರನಹಳ್ಳಿಯಲ್ಲಿ ಆಚರಿಸಿಕೊಂಡರು. ತನ್ನ ತಂದೆ ತಾಯಿಯರ ಸಮಾಧಿ ನಿರ್ಮಿಸಿ ಅದರ ಮೇಲೆ ಅವರ ಪುಟ್ಟ ಪುತ್ಥಳಿಯನ್ನು ವಿಜಯ್ ಸ್ಥಾಪಿಸಿದ್ದು, ಆ ಜಾಗಕ್ಕೆ ದುನಿಯಾ ರುಣ‌ ಎಂಬ ಹೆಸರನ್ನು ಇಟ್ಟಿದ್ದಾರೆ.

2004ರಲ್ಲಿ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕಿಚ್ಚ ಸುದೀಪ್ ನಟನೆಯ ರಂಗ ಎಸ್ಎಸ್ಎಲ್‌ಸಿ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್, ನಂತರ ಶಿವರಾಜ್‌ಕುಮಾರ್ ನಟನೆಯ ರಿಷಿ, ಜೋಗಿ, ರಾಕ್ಷಸ ಹಾಗೂ ಇತರೆ ನಟರ ಹಲವು ಚಿತ್ರಗಳಲ್ಲಿ ಪುಟ್ಟ ಖಳನಟನಾಗಿ ಕಾಣಿಸಿಕೊಂಡಿದ್ದರು.

ದುನಿಯಾ ವಿಜಯ್ ಹುಟ್ಟುಹಬ್ಬದ ಕೇಕ್

ಬಳಿಕ 2007ರಲ್ಲಿ ತೆರೆಕಂಡ ಸೂರಿ ನಿರ್ದೇಶನದ ದುನಿಯಾ ಚಿತ್ರದಲ್ಲಿ ನಾಯಕನಾಗಿ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿದ ದುನಿಯಾ ವಿಜಯ್, ಫಸ್ಟ್ ಬಾಲ್ ಸಿಕ್ಸರ್ ಬಾರಿಸಿ ಅಭಿಮಾನಿಗಳ ಮನಸ್ಸಿನಲ್ಲಿ ತನ್ನ ಅದ್ಭುತ ನಟನೆಯಿಂದ ಖಾಯಂ ಸ್ಥಾನ ಗಿಟ್ಟಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಸಾಲು ಸಾಲು ಚಿತ್ರಗಳಲ್ಲಿ ನಟಿಸಿರುವ ದುನಿಯಾ ವಿಜಯ್ ಇಂದು ಸ್ವತಃ ತಾವೇ ನಿರ್ದೇಶನ ಮಾಡಿ 'ಸಲಗ' ರೀತಿಯ ಸೂಪರ್ ಹಿಟ್ ಚಿತ್ರವನ್ನೂ ಸಹ ನೀಡಿದ್ದಾರೆ ಹಾಗೂ ಪರಭಾಷಾ ಚಿತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ.

ನಿನ್ನೆ ಆನೇಕಲ್​ನ ತಮ್ಮ ಹುಟ್ಟೂರು ಕುಂಬಾರನಹಳ್ಳಿಯಲ್ಲಿ, ದುನಿಯಾ ವಿಜಯ್ ತಂದೆ ತಾಯಿಯ ಸಮಾಧಿಯ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಲ್ಲಿಯೂ ಕೂಡ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಿದ್ದರು.

ದುನಿಯಾ ವಿಜಯ್

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ‌‌ ಕಟ್ಟೋದಿಕ್ಕೆ ಆಗೋಲ್ಲ ಎಂದು ಡಾ ರಾಜ್​ಕುಮಾರ್ ಅಭಿಮಾನಿಗಳನ್ನ ದೇವರು ಅಂತಾ ಕರೆದರು. ಆ ಮಾತು ದುನಿಯಾ ವಿಜಯ್ ಬರ್ತ್ ಡೇ ಅಕ್ಷರಶಃ ನಿಜ ಅನ್ನೋದು ಸಾಬೀತು ಆಗಿದೆ. ಇನ್ನು ವಿಜಯ್ ಕೂಡ ತಮ್ಮ ನೆಚ್ಚಿನ ಅಭಿಮಾನಿಗಳಿಗೋಸ್ಕರ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್ ಎಂಬ ಮಾಂಸಹಾರಿ ಊಟವನ್ನ ವ್ಯವಸ್ಥೆ ಮಾಡಿದ್ದರು. ಆನೇಕಲ್ ಅಭಿಮಾನಿ ಬಳಗ ಸೇರಿದಂತೆ ‌ಸಾವಿರಾರು ಅಭಿಮಾನಿಗಳು ಭರ್ಜರಿ ಬಾಡೂಟ ಸವಿಯುವ ಮೂಲಕ ನೆಚ್ಚಿನ ನಟನಿಗೆ ಮನಸ್ಸು ಪೂರ್ತಿ ಹಾರೈಸಿದ್ದರು.

ಇನ್ನು ದುನಿಯಾ ವಿಜಯ್ ಕಿರಿಯ ಪುತ್ರಿ ಮೋನಿಷಾ ಅಮೆರಿಕದ ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನ್ಯೂಯಾರ್ಕ್ ಟೈಮ್ಸ್ ಟಿವಿಯಲ್ಲಿ ಅಪ್ಪನಿಗೆ ಹುಟ್ಟು ಹಬ್ಬದ ಶುಭಾಶಯ ಹೇಳುವ ಮೂಲಕ ಗಮನ ಸೆಳೆದಿದ್ದಾರೆ.

ಇದರ‌ ಜೊತೆಗೆ ದೊಡ್ಡ ಮಗಳು ಮೋನಿಕಾ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಅಧಿಕೃತವಾಗಿ ವಿಜಯ್ ಅನೌನ್ಸ್ ಮಾಡುವ ಮೂಲಕ ಮಗಳು ಚಿತ್ರರಂಗಕ್ಕೆ ಬರೋದನ್ನ ಖಚಿತಪಡಿಸಿದ್ದಾರೆ. ಇನ್ನು ಸಾವಿರಾರು ಅಭಿಮಾನಿಗಳು ವಿಜಯ್ ಜೊತೆ ನಿಂತು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ನಟನ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ. ಒಟ್ಟಾರೆ ದುನಿಯಾ ವಿಜಯ್ ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:ದಂಡ ಕಟ್ಟಿ ತಮ್ಮೂರಿನ ಖೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದ ನಟ ದುನಿಯಾ ವಿಜಯ್

ABOUT THE AUTHOR

...view details