ಕರ್ನಾಟಕ

karnataka

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅಂಕಿತ: ಕಾನೂನಿನಲ್ಲಿರುವ ಅಂಶಗಳೇನು?

By ETV Bharat Karnataka Team

Published : Mar 13, 2024, 3:32 PM IST

ಉತ್ತರಾಖಂಡ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

President gives approves Uniform Civil Code Uttarakhand Bill-2024
ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅಂಕಿತ

ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡ ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮೋದನೆ ದೊರೆತಿದೆ. ಯುಸಿಸಿ ಕಾನೂನು ರೂಪಿಸಿರುವ ದೇಶದ ಮೊದಲ ರಾಜ್ಯವಾಗಿದ್ದು, ಇದೀಗ ಇದರ ನಿಯಮ ರೂಪಿಸಿದ ಬಳಿಕ ಜಾರಿಗೆ ಬರಲಿದೆ.

ಫೆಬ್ರವರಿ 7ರಂದು ಉತ್ತರಾಖಂಡ ಸರ್ಕಾರ ಕರೆದಿದ್ದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ - 2024 ಮಸೂದೆ ಪಾಸ್​ ಆಗಿತ್ತು. ಇದೀಗ ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಹಾಕಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧಿಕೃತ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಎಲ್ಲ ನಾಗರಿಕರಿಗೂ ಸಮಾನ ಹಕ್ಕು ಸಿಗಲಿದ್ದು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬೀಳುವುದು ಖಚಿತ. ಇದಲ್ಲದೇ, ಉತ್ತರಾಖಂಡದಲ್ಲಿ ಸಾಮಾಜಿಕ ಸಮಾನತೆಯ ಮಹತ್ವ ಸಾಬೀತುಪಡಿಸುವ ಮೂಲಕ ಸಾಮರಸ್ಯ ಉತ್ತೇಜಿಸುವಲ್ಲಿ ಏಕರೂಪ ನಾಗರಿಕ ಸಂಹಿತೆ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿಯಂತೆ ಉತ್ತರಾಖಂಡ ಸರ್ಕಾರವು ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ತರಾಖಂಡದ ಮೂಲ ಸ್ವರೂಪವನ್ನು ಕಾಪಾಡಿಕೊಳ್ಳಲು ನಿರ್ಧರಿಸಿದೆ ಎಂದು ಸಿಎಂ ಧಾಮಿ ಸಾಮಾಜಿಕ ಜಾಲತಾಣ 'ಎಕ್ಸ್​​'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯ ಮುಖ್ಯಾಂಶಗಳು

  • ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದ ನಂತರ ವಿವಾಹ ನೋಂದಣಿ ಕಡ್ಡಾಯವಾಗಲಿದೆ. ಮದುವೆ ನೋಂದಣಿ ಮಾಡಿಸಿಕೊಳ್ಳದಿದ್ದರೆ, ಅಂತಹವರಿಗೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ.
  • ಗಂಡ - ಹೆಂಡತಿ ತಮ್ಮ ಜೀವತಾವಧಿಯಲ್ಲಿ ಎರಡನೇ ಮದುವೆಗೆ ಸಂಪೂರ್ಣ ನಿಷೇಧ ಇರುತ್ತದೆ.
  • ವಿವಾಹಿತ ದಂಪತಿಗಳಲ್ಲಿ ಒಬ್ಬರು ಇನ್ನೊಬ್ಬರ ಒಪ್ಪಿಗೆಯಿಲ್ಲದೇ ಧರ್ಮವನ್ನು ಬದಲಾಯಿಸಿದರೆ, ಆಗ ವಿಚ್ಛೇದನ ಮತ್ತು ಜೀವನಾಂಶವನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಇರುತ್ತದೆ.
  • ಎಲ್ಲ ಧರ್ಮಗಳಲ್ಲಿ ಮದುವೆಯ ಕನಿಷ್ಠ ವಯಸ್ಸನ್ನು ಹುಡುಗರಿಗೆ 21 ವರ್ಷ ಮತ್ತು ಹುಡುಗಿಯರಿಗೆ 18 ವರ್ಷಗಳು ಎಂದು ನಿಗದಿಪಡಿಸಲಾಗಿದೆ.
  • ಪತಿ ಮತ್ತು ಪತ್ನಿಯ ನಡುವೆ ವಿಚ್ಛೇದನ ಅಥವಾ ಕೌಟುಂಬಿಕ ವಿವಾದದ ಸಂದರ್ಭದಲ್ಲಿ ಐದು ವರ್ಷದವರೆಗಿನ ಮಗುವಿನ ಪಾಲನೆಯ ಅವಕಾಶ ತಾಯಿಗೆ ಇರುತ್ತದೆ.
  • ಎಲ್ಲ ಧರ್ಮಗಳಲ್ಲೂ ಪತಿ - ಪತ್ನಿಯರಿಗೆ ವಿಚ್ಛೇದನ ಪಡೆಯಲು ಸಮಾನ ಹಕ್ಕು ನೀಡಲಾಗಿದೆ.
  • ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಹಲಾಲಾ ಮತ್ತು ಇದ್ದತ್ ಆಚರಣೆಗೆ ನಿಷೇಧ ಇರುತ್ತದೆ.
  • ಹೆಣ್ಣು ಮಕ್ಕಳಿಗೆ ಎಲ್ಲ ಧರ್ಮ ಮತ್ತು ಸಮುದಾಯಗಳಲ್ಲಿ ಆಸ್ತಿಯಲ್ಲಿ ಸಮಾನ ಹಕ್ಕು ನೀಡಲಾಗುತ್ತದೆ.
  • ಆಸ್ತಿ ಹಕ್ಕುಗಳಿಗಾಗಿ ಕಾನೂನುಬದ್ಧ ಮತ್ತು ನ್ಯಾಯಸಮ್ಮತವಲ್ಲದ ಮಕ್ಕಳ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಆ ದಂಪತಿ ಜೈವಿಕ ಮಕ್ಕಳಲ್ಲಿ ಬೇರೆ ಸಂಬಂಧದ ಮಕ್ಕಳನ್ನೂ ಪರಿಗಣಿಸಲಾಗುತ್ತದೆ.
  • ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಆಸ್ತಿಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳಿಗೆ ಸಮಾನ ಹಕ್ಕುಗಳನ್ನು ನೀಡಲಾಗುತ್ತದೆ.
  • ಆಸ್ತಿಯಲ್ಲಿ ಪತ್ನಿ ಮತ್ತು ಮಕ್ಕಳ ಜೊತೆಗೆ ಪೋಷಕರಿಗೂ ಸಮಾನ ಹಕ್ಕು ಇರುತ್ತದೆ.
  • ಮಹಿಳೆಯ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೂ ಅಧಿಕೃತವಾಗಿ ಆಸ್ತಿಯಲ್ಲಿ ರಕ್ಷಣೆ ಇರುತ್ತದೆ.
  • ಉತ್ತರಾಖಂಡದಲ್ಲಿ ಲಿವ್ಇನ್ ಸಂಬಂಧಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ.
  • ಲಿವ್ - ಇನ್ ಸಂಬಂಧದ ಸಮಯದಲ್ಲಿ ಜನಿಸಿದ ಮಕ್ಕಳನ್ನು ಆ ದಂಪತಿಗಳ ಕಾನೂನುಬದ್ಧ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಆ ಮಗು ಜೈವಿಕ ಮಗುವಿನ ಎಲ್ಲ ಹಕ್ಕುಗಳನ್ನು ಪಡೆಯಲಿದೆ.

ಇದನ್ನೂ ಓದಿ:ಸಂವಿಧಾನ ರಚನೆಕಾರರ ಕನಸು ನನಸು, ಇತರ ರಾಜ್ಯಗಳೂ ಯುಸಿಸಿ ಕಾಯ್ದೆ ತರಲಿ: ಉತ್ತರಾಖಂಡ ಸಿಎಂ

ABOUT THE AUTHOR

...view details