ಕರ್ನಾಟಕ

karnataka

ಸಿಂದಗಿ ಉಪಚುನಾವಣೆ.. ಕ್ಷೇತ್ರದಲ್ಲಿ ಜೋರಾಗಿದೆ ಜಾತಿ ಲೆಕ್ಕಾಚಾರ

By

Published : Oct 23, 2021, 12:07 PM IST

ಸಿಂದಗಿ ಉಪಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿ ಲಿಂಗಾಯತ ಸಮುದಾಯ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗಾಣಿಗ ಸಮುದಾಯ ಹಾಗೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಉಪಚುನಾವಣೆಯ ಈ ಸಂದರ್ಭದಲ್ಲಿ ಜಾತಿ ಲೆಕ್ಕಾಚಾರ ಜೋರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

by election 2021
ಉಪಚುನಾವಣೆ 2021

ವಿಜಯಪುರ: ಸಿಂದಗಿ ಉಪಚುನಾವಣೆಯಲ್ಲಿ ಈಗ ಜಾತಿ ಲೆಕ್ಕಾಚಾರ ಆರಂಭವಾಗಿದೆ. ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್​​ಗೆ ಸಂಕಷ್ಟ ತಂದೊಡ್ಡಿದ್ದರೆ, ಬಿಜೆಪಿ ಗೆಲುವಿನ ಕನಸು ಕಾಣುತ್ತಿದೆ.

ಸಿಂದಗಿ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಸಾಮಾನ್ಯ ವರ್ಗದವರು. ಎರಡನೇ ಸ್ಥಾನದಲ್ಲಿ ಹಿಂದುಳಿದ ವರ್ಗದವರಿದ್ದಾರೆ. ಮೂರನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. 20ಸಾವಿರಕ್ಕಿಂತ ಅಧಿಕ ಮುಸ್ಲಿಂ ಜನಾಂಗದವರಾಗಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿ ಲಿಂಗಾಯತ ಸಮುದಾಯ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗಾಣಿಗ ಸಮುದಾಯ ಹಾಗೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ.

ಮತವಿಭಜನೆ ಲೆಕ್ಕಾಚಾರ:

ಮೊದಲಿನಿಂದಲೂ ಕಾಂಗ್ರೆಸ್​ಗೆ ಮುಸ್ಲಿಂ ಸಮುದಾಯ ಬೆಂಬಲವಾಗಿ ನಿಂತಿದೆ. ಹಿಂದುತ್ವದ ಅಜೆಂಡಾ ಹೊಂದಿರುವ ಬಿಜೆಪಿಗೆ ಮುಸ್ಲಿಂ ಸಮುದಾಯದಿಂದ ಅಷ್ಟೇನು ಲಾಭ ಇಲ್ಲ ಎನ್ನುವುದು ಪ್ರತಿ ಚುನಾವಣೆಯಲ್ಲಿ ಕಂಡು ಬಂದಿದೆ. ಆದರೆ 20ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯದವರೇ ಕಣದಲ್ಲಿ ಇರುವ ಕಾರಣ ಮತಗಳು ವಿಭಜನೆಯಾಗುವ ಸಾಧ್ಯತೆಗಳಿವೆ. ಇದು ಕಾಂಗ್ರೆಸ್ ಪಾಲಿಗೆ ಮಗ್ಗಲಿನ ಮುಳ್ಳಾದಂತಾಗಿದೆ. ಹೀಗಾಗಿ ಮುಸ್ಲಿಂರ ಓಲೈಕೆಗೆ ಮಾಜಿ ಸಿಎಂ ಯಡಿಯೂರಪ್ಪ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೂಗಳಿಗೆ ನೀಡಿದ ಸೌಲಭ್ಯ ಮುಸ್ಲಿಂರಿಗೂ ನೀಡಲಾಗಿದೆ. ನೀಡದೇ ಇದ್ದ ಒಂದು ಉದಾಹರಣೆ ತೋರಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವ ಸವಾಲು ಸಹ ಹಾಕಿದ್ದಾರೆ.

ಜಾತಿ ಸಮೀಕರಣ:

ರೆಡ್ಡಿ, ಲಿಂಗಾಯತ, ಗಾಣಿಗ, ಬಣಜಿಗ, ಇತರೆ ಸೇರಿ ಅಂದಾಜು 1,24,143, ಹಿಂದುಳಿದ ವರ್ಗಗಳ ಪೈಕಿ ಕುರುಬ, ತಳವಾರ, ಸವಿತಾ ಸಮಾಜ, ಕುಂಬಾರ, ಇತರೆ ಸೇರಿ ಅಂದಾಜು 60,784, ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡದ ಹರಿಜನ, ಲಂಬಾಣಿ, ಪರಿಶಿಷ್ಟ ಪಂಗಡ ಇತರೆ ಸೇರಿ ಅಂದಾಜು 27,637, ಮುಸ್ಲಿಂ ಅಂದಾಜು 20,465 ಹಾಗೂ ಜೈನ್ ಸಮುದಾಯದ ಅಂದಾಜು 280 ಜನಸಂಖ್ಯೆ ಇದೆ.

ಒಟ್ಟು ಮತದಾರರು:

2018ರಲ್ಲಿ 11,54,55 ಪುರುಷ, 10,76,04 ಮಹಿಳೆಯರು ಸೇರಿ ಒಟ್ಟು 2, 23,059 ಮತದಾರರು ಇದ್ದರು. ಸದ್ಯ 2021ರ ಉಪಚುನಾವಣೆಗೆ 1,20,949 ಪುರುಷರು, 1,13,327 ಮಹಿಳೆಯರು ಹಾಗೂ ಇತರೆ 33 ಸೇರಿ ಒಟ್ಟು 2,34,309ಮತದಾರರು ಇದ್ದಾರೆ.

ಕಳೆದ ಚುನಾವಣೆ ಫಲಿತಾಂಶ:

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ ಭೂಸನೂರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ. ಮನಗೂಳಿ ಸುಮಾರು 9,305 ಮತಗಳ ಅಂತರದಿಂದ ಜಯ ಗಳಿಸಿದ್ದರು. ಆದರೆ ಎಂ.ಸಿ. ಮನಗೂಳಿಯವರ ಅಕಾಲಿಕ ನಿಧನದಿಂದ ಸಿಂದಗಿ ಕ್ಷೇತ್ರಕ್ಕೆ ಸದ್ಯ ಉಪ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ:ಕೇಂದ್ರಕ್ಕೆ 45 ರೂಪಾಯಿಗೆ ಪೆಟ್ರೋಲ್ ನೀಡಲು ಸಾಧ್ಯವಿದೆ: ವೀರಪ್ಪ ಮೊಯ್ಲಿ

ಕಳೆದ ಬಾರಿ ಪರಾಭವಗೊಂಡಿದ್ದ ಬಿಜೆಪಿಯ ರಮೇಶ ಭೂಸನೂರ ಮತ್ತೊಮ್ಮೆ ಕಣದಲ್ಲಿದ್ದಾರೆ. ದಿ. ಎಂ.ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಜೆಡಿಎಸ್ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಬಾರಿ ಜೆಡಿಎಸ್ ನಿಂದ ಹೊಸ ಮುಖವಾಗಿ ನಾಜಿಯಾ ಅಂಗಡಿ ಕಣದಲ್ಲಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡುತ್ತಿದ್ದಾರೆ.

ಘಟಾನುಘಟಿ ನಾಯಕರು:ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಘಟಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಎಲ್ಲ ನಾಯಕರು ಜೋರಾಗಿ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ ಸೇರಿ ಹಲವು ನಾಯಕರು ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಇವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ABOUT THE AUTHOR

...view details