ಕರ್ನಾಟಕ

karnataka

ಮೈಸೂರು: ಜಿಲ್ಲೆಯಾದ್ಯಂತ ಜಾನುವಾರು ಜಾತ್ರೆ, ಸಂತೆ ನಿಷೇಧಿಸಿ ಡಿಸಿ ಆದೇಶ

By

Published : Jan 6, 2023, 6:17 AM IST

ಚರ್ಮಗಂಟು ರೋಗ ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಮೈಸೂರು ಜಿಲ್ಲಾಧಿಕಾರಿ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.

mysore-dc-orders-cattle-fair-santhe-ban-across-the-district
ಮೈಸೂರು ಡಿಸಿ ಆದೇಶ: ಜಿಲ್ಲೆಯಾದ್ಯಂತ ಜಾನುವಾರುಗಳ ಜಾತ್ರೆ, ಸಂತೆ ನಿಷೇಧ

ಮೈಸೂರು: ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy Skin Disease) ಕಾಣಿಸಿಕೊಂಡಿದ್ದು, ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ತಾಲ್ಲೂಕಿನಾದ್ಯಂತ ಲಸಿಕಾ ಕಾರ್ಯಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನ ಚುಂಚನಕಟ್ಟೆ ಜಾತ್ರೆಯು ಪ್ರಸಿದ್ಧಿ ಪಡೆದಿದ್ದು ಇಲ್ಲಿಗೆ ರಾಜ್ಯದ ವಿವಿಧ ಭಾಗಗಳಿಂದ ಜಾನುವಾರುಗಳನ್ನು ಮಾರುವವರು ಮತ್ತು ಕೊಳ್ಳುವವರು ಬರುತ್ತಾರೆ. ಇದರಿಂದ ಚರ್ಮಗಂಟು ರೋಗ ಮತ್ತಷ್ಟು ಬಾಧಿಸುವ ಸಾಧ್ಯತೆ ಇದ್ದು ಮೈಸೂರು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಕೆ.ಆರ್.ನಗರ ಅಲ್ಲದೇ ಇತರೆ ತಾಲ್ಲೂಕಿಗಳಲ್ಲಿಯೂ ಕೂಡಾ ಅಲ್ಪ ಪ್ರಮಾಣದಲ್ಲಿ ಪ್ರತಿನಿತ್ಯ ಈ ರೋಗ ವರದಿಯಾಗುತ್ತಿದೆ. ಜಿಲ್ಲೆಯ ರೈತರು ಮತ್ತು ಜಾನುವಾರು ಸಂಪತ್ತನ್ನು ರಕ್ಷಿಸುವ ಮತ್ತು ಚರ್ಮಗಂಟು ರೋಗವನ್ನು ಹತೋಟಿಗೆ ತರಲು ಜಾನುವಾರು ಜಾತ್ರೆ ಮತ್ತು ಸಂತೆಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಕೆ.ಆರ್.ನಗರದ ಚುಂಚನಕಟ್ಟೆ ಜಾತ್ರೆ, ನಂಜನಗೂಡಿನ ಸುತ್ತೂರು ಜಾತ್ರೆ ಮತ್ತು ತಿ.ನರಸೀಪುರದ ಮುಡುಕುತೊರೆ ಜಾತ್ರೆಗಳಲ್ಲಿ ಜಾನುವಾರು ಜಾತ್ರೆ, ಸಂತೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈರಸ್​ ಒಂದು ಹಸುವಿನಿಂದ ಮತ್ತೊಂದು ಹಸುವಿಗೆ ಬೇಗನೆ ಹರಡಿ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ರಾಸುಗಳು ಆಹಾರ ತಿನ್ನುವುದನ್ನೂ ಬಿಟ್ಟು ಬಡಕಲಾಗುತ್ತವೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ರೋಗ ಹೆಚ್ಚಾಗಿ ಹಸುಗಳು ಅಸುನೀಗುತ್ತವೆ. ಜಾನುವಾರುಗಳ ಆರೋಗ್ಯವನ್ನು ಹದಗೆಡಿಸಿ ಉತ್ಪಾದಕತೆಯೂ ಕಡಿಮೆಯಾಗುತ್ತದೆ. ಇದು ನೇರವಾಗಿ ರೈತರು ಮತ್ತು ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಇದನ್ನೂ ಓದಿ:ಸ್ವಾಮಿಮಲೈ ಬೆಟ್ಟದಲ್ಲಿ ಗಣಿಗಾರಿಕೆ ತಡೆಗೆ ಕೋರಿ ಅರ್ಜಿ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ABOUT THE AUTHOR

...view details