ಕರ್ನಾಟಕ

karnataka

ಮೈಸೂರಲ್ಲಿ ವೃದ್ಧೆಯ ಸರ ಕದ್ದು ಹೋಂ ನರ್ಸ್ ಪರಾರಿ; 48 ಗಂಟೆಯಲ್ಲಿ ಆರೋಪಿ ಸೆರೆ

By ETV Bharat Karnataka Team

Published : Dec 30, 2023, 9:07 PM IST

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯ ಚಿನ್ನದ ಸರ ಕದ್ದು ಪರಾರಿ ಆಗಿದ್ದ ಆರೋಪಿ ಹೋಂ ನರ್ಸ್ಅನ್ನು​ ಪೊಲೀಸರು 48 ಗಂಟೆಯಲ್ಲೇ ಬಂಧಿಸಿದ್ದಾರೆ.

Accused arrested
ಆರೋಪಿ ಸೆರೆ

ಮೈಸೂರು:ಹಾಸಿಗೆ ಹಿಡಿದಿದ್ದ ವೃದ್ಧೆಯ ಸೇವೆ ಮಾಡುತ್ತಿದ್ದ ಹೋಂ ನರ್ಸ್ ಒಬ್ಬರು, ವೃದ್ಧೆ ಬಳಿಯಿದ್ದ ಚಿನ್ನದ ಸರ ಲಪಟಾಯಿಸಿದ ಘಟನೆ ನಗರದ ನಿವೇದಿತಾ ನಗರದಲ್ಲಿ ನಡೆದಿದೆ. ಈ ಕುರಿತಾಗಿ ವೃದ್ಧೆಯ ಪತಿ ನೀಡಿದ ದೂರಿನನ್ವಯ ಸರಸ್ವತಿಪುರಂ ಠಾಣೆ ಪೊಲೀಸರು 48 ಗಂಟೆಗಳಲ್ಲಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ನಗರದ ನಿವೇದಿತಾ ನಗರದ ಬಳಿ ನರಸಿಂಹಶೆಟ್ಟಿ ಅವರ ಪತ್ನಿ ಸಾವಿತ್ರಿ(70) ಎಂಬುವರು ವಯೋಸಹಜ ಕಾಯಿಲೆ ಹಿನ್ನೆಲೆ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ವೃದ್ಧೆ ಪಾಲನೆಗಾಗಿ ಒಂದು ಏಜೆನ್ಸಿ ಮೂಲಕ ನಗರದ ಬೋಗಾದಿ ನಿವಾಸಿ ಆಶಾ(31) ಎಂಬುವರನ್ನು ನೇಮಕ ಮಾಡಿಕೊಂಡಿದ್ದರು.

ಮೊಬೈಲ್ ಕರೆ ಸ್ವೀಕರಿಸಿದ್ದಕ್ಕೆ ಆರೋಪಿ ವಿರುದ್ಧ ದೂರು: ವೃದ್ಧೆಯ ಪಾಲನೆಗಾಗಿ ಏಜೆನ್ಸಿ ಮೂಲಕ ನೇಮಕಗೊಂಡ ಬೋಗಾದಿ ನಗರದ ನಿವಾಸಿ ಆಶಾ ಅವರು ಸುಮಾರು 15 ದಿನ ಕಾಲ ವೃದ್ಧೆಯ ಸೇವೆಯನ್ನು ಮಾಡಿದರು. ನಂತರ ಎರಡು ದಿನಗಳ ಹಿಂದೆ ವೃದ್ಧೆ ಸಾವಿತ್ರಿ ಧರಿಸಿದ್ದ 60 ಗ್ರಾಂ ತೂಕದ ಚಿನ್ನದ ಸರವನ್ನು ಲಪಟಾಯಿಸಿ ಪರಾರಿಯಾಗಿದ್ದರು. ಆಕೆಯನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ತಕ್ಷಣ ವೃದ್ದೆ ಸಾವಿತ್ರಿಯ ಪತಿ ನರಸಿಂಹಶೆಟ್ಟಿ ಎಂಬುವವರು ಸರಸ್ವತಿಪುರಂ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

48 ಗಂಟೆಯಲ್ಲಿ ಆರೋಪಿ ಬಂಧನ: ವೃದ್ಧೆಯ ಪತಿ ನರಸಿಂಹಶೆಟ್ಟಿ ದಾಖಲಿಸಿದ ದೂರಿನನ್ವಯ ಸರಸ್ವತಿಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಚಿನ್ನದ ಸರವನ್ನು ಕದ್ದಿದ್ದ ಆರೋಪಿ ಆಶಾ ಅವರನ್ನು ಬಂಧಿಸಲು ಬಲೆ ಬೀಸಿದ್ದರು. 48 ಗಂಟೆಗಳಲ್ಲಿ ಆರೋಪಿ ಆಶಾ ಅವರನ್ನು ಬಂಧಿಸಿದ ಸರಸ್ವತಿ ಪುರಂ ಠಾಣಾ ಪೊಲೀಸರ ತಂಡ, ಆಕೆಯ ಬಳಿ ಇದ್ದ ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆಗೊಳಪಡಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ಹಣ ಡಬಲ್ ಆಮಿಷವೊಡ್ಡಿ ವಂಚಿಸಿದ್ದ ಗ್ಯಾಂಗ್ ಸೆರೆ;ಹಣ ಡಬಲ್ ಮಾಡುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿಯ ಕಾಕತಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಕಾಕ್ ಪಟ್ಟಣದ ಸಿದ್ದನಗೌಡ ಬಿರಾದಾರ ವಂಚನೆಗೆ ಒಳಗಾದವರು. ದೀಪಾ ಅವಟಗಿ, ಶಿವಾನಂದ ಮಠಪತಿ, ಅಪ್ಪಯ್ಯ ಪೂಜಾರಿ, ಸುನಿಲ್ ವಿಭೂತಿ, ಸಚಿನ್ ಕುಮಾರ ಅಂಬಲಿ, ಭರತೇಶ್ ಅಗಸರ ಹಾಗೂ ಶಶಿಕುಮಾರ್ ದೊಡ್ಡನವರ ಬಂಧಿತ ಆರೋಪಿಗಳು.

ಬಂಧಿತರಿಂದ ವಂಚನೆ ಕೃತ್ಯಕ್ಕೆ ಬಳಸಿದ ಎರಡು ವಾಹನ ಹಾಗೂ 11 ಲಕ್ಷ ರೂ. ನಗದು ಸೇರಿದಂತೆ 22 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿದ್ದನಗೌಡ ಬಿರಾದಾರ ಅವರು 25 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಡಿ.18 ರಂದು ದೂರು ನೀಡಿದ್ದರು.

ಇದನ್ನೂಓದಿ:ಹೊಸ ವರ್ಷಾಚರಣೆ ಹಿನ್ನೆಲೆ ಮಾದಕ ವಸ್ತು ಸಾಗಣೆ: 60 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ABOUT THE AUTHOR

...view details