ಕರ್ನಾಟಕ

karnataka

ತುಮಕೂರು ಪ್ರವಾಸಿ ತಾಣಗಳಲ್ಲಿ ಮೋಜು-ಮಸ್ತಿಗೆ ಬ್ರೇಕ್​​; ಎರಡು ದಿನ ಪ್ರವೇಶ ನಿರ್ಬಂಧ

By ETV Bharat Karnataka Team

Published : Dec 31, 2023, 7:55 PM IST

2024ರ ಹೊಸ ವರ್ಷಾಚರಣೆ ವೇಳೆ ಕಾನೂನು ಬಾಹಿರ ಚಟುವಟಿಕೆ ನಡೆಯುವ ಹಿನ್ನೆಲೆ ತುಮಕೂರು ಜಿಲ್ಲೆಯ ನಾಮದ ಚಿಲುಮೆ, ಬಸದಿ ಬೆಟ್ಟ ಹಾಗೂ ದೇವರಾಯನದುರ್ಗ ಪ್ರವಾಸಿ ಸ್ಥಳಗಳಿಗೆ 2024ರ ಜನವರಿ 2ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

Restrictions on tourist spots in Tumkur district
ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ

ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧ

ತುಮಕೂರು:ಹೊಸ ವರ್ಷಾಚರಣೆ ಹಿನ್ನೆಲೆ ಡಿಸೆಂಬರ್ 31ರಂದು ಬೆಳಗ್ಗೆ 8 ಗಂಟೆಯಿಂದ 2024ರ ಜನವರಿ 2ರಂದು ಬೆಳಗ್ಗೆ 8 ಗಂಟೆವರೆಗೆ ಕ್ಯಾತ್ಸಂದ್ರ ಠಾಣೆ ಸರಹದ್ದಿನಲ್ಲಿ ಬರುವ ನಾಮದ ಚಿಲುಮೆ, ಬಸದಿ ಬೆಟ್ಟ ಹಾಗೂ ದೇವರಾಯನದುರ್ಗ ಪ್ರವಾಸಿ ಪ್ರದೇಶಗಳಿಗೆ ಸಾರ್ವಜನಿಕರು, ಪ್ರವಾಸಿಗರು ಹಾಗೂ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಆದೇಶ ಹೊರಡಿಸಿದ್ದಾರೆ.

ಕಾನೂನು ಬಾಹಿರ ಚಟುವಟಿಕೆ ಸಾಧ್ಯತೆ ಹಿನ್ನೆಲೆ ನಿರ್ಬಂಧ: ಕ್ಯಾತ್ಸಂದ್ರ ಠಾಣೆ ವ್ಯಾಪ್ತಿ ನಾಮದ ಚಿಲುಮೆ, ಬಸದಿಬೆಟ್ಟ ಹಾಗೂ ದೇವರಾಯನದುರ್ಗ ಬೆಟ್ಟಕ್ಕೆ 2024ರ ಹೊಸ ವರ್ಷಾಚರಣೆ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು ಭೇಟಿ ನೀಡಲಿದ್ದು, ಸಂಭ್ರಮಾಚರಣೆ ಸಮಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಸಂಭವ ಇರುವ ಹಿನ್ನೆಲೆ ಈ ಆದೇಶವನ್ನು ಹೊರಡಿಸಲಾಗಿದೆ.

ಸಾರ್ವಜನಿಕರು ಮದ್ಯಪಾನ ಮಾಡಿ ಹಾಗೂ ಜಾಲಿರೈಡ್ ನೆಪದಲ್ಲಿ ವಾಹನಗಳನ್ನು ಚಾಲನೆ ಮಾಡುವುದರಿಂದ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸುತ್ತವೆ. ಈ ಪ್ರದೇಶಗಳು ಸುರಕ್ಷಿತ ಅರಣ್ಯ ಆವೃತ ಪ್ರದೇಶಗಳಾಗಿದ್ದು, ಪ್ರವಾಸಿಗರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ.

ಕಾನೂನು ಉಲ್ಲಂಘಿಸಿದರೆ ಕ್ರಮ:ಹೊಸ ವರ್ಷದ ಆಚರಣೆಯ ಹಿನ್ನೆಲೆ ಈ ಪ್ರದೇಶಗಳಿಗೆ ಸಾರ್ವಜನಿಕರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಗುಂಪು ಘರ್ಷಣೆಗಳಾಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂಭವ ಇರುವುದರಿಂದ ಈ ನಿರ್ಬಂಧವನ್ನು ಹೇರಲಾಗಿದೆ. ಆದರೆ ನಿರ್ಬಂಧಿತ ಅವಧಿಯಲ್ಲಿ ಮೇಲ್ಕಾಣಿಸಿದ ಮಾರ್ಗವಾಗಿ ದೈನಂದಿನ ಚಟುವಟಿಕೆಗಳಿಗೆ ತೆರಳುವ ಸ್ಥಳೀಯರು ಸದರಿ ಮಾರ್ಗ ಮಧ್ಯೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದೆ ತೆರಳಲು ಅನುಮತಿ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸಲು ಆದೇಶದಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂಓದಿ:ಹೊಸ ವರ್ಷಾಚರಣೆಗೆ ಬೆಂಗಳೂರು ರೆಡಿ: ನಗರದ ಹಲವೆಡೆ ಭದ್ರತೆ ಬಿಗಿ

ABOUT THE AUTHOR

...view details