ಉಡುಪಿ :ಕರಾವಳಿಯಲ್ಲಿ ಕೋಮು ಸೌಹಾರ್ದ ಸಾರುವ ಹತ್ತಾರು ನಿದರ್ಶನಗಳು ನಮ್ಮ ಮುಂದಿವೆ. ಈ ಸಾಲಿಗೆ ಜಿಲ್ಲೆಯ ಶಿರ್ವ ಮುಖ್ಯರಸ್ತೆಯ ಮಟ್ಟಾರು ಅಟ್ಟಿಂಜ ಕ್ರಾಸ್ನ ಶ್ರೀ ಸಿದ್ಧಿವಿನಾಯಕ ದೇವಾಲಯ ಸೇರಿದೆ. ಇದರ ವಿಶೇಷ ಎಂದರೆ ಒಂದು ಬದಿಯಲ್ಲಿ ಮುಸಲ್ಮಾನರ ಪವಿತ್ರ ಮಸೀದಿ ಕೂಡ ಇದ್ದು, ಅದರ ಎದುರಿಗೆ ದೇವಾಲಯವೂ ತಲೆ ಎತ್ತಿದೆ.
ಇಷ್ಟೇ ಅಲ್ಲ, ಇಂದು ಲೋಕಾರ್ಪಣೆಗೊಂಡ ಈ ಸಿದ್ಧಿವಿನಾಯಕ ದೇವಸ್ಥಾನವನ್ನು ನಿರ್ಮಿಸಿ ಹಿಂದೂಗಳಿಗೆ ಕೊಡುಗೆಯಾಗಿ ನೀಡಿರುವುದು ಒಬ್ಬ ಕ್ರಿಶ್ಚಿಯನ್ ವ್ಯಕ್ತಿ ಎಂಬುವುದು ಇನ್ನೊಂದು ವಿಶೇಷ. 77 ವರ್ಷದ ಗೇಬ್ರಿಯಲ್ ಫೇಬಿಯನ್ ನಜರತ್ ಅವರ ತಂದೆಯಿಂದ ಬಳುವಳಿಯಾಗಿ ಬಂದ ಜಾಗದಲ್ಲಿ ಭವ್ಯ ದೇವಸ್ಥಾನ ನಿರ್ಮಿಸಿ ಹಿಂದೂಗಳಿಗೆ ಹಸ್ತಾಂತರಿಸಿದ್ದಾರೆ.
ಹಾಗಂತಾ, ಇದು ಸಣ್ಣ ಪ್ರಾರ್ಥನಾಲಯ ಎಂದುಕೊಳ್ಳಬೇಡಿ, ಗೇಬ್ರಿಯಲ್ ಅವರು ಈ ದೇವಸ್ಥಾನಕ್ಕೆ ಬರೋಬ್ಬರಿ 2 ಕೋಟಿ ರೂ. ತಮ್ಮ ಸ್ವಂತ ಹಣ ಖರ್ಚು ಮಾಡಿದ್ದಾರೆ. ಗೇಬ್ರಿಯಲ್ ಫೇಬಿಯನ್ ನಜರತ್ ಅವರು ತಮ್ಮ ತಂದೆ-ತಾಯಿಯ ಸ್ಮರಣಾರ್ಥವಾಗಿ ಈ ದೇವಸ್ಥಾನ ಕಟ್ಟಿಸಿದ್ದಾರೆ. ಮುಂಬೈನಲ್ಲಿ ಉದ್ಯಮ ನಡೆಸುತ್ತಿದ್ದ ಅವರು ಊರಿಗೆ ಬಂದು ಇಲ್ಲೇ ನೆಲೆಸಿದ್ದಾರೆ.