ಕರ್ನಾಟಕ

karnataka

ಕಾರವಾರ: ಪ್ಲೈ ಓವರ್ ಕಾಮಗಾರಿ ವೇಳೆ ಸುರಕ್ಷತೆ ಮರೆತ ಕಾರ್ಮಿಕರು?

By

Published : Nov 28, 2021, 1:18 PM IST

Is Workers forgetting their safety in  fly-over work at Karwar
ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ?

ಫ್ಲೈಓವರ್ ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಹೆಲ್ಮೆಟ್ ಸೇರಿದಂತೆ ಸುರಕ್ಷತಾ ಸಾಧನಗಳನ್ನು ಧರಿಸದೇ ಕೆಲಸ ಮಾಡುತ್ತಿದ್ದಾರೆ. ಕೆಲಸದ ಪ್ರದೇಶದ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನೂ ಅಳವಡಿಸಿಲ್ಲ. ಎಲ್ಲೆಂದರಲ್ಲಿ ಕಾಮಗಾರಿಯ ವಸ್ತುಗಳನ್ನು ಇಟ್ಟಿದ್ದಾರೆ. ಹೀಗಾಗಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರ ಜೀವಕ್ಕೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರವಾರ: ಕೋವಿಡ್​ 2ನೇ ಅಲೆಯ ಅಬ್ಬರ ಹಾಗೂ ವರುಣಾರ್ಭಟದಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಪ್ರಾರಂಭಗೊಂಡಿವೆ. ಅದರಲ್ಲೂ ಕಾರವಾರ ನಗರದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಫ್ಲೈಓವರ್ ನಿರ್ಮಾಣ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

ಆದ್ರೆ, ಕಾಮಗಾರಿಯಲ್ಲಿ ಕಾರ್ಮಿಕರು ಮಾತ್ರ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಕೆಲಸ ಮಾಡುತ್ತಿದ್ದು, ಹೆದ್ದಾರಿಯಲ್ಲಿ ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ.


ನಗರಕ್ಕೆ ಹೊಂದಿಕೊಂಡೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎನ್ನುವ ಕಾರಣಕ್ಕೆ ಫ್ಲೈ ಓವರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ನಗರದ ಲಂಡನ್ ಬ್ರಿಡ್ಜ್‌ನಿಂದ ಆರ್.ಟಿ.ಒ ಕಚೇರಿವರೆಗೆ ಸುಮಾರು 1.4 ಕಿ.ಮೀ ಉದ್ದದ ಫ್ಲೈಓವರ್ ಕೆಲಸ ನಡೆಯುತ್ತಿದೆ. ಕೊರೊನಾ 2ನೇ ಅಲೆಯ ಬಳಿಕ ಸ್ಥಗಿತಗೊಂಡಿದ್ದ ಈ ಕಾಮಗಾರಿ ಸದ್ಯ ಪುನರಾರಂಭಗೊಂಡಿದೆ.

ಆದ್ರೆ, ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಯಾವುದೇ ಸುರಕ್ಷತೆ ವಹಿಸುತ್ತಿಲ್ಲ. ಕಾಮಗಾರಿಯ ವಸ್ತುಗಳನ್ನು ಹೆದ್ದಾರಿಯ ಅಕ್ಕಪಕ್ಕ ಎಲ್ಲೆಂದರಲ್ಲಿ ಇಟ್ಟಿದ್ದಾರೆ. ಒಂದೆಡೆ ಕಾರ್ಮಿಕರು ಅಪಾಯಕಾರಿಯಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಇನ್ನೊಂದೆಡೆ ರಸ್ತೆಯಲ್ಲಿ ಸಂಚರಿಸುವ ಸವಾರರು ಓಡಾಡಲು ಪರದಾಡಬೇಕಾದ ಪರಿಸ್ಥಿತಿ ಇದೆ. ಫ್ಲೈ ಓವರ್ ಕಾಮಗಾರಿ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಕಾರ್ಮಿಕರು ಸೇರಿದಂತೆ ವಾಹನ ಸವಾರರಿಗೂ ಸಹ ಅಪಾಯ ಎದುರಾಗುವ ಆತಂಕದ ವಾತಾವರಣ ಇದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.

ಫ್ಲೈ ಓವರ್ ನಿರ್ಮಾಣ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ. ಕೊರೊನಾ ಅಬ್ಬರ ಹಾಗೂ ಧಾರಾಕಾರ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಇದೀಗ ಕಾಮಗಾರಿ ಪ್ರದೇಶದಲ್ಲಿ ಕಾರ್ಮಿಕರು ಹೆಲ್ಮೆಟ್ ಸೇರಿದಂತೆ ಸುರಕ್ಷತಾ ಸಾಧನಗಳನ್ನು ಧರಿಸದೇ ಕೆಲಸ ಮಾಡುತ್ತಿದ್ದು, ಕಾಮಗಾರಿ ಪ್ರದೇಶದ ಸುತ್ತ ಯಾವುದೇ ಬ್ಯಾರಿಕೇಡ್‌ಗಳನ್ನು ಅಳವಡಿಸಿಲ್ಲ. ಕಾಮಗಾರಿ ಪ್ರದೇಶಕ್ಕೆ ಹೊಂದಿಕೊಂಡೇ ಸದ್ಯ ಸರ್ವೀಸ್ ರಸ್ತೆಯಿದ್ದು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದರಿಂದ ಅಪಾಯ ಎದುರಾಗುವ ಆತಂಕ ಇದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ, ಕಾರ್ಮಿಕರಿಗೆ ಸುರಕ್ಷತಾ ಸಾಧನಗಳನ್ನು ನೀಡಬೇಕು ಎನ್ನುವ ಕಾನೂನು ಇದ್ದು, ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆ ಕಂಪೆನಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ:ಕೊರೊನಾ ನೆಗೆಟಿವ್​ ವರದಿ ತರದೇ ಗಡಿಯಲ್ಲಿ ಮಹಾರಾಷ್ಟ್ರ ವೈದ್ಯನ ರಂಪಾಟ.. ಬೆಳಗಾವಿ ಪೊಲೀಸ್​ ಮೇಲೆ ಹಲ್ಲೆಗೆ ಯತ್ನ

ಆಮೆಗತಿಯಲ್ಲಿ ಸಾಗುತ್ತಿದ್ದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಚುರುಕು ಪಡೆದುಕೊಂಡಿರುವುದು ಉತ್ತಮ ಬೆಳವಣಿಗೆಯಾದ್ರೂ ಸಹ ಕಾರ್ಮಿಕರ ಸುರಕ್ಷತೆ ಕುರಿತು ನಿರ್ಲಕ್ಷ್ಯ ವಹಿಸಿರುವುದು ದುರಂತವೇ ಸರಿ. ಇನ್ನಾದರೂ ಸಂಬಂಧಪಟ್ಟ ಗುತ್ತಿಗೆ ಕಂಪೆನಿ ಕಾರ್ಮಿಕರಿಗೆ ಸುರಕ್ಷಾ ಸಾಧನಗಳನ್ನು ನೀಡುವುದರ ಜೊತೆಗೆ ಹೆದ್ದಾರಿ ಸವಾರರ ಸುರಕ್ಷತೆ ಕುರಿತು ಗಮನ ಹರಿಸಬೇಕಿದೆ.

ABOUT THE AUTHOR

...view details