ಕರ್ನಾಟಕ

karnataka

ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ: ಡಿಕೆ ಶಿವಕುಮಾರ್

By

Published : Apr 24, 2023, 12:34 PM IST

ಕೊಲ್ಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಬಾರಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

DKS
DKS

ಡಿಕೆ ಶಿವಕುಮಾರ್

ಉಡುಪಿ:ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕನಿಷ್ಠ 10 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಸೋಮವಾರ ಕೊಲ್ಲೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಭಾನುವಾರ ಬೈಂದೂರಿನಲ್ಲಿ ನಡೆದ ನಮ್ಮ ಪಕ್ಷದ ಪ್ರಚಾರ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಅವರ ಉತ್ಸಾಹ ಮುಗಿಲು ಮುಟ್ಟಿತ್ತು. ಬಿಜೆಪಿಯಿಂದ ಸಾವಿರಾರು ಜನ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಪಕ್ಷಕ್ಕೆ ಬಲ ತುಂಬಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವುದು ಹಾಗೂ ಜನರ ವಿಶ್ವಾಸ ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಮುಂದಿನ ದಿನದಲ್ಲಿ ರಾಹುಲ್ ಗಾಂಧಿ ಅವರು ಕೂಡ ಈ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆ ನೀಡಿದರು.

ಬಿಜೆಪಿಗರ ಹಿಂದುತ್ವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಕರಾವಳಿಯಲ್ಲಿ ಈ ಬಾರಿ ಬಿಜೆಪಿಗರ ಹಿಂದುತ್ವದ ತಂತ್ರಗಾರಿಗೆ ಫಲ ನೀಡುವುದಿಲ್ಲ. ಈ ಚುನಾವಣೆ ಭಾವನೆ ಹಾಗೂ ಬದುಕಿನ ನಡುವಣ ಚುನಾವಣೆಯಾಗಿದೆ. ಬಿಜೆಪಿ ಭಾವನೆಗಳ ಮೇಲೆ ಚುನಾವಣೆ ಮಾಡಿದರೆ, ಬದುಕಿನ ಮೇಲೆ ಚುನಾವಣೆ ಮಾಡುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ನಾವು ಪಣ ತೊಟ್ಟಿದ್ದೇವೆ' ಎಂದು ತಿಳಿಸಿದರು.

'ಬಂಡಾಯವಾಗಿ ಸ್ಪರ್ಧಿಸಿರುವ ಬಹುತೇಕ ಎಲ್ಲ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುತ್ತಾರೆ. ಕೆಲವರು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅವರು ಮೊದಲಿನಿಂದಲೂ ಹಾಗೆ ಮಾಡಿದ್ದಾರೆ. ಉಳಿದವರು ಅರ್ಜಿ ಹಿಂಪಡೆಯಲಿದ್ದಾರೆ. ನಿನ್ನೆ ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿದ್ದೇನೆ. ಅವರು ಹಾಗೂ ಚಿಕ್ಕಪೇಟೆಯಲ್ಲಿ ಮಾಜಿ ಮೇಯರ್ ಅವರು ಅರ್ಜಿ ಹಿಂಪಡೆಯಲಿದ್ದಾರೆ' ಎಂದರು.

ಲಿಂಗಾಯತ ಸಮುದಾಯದ ಕುರಿತು ಸಿದ್ದರಾಮಯ್ಯ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆಶಿ, 'ಸಿದ್ದರಾಮಯ್ಯ ಇಂತವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ ಹೊರತು, ಇಡೀ ಸಮುದಾಯ ಉದ್ದೇಶಿಸಿ ಹೇಳಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ನಾಯಕರಾದ ಯತ್ನಾಳ್, ವಿಶ್ವನಾಥ್, ಗೂಳಿಹಟ್ಟಿ ಶೇಖರ್, ಕೆಂಪಣ್ಣ ಅವರೇ ಹೇಳಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಯಾರು ಮುಚ್ಚಿ ಹಾಕಲು ಸಾಧ್ಯವಿಲ್ಲ. ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್ ಇದ್ದು ಪಿಎಸ್​ಐ ಅಕ್ರಮ ನೇಮಕಾತಿ, ವಿವಿ ಉಪಕುಲಪತಿ ನೇಮಕಕ್ಕೆ ಹಣ ಪಡೆದಿರುವುದು ನಮ್ಮ ಕಾಲದಲ್ಲಿ ಆಗಿದೆಯಾ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ಸಿದ್ದರಾಮಯ್ಯ ರಾಜ್ಯ ಸರ್ಕಾರದ ಕುರಿತು ಮಾತನಾಡಿದ್ದಾರೆ ಹೊರತು ಸಮುದಾಯದ ವಿಚಾರ ಮಾತನಾಡಿಲ್ಲ' ಎಂದು ಸ್ಪಷ್ಟಪಡಿಸಿದರು.

ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದೆಯೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, 'ಬಿಜೆಪಿ ಅಣೆಕಟ್ಟು ಒಡೆದಿದೆ. ಕೇವಲ ಲಿಂಗಾಯತ ಸಮುದಾಯ ಮಾತ್ರವಲ್ಲ, ಎಲ್ಲ ಸಮುದಾಯದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಉತ್ತಮ ಆಡಳಿತ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ಆಗಮಿಸಿದ ಬಿಜೆಪಿ ಚಾಣಕ್ಯ: ಇಲ್ಲಿದೆ ಅಮಿತ್ ಶಾ ಕಾರ್ಯಕ್ರಮಗಳ ಇಂದಿನ ವಿವರ..

ABOUT THE AUTHOR

...view details