ಕರ್ನಾಟಕ

karnataka

ಪ್ರೀತಿಸಿ ವಿವಾಹವಾದ ಪ್ರಿಯತಮೆ ದೂರ.. ರಾಯಚೂರಲ್ಲಿ ಡೆತ್​ನೋಟ್​ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

By

Published : Sep 8, 2021, 11:41 AM IST

person-commit-suicide-in-raichur
ರಾಯಚೂರು: ಪ್ರೀತಿಸಿ ವಿವಾಹವಾದ ಪ್ರಿಯತಮೆ ತನ್ನಿಂದ ದೂರ... ಡೆತ್​ನೋಟ್​ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಪ್ರೀತಿಸಿ, ವಿವಾಹವಾದ ಪ್ರಿಯತಮೆಯನ್ನು ತನ್ನಿಂದ ದೂರ ಮಾಡಿದ್ದಕ್ಕೆ‌ ಮನನೊಂದ ವ್ಯಕ್ತಿಯೋರ್ವ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು:ಕಳೆದ‌ ಐದು ವರ್ಷಗಳಿಂದ ಪ್ರೀತಿಸಿ, ವಿವಾಹವಾದ ಪ್ರಿಯತಮೆಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಮನನೊಂದ ವ್ಯಕ್ತಿಯೋರ್ವ ಡೆತ್​ನೋಟ್​ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಾಣದಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಫೇಸ್‌ಬುಕ್‌ನಲ್ಲಿ ಹರಿಬಿಟ್ಟ ವಿಡಿಯೋ

ಗಾಣದಾಳ ಗ್ರಾಮದ ಭೀಮೇಶ್ ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ತನ್ನ ಸಾವಿಗೆ ಕಾರಣ ಹಾಗೂ ಕಾರಣರಾದವರ ಬಗ್ಗೆ‌ ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾನೆ. ಕಳೆದ ಐದು ವರ್ಷಗಳಿಂದ ಭೀಮೇಶ್ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿದ್ದ. ಬಳಿಕ ಇವರಿಬ್ಬರು ಮದುವೆಯಾಗಲು ನಿರ್ಧರಿಸಿ, ಮನೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಅನ್ಯ ಸಮುದಾಯಕ್ಕೆ ಸೇರಿರುವ ಕಾರಣಕ್ಕೆ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಹಾಗೂ ಯುವಕ ಓಡಿಹೋಗಿ ಮದುವೆಯಾಗಿದ್ದರು.

ಬಳಿಕ ಮಗಳು ಕಾಣೆಯಾಗಿರುವ ಬಗ್ಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಯುವತಿ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿ ಕುಟುಂಬದವರಿಗೆ ಒಪ್ಪಿಸಿದ್ದರು. ಆದರೆ ಇಡಪನೂರು ಠಾಣೆ ಪಿಎಸ್‌ಐ ಲಂಚ ತೆಗದುಕೊಂಡು ಹೀಗೆ ಮಾಡಿದ್ದಾರೆ. ಇಡಪನೂರು ಪಿಎಸ್‌ಐ ಸೇರಿದಂತೆ 11 ಜನರು ತನ್ನ ಸಾವಿಗೆ ಕಾರಣವೆಂದು ಡೆತ್​ನೋಟ್​ನಲ್ಲಿ ವ್ಯಕ್ತಿ ಆರೋಪಿಸಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸ್​​ ಬಂದೋಬಸ್ತ್:

ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸ್​​ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭೀಮೇಶ್ ಸಾವಿನ ಬಗ್ಗೆ ಇನ್ನೂ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ ದೂರು ನೀಡಿದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ತಿಳಿಸಿದ್ದಾರೆ.

ಇದನ್ನೂ ಓದಿ:ಲಾರಿ ತಡೆದು ಮೂರು ಆನೆಗಳಿಂದ ಕಬ್ಬು ವಸೂಲಿ: ಚಾಲಕ ಶಾಕ್.. ಗಜಪಡೆ ರಾಕ್!

ABOUT THE AUTHOR

...view details