ಕರ್ನಾಟಕ

karnataka

ಮುದ್ದೇಬಿಹಾಳದಲ್ಲಿ ಅದ್ದೂರಿ ಗಣೇಶೋತ್ಸವ: ಪರಿಸರಸ್ನೇಹಿ ಮೂರ್ತಿಗಳಿಗೆ ಬೇಡಿಕೆ

By

Published : Aug 30, 2022, 7:56 PM IST

ಮುದ್ದೇಬಿಹಾಳ ಪಟ್ಟಣದಲ್ಲಿ ಈ ಬಾರಿ ಪರಿಸರಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ಪರಿಸರ ಸ್ನೇಹಿ ಗಣೇಶ ಮೂರ್ತಿ
ಪರಿಸರ ಸ್ನೇಹಿ ಗಣೇಶ ಮೂರ್ತಿ

ಮುದ್ದೇಬಿಹಾಳ: ಕೋವಿಡ್ ಎರಡು ಅಲೆಗಳು ಕಡಿಮೆಯಾದ ಬಳಿಕ ಈ ವರ್ಷ ಅದ್ಧೂರಿ ಗಣೇಶೋತ್ಸವ ಆಚರಣೆಗೆ ಎಲ್ಲೆಡೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗಣಪತಿ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಯುವಕರ ಸಂಘಗಳು ಮುಂದಾಗಿದ್ದರೂ ಅವರನ್ನು ಮೂರ್ತಿಗಳ ಅಭಾವ ಕಾಡುತ್ತಿದೆ.

ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿರುವುದು

ಮಹಾರಾಷ್ಟ್ರದ ಸೋಲಾಪೂರದಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡಲು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೂರ್ತಿಗಳೇ ದೊರೆಯುತ್ತಿಲ್ಲ ಎಂಬ ಮಾತು ಮಾರಾಟಗಾರರಿಂದ ಕೇಳಿ ಬಂದಿವೆ. ಪಟ್ಟಣದ ಎಪಿಎಂಸಿಯಲ್ಲಿರುವ ನಾಲ್ಕೈದು ಸ್ಥಳಗಳಲ್ಲಿ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಒಂದೆಡೆ ಸಂಗ್ರಹಿಸಿಟ್ಟು ಗ್ರಾಮೀಣ ಹಾಗೂ ನಗರ ಪ್ರದೇಶದ ಗಜಾನನ ಮಂಡಳಿಯವರು ಕರೆದೊಯ್ಯುವುದು ವಾಡಿಕೆ.

ಗಣೇಶನ ವಿಗ್ರಹ

ಆದರೆ, ಬಹುತೇಕ ದೊಡ್ಡ ದೊಡ್ಡ ಗಣಪತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದರೂ ಮೂರ್ತಿಗಳ ಅಭಾವ ಸೃಷ್ಟಿಯಾಗಿದೆ. ಆದರೂ ಲಭ್ಯವಿರುವ 1-2 ಅಡಿ ಗಣಪತಿ ಮೂರ್ತಿಗಳನ್ನೇ ಗಜಾನನ ಮಂಡಳಿಯವರು ಬುಕ್ ಮಾಡುತ್ತಿರುವುದು ಕಂಡು ಬಂದಿದೆ. 100 ರೂ. ಗಳಿಂದ 20 ಸಾವಿರ ರೂ.ಗಳವರೆಗೂ ಗಣೇಶ ಮೂರ್ತಿಗಳು ಮಾರಾಟ ಮಾಡುತ್ತಿದ್ದಾರೆ.

ಗಣೇಶನ ವಿಗ್ರಹಗಳು ಪತ್ತೆಯಾಗಿರುವುದು

ಪರಿಸರ ಸ್ನೇಹಿ ಗಣಪತಿಗೆ ಬೇಡಿಕೆ: ಪಟ್ಟಣದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೂ ಬೇಡಿಕೆ ಹೆಚ್ಚಿದೆ. ಅದರಲ್ಲೂ ಸಂಪ್ರದಾಯ ಬದ್ಧವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾಡಿಕೊಡುವ ಗುಂಡು ಲಕ್ಷ್ಮಣ ಬಡಿಗೇರ ಕುಟುಂಬದವರು ಮೊದಲೇ ಹೇಳಿದವರಿಗೆ ಮೂರ್ತಿಗಳನ್ನು ಮಾಡಿಕೊಡುತ್ತಾರೆ.

ಬಿಳೇಭಾವಿ ಗ್ರಾಮದಿಂದ ಮಣ್ಣನ್ನು ತಂದು ಅದನ್ನು ನಿಯಮ ಬದ್ಧವಾಗಿ ಗಣಪತಿ ಮಾಡಿಕೊಡುತ್ತಾರೆ. ಅನಾದಿ ಕಾಲದಿಂದಲೂ ಬಡಿಗೇರ ಕುಟುಂಬದವರು ಗ್ರಾಮದೇವತೆ ದೇವಸ್ಥಾನದ ಪೂಜಾರಿಕೆ ಮಾಡಿಕೊಂಡು ಬಂದಿದ್ದಾರೆ. ಇವರು ತಯಾರಿಸುವ ಗಣೇಶ ಮೂರ್ತಿಯ ಮೇಲಿನ ಪ್ರಭಾವಳಿ ಗ್ರಾಮದೇವತೆ ದ್ಯಾಮವ್ವ ದೇವಿ ಮೇಲಿರುವ ಪ್ರಭಾವಳಿಯ ಮಾದರಿಯನ್ನು ಹೋಲುತ್ತದೆ. 150ಕ್ಕೂ ಹೆಚ್ಚು ಮಣ್ಣಿನ ಮೂರ್ತಿಗಳನ್ನು ಮಾಡಿ ಮಾರಾಟ ಮಾಡುತ್ತಾರೆ.

ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆ

ಸಂಪ್ರದಾಯಬದ್ಧವಾಗಿ ತಯಾರಿಸಿರುತ್ತೇವೆ: ಮಣ್ಣಿನ ಗಣಪತಿಯ ಕುರಿತು ವಿವರಿಸುವ ಈರಣ್ಣ ಬಡಿಗೇರ ಹಾಗೂ ಗುಂಡು ಬಡಿಗೇರ ಅವರು, ಮಣ್ಣಿನ ಗಣಪತಿಗಳು ಪರಿಸರಕ್ಕೆ ಹಾನಿಕಾರಕವಲ್ಲ. ಅಲ್ಲದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಸಂಪ್ರದಾಯಬದ್ಧವಾಗಿ ತಯಾರಿಸಿರುತ್ತೇವೆ. ಕೆಲವರು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ತಂದು ಪೂಜಿಸಿದ ನಂತರ ಅವುಗಳನ್ನು ವಿಸರ್ಜನೆ ಮಾಡಿದಾಗ ಮೂರ್ತಿಗಳು ಭಗ್ನಗೊಂಡು ಧಾರ್ಮಿಕ ಭಾವನೆಗೆ ಧಕ್ಕೆ ಬರುತ್ತದೆ. ಈ ಕಾರಣಕ್ಕೆ ಮಣ್ಣಿನಲ್ಲಿ ಕರಗುವ ಮೂರ್ತಿಗಳನ್ನು ತಯಾರಿಸುತ್ತೇವೆ ಎಂದು ಹೇಳುತ್ತಾರೆ.

ಇದನ್ನೂ ಓದಿ:ಗಣಪನಿಗಿಂತ ಗೌರಿಗೆ ಹೆಚ್ಚು ಪ್ರಾಮುಖ್ಯತೆ: ಚಾಮರಾಜನಗರದ ಕುದೇರಿನಲ್ಲಿ ಸಂಭ್ರಮ

ABOUT THE AUTHOR

...view details