ಕರ್ನಾಟಕ

karnataka

ಖಿನ್ನತೆ ನಿವಾರಣೆಗೆ ಮಾತ್ರೆಗಿಂತ ರನ್ನಿಂಗ್ ಥೆರಪಿ ಉತ್ತಮ; ಸಂಶೋಧನಾ ವರದಿ

By ETV Bharat Karnataka Team

Published : Oct 8, 2023, 4:56 PM IST

ಖಿನ್ನತೆ ಮತ್ತು ಆತಂಕ ನಿವಾರಣೆಗೆ ಓಡುವ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.

Running better than antidepressants to tackle depression: Study
Running better than antidepressants to tackle depression: Study

ಲಂಡನ್ :ಮಾನಸಿಕ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಖಿನ್ನತೆ ಅಥವಾ ಆತಂಕವನ್ನು ನಿವಾರಿಸುವಲ್ಲಿ ರನ್ನಿಂಗ್ ಅಥವಾ ಓಡುವುದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ. ಖಿನ್ನತೆ ಅಥವಾ ಆತಂಕಗಳ ನಿವಾರಣೆಗೆ ಖಿನ್ನತೆ ಶಮನಕಾರಿ ಮಾತ್ರೆಗಳನ್ನು ತೆಗೆದುಕೊಲ್ಳುವುದು ಹಾಗೂ ಓಡುವುದು ಎರಡೂ ಒಂದೇ ರೀತಿಯ ಪರಿಣಾಮಗಳನ್ನು ತೋರಿಸಿವೆ. 16 ವಾರಗಳವರೆಗೆ ಮಾತ್ರೆ ತೆಗೆದುಕೊಳ್ಳುವುದು ಮತ್ತು ಅದೇ ಅವಧಿಗೆ ಓಡುವುದು ಎರಡರಲ್ಲಿ ಓಡುವುದರಿಂದಲೇ ಹೆಚ್ಚಿನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಿಗುವುದು ದೃಢಪಟ್ಟಿದೆ. ಅಲ್ಲದೆ ಖಿನ್ನತೆ ಶಮನಕಾರಿ ಔಷಧಿಗಳಿಂದ ದೈಹಿಕ ಆರೋಗ್ಯಕ್ಕೆ ಹಾನಿಯಾಗಿರುವುದು ಕಂಡು ಬಂದಿದೆ.

ಎಫೆಕ್ಟಿವ್ ಡಿಸಾರ್ಡರ್ಸ್ ಹೆಸರಿನ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನವು ಖಿನ್ನತೆ ಅಥವಾ ಆತಂಕದಿಂದ ಬಳಲುತ್ತಿರುವ 141 ರೋಗಿಗಳ ಸಮೀಕ್ಷೆ ನಡೆಸಿದೆ. ಈ 141 ರೋಗಿಗಳಿಗೆ ಚಿಕಿತ್ಸೆಯ ಆಯ್ಕೆಯನ್ನು ನೀಡಲಾಯಿತು. 16 ವಾರಗಳ ಎಸ್ಎಸ್ಆರ್​ಐ ಖಿನ್ನತೆ-ಶಮನಕಾರಿ ಮಾತ್ರೆಗಳು ಅಥವಾ 16 ವಾರಗಳ ಗುಂಪು ಆಧಾರಿತ ರನ್ನಿಂಗ್ ಥೆರಪಿ ಇವುಗಳ ಪೈಕಿ ಒಂದನ್ನು ಆರಿಸಿಕೊಳ್ಳಲು ಸೂಚಿಸಲಾಯಿತು. ನಲವತ್ತೈದು ಜನರು ಖಿನ್ನತೆ-ಶಮನಕಾರಿ ಔಷಧಿಗಳನ್ನು ಆಯ್ಕೆ ಮಾಡಿದರೆ, 96 ಜನರು ಓಟವನ್ನು ಆಯ್ಕೆ ಮಾಡಿದರು.

ಪ್ರಯೋಗದ ಕೊನೆಯಲ್ಲಿ ಎರಡೂ ಗುಂಪುಗಳಲ್ಲಿನ ಸುಮಾರು 44 ಪ್ರತಿಶತದಷ್ಟು ಜನರು ಖಿನ್ನತೆ ಮತ್ತು ಆತಂಕದ ಸ್ಥಿತಿಯಲ್ಲಿ ಸುಧಾರಣೆಯನ್ನು ತೋರಿಸಿದರು, ಆದರೆ ಓಡುವ ಗುಂಪನ್ನು ನೋಡಿದರೆ ಇವರ ಸೊಂಟದ ಸುತ್ತಳತೆ, ರಕ್ತದೊತ್ತಡ ಮತ್ತು ಹೃದಯದ ಕಾರ್ಯದಲ್ಲಿ ಗಮನಾರ್ಹ ಸುಧಾರಣೆಗಳು ಕಂಡು ಬಂದಿವೆ. ಆದರೆ ಖಿನ್ನತೆ-ಶಮನಕಾರಿ ಔಷಧಿ ಸೇವಿಸಿದವರಲ್ಲಿ ಚಯಾಪಚಯ ಕ್ರಿಯೆ ಸ್ವಲ್ಪ ಕ್ಷೀಣಿಸಿರುವ ಲಕ್ಷಣಗಳು ಕಂಡು ಬಂದಿವೆ.

"ಎರಡೂ ಚಿಕಿತ್ಸಾ ಪದ್ಧತಿಗಳು ಖಿನ್ನತೆಯನ್ನು ಕಡಿಮೆ ಮಾಡಲು ಒಂದೇ ಪ್ರಮಾಣದಲ್ಲಿ ಸಹಾಯ ಮಾಡಿದವು. ಖಿನ್ನತೆ-ಶಮನಕಾರಿಗಳು ಸಾಮಾನ್ಯವಾಗಿ ದೇಹದ ತೂಕ, ಹೃದಯ ಬಡಿತದ ವ್ಯತ್ಯಾಸ ಮತ್ತು ರಕ್ತದೊತ್ತಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಆದರೆ ರನ್ನಿಂಗ್ ಥೆರಪಿಯು ಸಾಮಾನ್ಯ ಫಿಟ್ನೆಸ್ ಮತ್ತು ಹೃದಯ ಬಡಿತದ ಸುಧಾರಣೆಗೆ ಕಾರಣವಾಯಿತು" ಎಂದು ನೆದರ್ಲ್ಯಾಂಡ್ಸ್​ನ ಆಮ್​ಸ್ಟರ್​ಡ್ಯಾಮ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ಸ್ (ಯುಎಂಸಿ) ಪ್ರಾಧ್ಯಾಪಕ ಬ್ರೆಂಡಾ ಪೆನ್ನಿಕ್ಸ್ ಹೇಳಿದರು.

ಖಿನ್ನತೆ-ಶಮನಕಾರಿ ಔಷಧಿಯ ಗುಂಪಿನವರು ಸಮಯಕ್ಕೆ ಸರಿಯಾಗಿ ತಪ್ಪದೇ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಇನ್ನು ಓಡುವ ಗುಂಪಿನ ಅರ್ಧದಷ್ಟು ಜನರು ವಾರಕ್ಕೆ ಎರಡು ಬಾರಿ ವ್ಯಾಯಾಮ ಚಿಕಿತ್ಸೆಗೆ ಹಾಜರಾಗಿದ್ದರು ಎಂದು ಅಧ್ಯಯನವು ತೋರಿಸಿದೆ.

"ದೈಹಿಕ ಆರೋಗ್ಯವು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಖಿನ್ನತೆ ಮತ್ತು ಆತಂಕದ ಚಿಕಿತ್ಸೆಯನ್ನು ವ್ಯಾಯಾಮದ ಮೂಲಕ ಸಾಧಿಸಬಹುದು ಎಂದು ತೋರಿಸುವ ಬಹಳ ಆಸಕ್ತಿದಾಯಕ ಫಲಿತಾಂಶ ಇವಾಗಿವೆ. ಖಿನ್ನತೆ-ಶಮನಕಾರಿ ಔಷಧಿಗಳ ಪ್ರತಿಕೂಲ ಪರಿಣಾಮಗಳಿಲ್ಲದೆ ಖಿನ್ನತೆಗೆ ಚಿಕಿತ್ಸೆ ನೀಡಬಹುದಾಗಿದೆ." ಎಂದು ಆಮ್​ಸ್ಟರ್​ಡ್ಯಾಮ್ ಯುಎಂಸಿಯ ಡಾ. ಎರಿಕ್ ರುಹೆ ಹೇಳಿದರು.

ಇದನ್ನೂ ಓದಿ : World Smile Day 2023: ಮನಸಾರೆ ನಕ್ಕು ಬಿಡಿ ಒಮ್ಮೆ... ಕಾರಣ ಇಷ್ಟೇ ಇಂದು ವರ್ಲ್ಡ್​​ ಸ್ಮೈಲ್​ ಡೇ!

ABOUT THE AUTHOR

...view details