ಬೆಳಗಾವಿ: ವಿಧಾನಸಭೆ ಚುನಾವಣೆಗೆ ನಿನ್ನೆ ಮತದಾನ ಮುಗಿದಿದ್ದು, ಇಂದು ರಿಲ್ಯಾಕ್ಸ್ ಮೂಡ್ನಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪತ್ನಿ ಚನ್ನಮ್ಮ ಜೊತೆಗೆ ಆಗಮಿಸಿ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದರು. ಸಿಎಂ ದಂಪತಿ ಮನೆ ದೇವತೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಸಚಿವ ಸಿ.ಸಿ.ಪಾಟೀಲ್, ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಸೇರಿ ಮತ್ತಿತರರು ಇದ್ದರು. ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ವಿಚಾರಕ್ಕೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, 2018 ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ 107, ಬಿಜೆಪಿಗೆ 80 ಎಂದು ನೀವೇ ಎಕ್ಸಿಟ್ ಪೋಲ್ನಲ್ಲಿ ತೋರಿಸಿದ್ದೀರಿ. ಆದರೆ ಏನಾಯ್ತು? ಬಿಜೆಪಿಗೆ 104 ಸ್ಥಾನ ಬಂತು. ಕಾಂಗ್ರೆಸ್ಗೆ ಎಷ್ಟು ಸ್ಥಾನ ಬಂದವು? ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯಾನಾಥ್ ಗೆಲ್ಲುವುದಿಲ್ಲ ಎಂದಿದ್ದರು. ಆದರೆ ಅಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ಹೀಗಾಗಿ ಎಕ್ಸಿಟ್ ಪೋಲ್ಗಳು ಕೇವಲ ಎಕ್ಸಿಟ್ ಪೋಲ್ ಅಷ್ಟೇ ಎಂದು ಟೀಕಿಸಿದರು.