ಮೈಸೂರು:ಸುಳ್ಳು ಪತ್ರ ಹಾಗೂ ದಾಖಲೆ ಸೃಷ್ಟಿಸಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ. ಇದೊಂದು ರಾಜಕೀಯ ಆಟವಾಗಿದ್ದರಿಂದ ಇದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಮೈಸೂರಿನ ಜಲದರ್ಶಿನಿಯ ಅತಿಥಿ ಗೃಹದಲ್ಲಿ ಇಂದು ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಶಾಸಕರ ಪತ್ರವನ್ನೇ ನಕಲು ಮಾಡಿದ್ದರು. ಅದಕ್ಕೆ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ಕೂಡ ಸಿಕ್ಕಿತು. ಸಚಿವ ಚಲುವರಾಯಸ್ವಾಮಿ ವಿಚಾರದಲ್ಲೂ ಅದೇ ರೀತಿ ಮಾಡಲಾಗುತ್ತಿದೆ. ಅಧಿಕಾರಿಗಳು ಈಗಾಗಲೇ ಈ ಪತ್ರದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಇದು ನಕಲಿ ಪತ್ರವಾಗಿದ್ದು, ತಾವುಗಳ್ಯಾರೂ ಈ ಪತ್ರವನ್ನು ಬರೆದಿಲ್ಲ, ಅಲ್ಲದೇ ಈ ವಿಚಾರ ಕೂಡ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದು ಸರ್ಕಾರದ ಮೇಲೆ ಕೆಟ್ಟ ಹೆಸರು ತರುವ ಪ್ರಯತ್ನವಲ್ಲದೇ ಮತ್ತೇನು ಅಲ್ಲವೆಂದು ಸಚಿವರು ಹೇಳಿದರು.
ಅಧಿಕಾರಿಗಳಿಗೆ ತೊಂದರೆಯಾದರೆ ನೇರವಾಗಿ ಲೋಕಾಯುಕ್ತಕ್ಕೆ ದೂರು ನೀಡಬಹುದು. ಲೋಕಾಯುಕ್ತ ಅಧಿಕಾರಿಗಳಿಗೆ ತನಿಖೆ ಮಾಡಲು ಮುಕ್ತ ಅವಕಾಶವಿದೆ. ಆದರೆ, ಈ ರೀತಿ ನಕಲಿ ದಾಖಲೆ ಹಾಗೂ ನಕಲಿ ಪತ್ರಗಳನ್ನು ಸೃಷ್ಟಿಸಿ ಸರ್ಕಾರದ ಜನಪ್ರಿಯತೆ ಕುಗ್ಗಿಸುವಂತಹ ಕೆಲಸ ಮಾಡಬಾರದು. ಇದೆಲ್ಲವೂ ರಾಜಕೀಯ ಕುತಂತ್ರ ಅನ್ನೊದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯವಾಗಿಯೇ ಎದುರಿಸುತ್ತದೆ.
ಕೆಲವರಿಗೆ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಂದ ಎರಡೇ ತಿಂಗಳಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಈ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ನಾವು ಜಾರಿ ಮಾಡಿ ತೋರಿಸಿದ್ದೇವೆ. ಹಾಗಾಗಿ ಕೆಲವರು ಹೊಟ್ಟೆಕಿಚ್ಚಿನಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಕೃಷ್ಣ ಬೈರೇಗೌಡ ಕೆಂಡ ಕಾರಿದರು.