ಕರ್ನಾಟಕ

karnataka

ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ: ಯುವಕನ ಬರ್ಬರ ಹತ್ಯೆ

By ETV Bharat Karnataka Team

Published : Oct 21, 2023, 10:13 AM IST

ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ ನಿನ್ನೆ (ಶುಕ್ರವಾರ) ರಾತ್ರಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ನಡೆದಿದೆ.

Barbaric killing of a young man
ಭೀಮಾತಿರದಲ್ಲಿ ಮತ್ತೊಂದು ಭಯಾನಕ ಕೊಲೆ ಪ್ರಕರಣ: ಹಳೆ ವೈಷಮ್ಯದ ಹಿನ್ನಲೆ ಯುವಕನ ಬರ್ಬರ ಹತ್ಯೆ

ಕಲಬುರಗಿ:ಭೀಮಾ ತೀರದ ಚೌಡಾಪುರನಲ್ಲಿ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷನ ಕೊಲೆ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೆ ನೆತ್ತರು ಹರಿದಿದೆ. ದಸರಾ ಹಬ್ಬಕ್ಕೆಂದು ಊರಿಗೆ ಬಂದಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಅಫಜಲಪುರ ತಾಲೂಕಿನ ಸಿಧನೂರ ಗ್ರಾಮದಲ್ಲಿ ನಡೆದಿದೆ.

ಬಲಭೀಮ ಸಗರ (23) ಕೊಲೆಯಾದ ವ್ಯಕ್ತಿ. ಜಮೀನಿನ ವಿಚಾರ ಹಾಗೂ ಹಳೆ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಶಿರಚ್ಛೇದ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಯಾದ ಬಲಭೀಮ ಜಮೀನು ವಿಚಾರವಾಗಿ ಗಲಾಟೆ ಮಾಡಿಕೊಂಡು ಜೈಲು ಸೇರಿದ್ದನು. ಇತ್ತೀಚೆಗಷ್ಟೆ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಈತ ಬಳಿಕ ಕಲಬುರಗಿ ನಗರದಲ್ಲಿ ವಾಸವಿದ್ದ. ದಸರಾ ಹಬ್ಬದ ಹಿನ್ನೆಲೆ ಗ್ರಾಮಕ್ಕೆ ತೆರಳಿದ್ದಾಗ ಹರಿತವಾದ ಮಾರಕಾಸ್ತ್ರದಿಂದ ದುಷ್ಕರ್ಮಿಗಳು ಬಲಭೀಮನ ಹತ್ಯೆ ಮಾಡಿದ್ದಾರೆ.

ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು:ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಸಿಪಿಐ ಪಂಡಿತ ಸಗರ, ರೇವೂರ ಬಿ ಠಾಣೆಯ ಪಿಎಸ್ಐ ಸವೀತಾ ಕಲ್ಲೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ರೇವೂರ ಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇತ್ತೀಚೆಗೆ ಗ್ರಾಮ ಪಂಚಾಯತ್ ಅಧ್ಯಕ್ಷನ ಕೊಲೆ:ಮತ್ತೊಂದೆಡೆ, ಇದೇ ಅಫಜಲಪುರ ತಾಲೂಕಿ‌ನ ಚೌಡಾಪುರ ಜನನೀಬಿಡ ಪ್ರದೇಶ ಬಸ್ ನಿಲ್ದಾಣ ಮುಂಭಾಗದಲ್ಲಿ ಅಕ್ಟೋಬರ್ 13 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮದರಾ (ಬಿ) ಗ್ರಾಮ ಪಂಚಾಯತ್ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ (57) ರವರು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಶವ ಸಾಗಿಸುವ ಉಚಾಯಿಗೆ ವೆಲ್ಡಿಂಗ್ ಮಾಡಿಸಲು ಚವಡಾಪುರ ಗ್ರಾಮದ ಗುಲಬರ್ಗಾ ಗ್ಯಾರೇಜ್ ಹತ್ತಿರ ನಿಂತಿದ್ದ ವೇಳೆಯಲ್ಲಿ, ದುಷ್ಕರ್ಮಿಗಳು ಗೌಡಪ್ಪಗೌಡ ಬಿರಾದಾರ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಸಿಧನೂರ ಗ್ರಾಮದಲ್ಲಿ ಬಲಭೀಮ ಎಂಬ ಯುವಕನ ಭಯಾನಕ ಕೊಲೆ ನಡೆದಿದ್ದು ಜನರ ನಿದ್ದೆಗಡೆಸಿದೆ.

ಪ್ರತ್ಯೇಕ ಪ್ರಕರಣ- ಯುವಕನ ಬರ್ಬರ ಕೊಲೆ:ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ‌ ಕೊಲೆ‌ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಬಳ್ಳಿ ಗ್ರಾಮದ ಹೊರ ಭಾಗದ ಜಮೀನಿನಲ್ಲಿ ನಿನ್ನೆ (ಶುಕ್ರವಾರ) ರಾತ್ರಿ ನಡೆದಿದೆ. ಭದ್ರಾವತಿ ತಾಲೂಕು ಬಾಬಳ್ಳಿ ಗ್ರಾಮದ ನಿವಾಸಿ ಸೈಯದ್ ರಜಿಕ್(30) ಕೊಲೆಯಾದ ವ್ಯಕ್ತಿ. ವೈಯಕ್ತಿಕ ಕಾರಣದ ಹಿನ್ನೆಲೆ ಕೊಲೆ ಪ್ರಕರಣ ನಡೆದಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಸಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಭದ್ರಾವತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ

ABOUT THE AUTHOR

...view details