ETV Bharat / state

ದಂಡ ಕಟ್ಟಿ ತಮ್ಮೂರಿನ ಖೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದ ನಟ ದುನಿಯಾ ವಿಜಯ್

author img

By ETV Bharat Karnataka Team

Published : Jan 18, 2024, 4:27 PM IST

Updated : Jan 19, 2024, 3:18 PM IST

ಪ್ರಕರಣವೊಂದರಲ್ಲಿ ಬಂಧನವಾಗಿದ್ದ ತಮ್ಮೂರಿನ ಖೈದಿಗಳನ್ನು ನಟ ದುನಿಯಾ ವಿಜಯ್​ ದಂಡ ಕಟ್ಟಿ ಜೈಲಿನಿಂದ ಬಿಡುಗಡೆ ಮಾಡಿಸಿದ್ದಾರೆ.

ಖೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದ ನಟ
ಖೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದ ನಟ

ದಂಡ ಕಟ್ಟಿ ತಮ್ಮೂರಿನ ಖೈದಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಿದ ನಟ ದುನಿಯಾ ವಿಜಯ್

ಸಲಗ ಸಿನಿಮಾದ ಬಹು ದೊಡ್ಡ ಯಶಸ್ಸಿನ ಬಳಿಕ ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಟಾರ್​ಡಮ್ ಹೆಚ್ಚಿಸಿಕೊಂಡಿದ್ದಾರೆ. ಈ ಮಧ್ಯೆ ವಿಜಯ್ ಭೀಮ ಎಂಬ ಮತ್ತೊಂದು ನೈಜ ಘಟನೆ ಆಧಾರಿತ ಸಿನಿಮಾ ಮಾಡುತ್ತಿದ್ದಾರೆ‌. ಒಂದು ಕಡೆ ಭೀಮ ಸಿನಿಮಾ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್​ನಲ್ಲಿ ಬ್ಯುಸಿಯಾಗಿದ್ದಾರೆ.

ಇದರ ಬೆನ್ನಲ್ಲೆ ದುನಿಯಾ ವಿಜಯ್ ಕೆಲವು ದಿನಗಳ ಹಿಂದೆ ತಮ್ಮ ಹುಟ್ಟೂರಾದ ಕುಂಬಾರನಹಳ್ಳಿಗೆ ಭೇಟಿ ನೀಡಿದ್ದರು. ಹುಟ್ಟೂರಿನಲ್ಲಿ ಹುರುಪಿನಿಂದ ಓಡಾಡಿದ ನಟ ಬಾಲ್ಯದ ನೆನಪುಗಳಿಗೆ ಜಾರಿದರು. ಬಾಲ್ಯದ ದಿನಗಳನ್ನ ಮೆಲುಕು ಹಾಕುತ್ತಾ ಸ್ನೇಹಿತರು ಸಂಬಂಧಿಕರ ಜೊತೆ ಮಾತುಕತೆ ನಡೆಸಿದರು. ದುನಿಯಾ ವಿಜಯ್ ಈ ಬಾರಿಯೂ ಸಹ ತಮ್ಮ ಹುಟ್ಟೂರಿನಲ್ಲಿಯೇ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

ಈ ಮಧ್ಯೆ ಕುಂಬಾರಹಳ್ಳಿಯಲ್ಲಿ ಯಾವುದೋ ತಪ್ಪಿಗೆ ಜೈಲು ಸೇರಿರುವ ಕೆಲ ಕುಟುಂಬಗಳಿವೆ. ಆ ಕುಟುಂಬದವರು ವಿಜಯ್ ಹತ್ತಿರ ನಮ್ಮ ಮನೆಯವರನ್ನ ಜೈಲಿನಿಂದ ಬಿಡಿಸಿ ಅಂತಾ ಕೇಳಿಕೊಂಡಿದ್ದರು‌. ಅದರಂತೆ ಇಂದು ದುನಿಯಾ ವಿಜಯ್ ತಮ್ಮ ಹುಟ್ಟೂರಿನ 6ಜನ ಖೈದಿಗಳನ್ನ ಬಿಡಿಸಿದ್ದಾರೆ‌. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ 6 ಜನ ಖೈದಿಗಳನ್ನು ನಟ ವಿಜಯ ಅವರೇ ದಂಡ ಕಟ್ಟಿ ಬಿಡುಗಡೆ ಮಾಡಿಸಿದ್ದಾರೆ. ಇಂತಹ ನೋವು ಯಾರಿಗೂ ಬಾರದಿರಲಿ ಎಂದು ವಿಜಯ್ ಅವರಿಗೆ ಹರಸಿದ್ದಾರೆ.

ಜನವರಿ 20ರಂದು ದುನಿಯಾ ವಿಜಯ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ತಮ್ಮ ಹುಟ್ಟೂರಾದ ಆನೇಕಲ್‌ ಬಳಿಯ ಕುಂಬಾರನಹಳ್ಳಿಯಲ್ಲಿ ಆಚರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಈ ಸಮಯದಲ್ಲಿ ಅವರು ಅಭಿಮಾನಿಗಳಿಗೆ ಫ್ಲೆಕ್ಸ್‌, ಬ್ಯಾನರ್‌ ಕಟ್ಟದಂತೆ ಮನವಿ ಮಾಡಿದ್ದಾರೆ.

2013 ರಲ್ಲಿ ದುನಿಯಾ ವಿಜಯ್ ಚಿತ್ರೀಕರಣಕ್ಕಾಗಿ ಮೈಸೂರು ಜೈಲಿಗೆ ಹೋಗಿದ್ದರು. ಅಲ್ಲಿದ್ದ ಸಾಕಷ್ಟು ಖೈದಿಗಳ ಜೊತೆ ಮಾತನಾಡಿ ಅವರ ಕಷ್ಟ ಸುಖಗಳನ್ನ ವಿಚಾರಿಸಿದರು. ಕೆಲವು ವಯಸ್ಸಾದ ಖೈದಿಗಳಿಗೆ ದಂಡವನ್ನು ಪಾವತಿಸಿದರೆ ಬಿಡುಗಡೆ ಮಾಡುವ ಅವಕಾಶವಿತ್ತು. ಇದನ್ನ ತಿಳಿದ ವಿಜಯ್ ಧನ ಸಹಾಯ ಮಾಡಿ 62 ಜನ ಖೈದಿಗಳನ್ನ ಬಿಡುಗಡೆ ಮಾಡಿಸಿದ್ದರು.

ಇದೀಗ ತಮ್ಮ ಹುಟ್ಟೂರಿನ ಕುಂಬಾರನಹಳ್ಳಿಯ 6 ಖೈದಿಗಳು ಪ್ರಕರಣವೊಂದರಲ್ಲಿ ಬಂಧನವಾಗಿದ್ದು ದಂಡ ಕಟ್ಟದೆ ಹೆಚ್ಚುವರಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಇದನ್ನರಿತು ಅವರ ಸಹಾಯಕ್ಕೆ ಧಾವಿಸಿದ ನಟ ವಿಜಯ್​ ದಂಡ ಕಟ್ಟಿ ಆರು ಜನರನ್ನು ಬಂಧನದಿಂದ ಮುಕ್ತಗೊಳಿಸಿದ್ದಾರೆ.

ಇದನ್ನೂ ಓದಿ: 'ಹನುಮಾನ್​​', 'ಗುಂಟೂರು ಖಾರಂ'​ ಕಲೆಕ್ಷನ್​​ ಮಾಹಿತಿ ನಿಮಗಾಗಿ

Last Updated : Jan 19, 2024, 3:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.