ಕರ್ನಾಟಕ

karnataka

ಆರಂಭಿಕ ಹಂತದಲ್ಲಿ ಹೀಗೆ ಮಾಡಿದ್ರೆ 'ಅಲ್ಜೈಮರ್' ನಿಯಂತ್ರಣ ಸಾಧ್ಯ ; ನರವಿಜ್ಞಾನ ತಜ್ಞರ ಸಲಹೆ ಹೀಗಿದೆ..

By

Published : Sep 21, 2021, 7:52 PM IST

Updated : Sep 21, 2021, 8:33 PM IST

Exercise
ವ್ಯಾಯಾಮ ()

ಇದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾದ್ದರಿಂದ ವೈದ್ಯರನ್ನು ಕಾಣುವುದರಿಂದ ಚಿಕಿತ್ಸೆ ಮೂಲಕ ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಆದರೆ, ಮರೆವನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು. ಇದನ್ನು ಆಪ್ತ ಸಮಾಲೋಚಕರನ್ನು ಭೇಟಿ ಮಾಡಿ, ಈ ಸಮಸ್ಯೆಯಿಂದಾಗುತ್ತಿರುವ ಮಾನಸಿಕ ಒತ್ತಡ ನಿಯಂತ್ರಿಸಿಕೊಳ್ಳುವ ಬಗ್ಗೆ ಸಲಹೆ ಪಡೆಯಬಹುದು..

ಬೆಂಗಳೂರು :ವಯಸ್ಸಾದ ನಂತರ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುವುದು ಸಾಮಾನ್ಯ. ಅದರಲ್ಲಿ ಮರೆವಿನ ಕಾಯಿಲೆಪ್ರಮುಖ. ಇಂದು “ವಿಶ್ವ ಅಲ್ಜೈಮರ್​ ಡೇ” (ಮರೆವಿನ ಕಾಯಿಲೆ ದಿನ). ವಯಸ್ಸಾದ ಬಳಿಕ ಒಂದೊಂದೇ ವಿಷಯದ ಬಗ್ಗೆ ಜ್ಞಾಪಕ ಶಕ್ತಿ ಕುಂದುತ್ತಾ ಬರುವುದನ್ನೇ ಅಲ್ಜೈಮರ್​ ಎನ್ನುತ್ತೇವೆ.

ಈ ಕಾಯಿಲೆ ಪ್ರಾರಂಭದಲ್ಲಿ ಅಷ್ಟಾಗಿ ಸಮಸ್ಯೆ ಎನಿಸದೆ ಹೋದರೂ, ಅನಂತರದಲ್ಲಿ ಇದೇ ದೊಡ್ಡ ಕಾಯಿಲೆಯಾಗಬಹುದು. ಇದನ್ನು ಮೊದಲ ಹಂತದಲ್ಲೇ ಆರೈಕೆ ಮಾಡಿದರೆ, ನಿಯಂತ್ರಣದಲ್ಲಿ ಇಡಬಹುದು.

ಸಾಮಾನ್ಯವಾಗಿ 60 ರಿಂದ 80 ವರ್ಷ ವಯಸ್ಸಿನವರಲ್ಲಿ ಈ ಕಾಯಿಲೆ ಕಾಣಿಸುತ್ತದೆ. ಇದು ಅನುವಂಶಿಯವಾಗಿಯೂ ಬರಬಹುದು ಎಂದು ಖ್ಯಾತ ನರ ವಿಜ್ಞಾನ ತಜ್ಞ ಡಾ. ಎನ್ ನಿತಿನ್ ಕುಮಾರ್ ಈಟಿವಿ ಭಾರತದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮರೆವಿನ ಕಾಯಿಲೆಗೆ ಇಂಥದ್ದೇ ಚಿಕಿತ್ಸೆ ಎಂದು ಇರುವುದಿಲ್ಲ. ಆದರೆ, ಆರೋಗ್ಯ ಸಮಸ್ಯೆ ತಲೆದೋರಿದರೆ ಮಾತ್ರ ಚಿಕಿತ್ಸೆ ನೀಡಬಹುದು. ಮರೆವಿನ ಕಾಯಿಲೆಯ ಕೆಲವು ಹಂತಗಳ ಬಗೆಗೆ ತಿಳಿಸಿದ್ದಾರೆ.

ಖ್ಯಾತ ನರ ವಿಜ್ಞಾನ ತಜ್ಞ ಡಾ. ಎನ್ ನಿತಿನ್ ಕುಮಾರ್

ಮೊದಲ ಹಂತದಲ್ಲಿ ಕಾಡುವ ಸಮಸ್ಯೆ

ಈ ಹಂತದಲ್ಲಿ ಅಲ್ಜೈಮರ್​ ಇರುವ ವ್ಯಕ್ತಿಯಲ್ಲಿ ಯಾವುದೇ ರೀತಿಯ ದೌರ್ಬಲ್ಯ ಕಂಡು ಬರುವುದಿಲ್ಲ. ಸಣ್ಣ ಪುಟ್ಟ ಮರೆವು ಮಾತ್ರ ಕಾಣಿಸುತ್ತದೆ. ಇಟ್ಟ ವಸ್ತುಗಳನ್ನು ಮರೆಯುತ್ತಿರುವುದು ಇತ್ಯಾದಿ ಅತಿ ಸಾಮಾನ್ಯವೆನಿಸುತ್ತದೆ ಎನ್ನುತ್ತಾರೆ.

ಎರಡನೇ ಹಂತದಲ್ಲಾಗುವ ಸಮಸ್ಯೆ :ಈ ಹಂತದಲ್ಲಿ ಮರೆವು ಕೊಂಚ ಏರಿಕೆಯಾಗಿರುತ್ತದೆ. ಇಟ್ಟ ವಸ್ತು ಆ ಕ್ಷಣದಲ್ಲೇ ಮರೆಯುವುದು. ಈಗಷ್ಟೇ ತಿಂದ ತಿಂಡಿಯನ್ನೇ ಮರೆಯುವುದು. ಮಾತುಗಳನ್ನು ಮರೆಯುವುದು ಇತ್ಯಾದಿ.

ಆದರೆ, ಈ ಹಂತದಲ್ಲಿ ತಾವು ಮರೆತ ವಿಷಯಗಳನ್ನು ಕೆಲವು ಕ್ಷಣದಲ್ಲಿ ನೆನಪು ಮಾಡಿಕೊಂಡರೆ ಮರುಕಳಿಸುತ್ತಿರುತ್ತದೆ. ಈ ಹಂತದಲ್ಲಿಯೂ ಕೆಲವರು ಹೆಚ್ಚಾಗಿ ಗಮನ ಹರಿಸುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ಮೂರನೇ ಹಂತ :ಈ ವೇಳೆ ಮರೆವು ಸ್ವಲ್ಪ ಹೆಚ್ಚಾಗಿಯೇ ಕಾಡುತ್ತದೆ. ದೈನಂದಿನ ಚಟುವಟಿಕೆಗಳನ್ನೇ ಮರೆಯುವುದು, ಹಣವನ್ನು ಎಣಿಸಲು ಸಾಧ್ಯವಾಗದೆ ಇರುವುದು. ಸರಳ ಸಮಸ್ಯೆಗಳನ್ನು ಪರಿಹರಿಸಲು ಆಗದೇ ಇರುವುದು. ಬಣ್ಣಗಳ ಗುರುತಿಸುವಿಕೆಯಲ್ಲಿ ಕಷ್ಟ. ಮಾತುಗಳನ್ನೇ ಮರೆಯುವುದು ಇತ್ಯಾದಿ ಸಮಸ್ಯೆಗಳು ಉಲ್ಭಣಗೊಳ್ಳುತ್ತಾ ಹೋಗುತ್ತವೆ ಎಂದು ಮಾಹಿತಿ ನೀಡುತ್ತಾರೆ.

ಮಧ್ಯಮ ಹಂತ :ಈ ಹಂತದಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿ ಕಾಡ ತೊಡಗುತ್ತದೆ. ಸಂಬಂಧಗಳನ್ನು ಮರೆಯುವುದು. ವ್ಯಕ್ತಿಗಳನ್ನು ಗುರುತಿಸಲು ಆಗದೇ ಇರುವುದು. ತೀವ್ರ ಕೋಪ, ಆತಂಕ, ಒತ್ತಡ, ಚಡಪಡಿಕೆ ಇತ್ಯಾದಿ ಸಮಸ್ಯೆಗಳು ಉಲ್ಭಣವಾಗುತ್ತವೆ. ಈ ಹಂತದಲ್ಲಿಯೇ ವೈದ್ಯರನ್ನು ಕಾಣುವುದು ಹೆಚ್ಚು ಉತ್ತಮ ಎಂದು ಹೇಳುತ್ತಾರೆ.

ಕೊನೆಯ ಹಂತ :ಮರೆವು ಕೊನೆಯ ಹಂತಕ್ಕೆ ತಲುಪಿದಾಗ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡಬಹುದು. ದೈಹಿಕ ಚಟುವಟಿಕೆಗಳ ಮೇಲೆ ನಿಯಂತ್ರಣವಿಲ್ಲದೆ ಇರುವುದು, ಮಾತನಾಡುವುದನ್ನೇ ಮರೆಯುವುದು, ಖಿನ್ನತೆ, ಕರುಳು ಸಂಬಂಧ ಕಾಯಿಲೆ, ತೂಕ ಇಳಿಯುವುದು, ಆಹಾರ ಸೇವನೆಯಲ್ಲಿ ಕಷ್ಟ, ನರಳುವಿಕೆ ಇತ್ಯಾದಿ ಸಮಸ್ಯೆ ಎದುರಿಸುತ್ತಾರೆ.

ಇದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾದ್ದರಿಂದ ವೈದ್ಯರನ್ನು ಕಾಣುವುದರಿಂದ ಚಿಕಿತ್ಸೆ ಮೂಲಕ ಆರೋಗ್ಯ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಆದರೆ, ಮರೆವನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು. ಇದನ್ನು ಆಪ್ತ ಸಮಾಲೋಚಕರನ್ನು ಭೇಟಿ ಮಾಡಿ, ಈ ಸಮಸ್ಯೆಯಿಂದಾಗುತ್ತಿರುವ ಮಾನಸಿಕ ಒತ್ತಡ ನಿಯಂತ್ರಿಸಿಕೊಳ್ಳುವ ಬಗ್ಗೆ ಸಲಹೆ ಪಡೆಯಬಹುದು ಎನ್ನುತ್ತಾರೆ.

ಓದಿ:ಮಾನಸಿಕ ಆರೋಗ್ಯಕ್ಕೆ ಸಂಗೀತವೇ ಮದ್ದು.. ಇದು ಬರೀ ಮಾತಲ್ಲ, ಸಂಶೋಧನೆಯಿಂದ ಸಾಬೀತು..

Last Updated :Sep 21, 2021, 8:33 PM IST

ABOUT THE AUTHOR

...view details