ಕರ್ನಾಟಕ

karnataka

ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಷಡ್ಯಂತ್ರ ನಡೆಯುತ್ತಿದೆ: ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಕೃಷ್ಣ ಬೈರೇಗೌಡ ಕಿಡಿ

By

Published : Aug 8, 2023, 2:13 PM IST

ಕಾಂಗ್ರೆಸ್​ ಸರ್ಕಾರದ ಜನಪ್ರಿಯತೆ ಕುಗ್ಗಿಸುವ ಸಲುವಾಗಿ ಇಂತಹ ರಾಜಕೀಯ ಪ್ರೇರಿತ ಕುತಂತ್ರಗಳನ್ನು ಮಾಡಲಾಗುತ್ತಿದೆ ಎಂದು ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಕೃಷ್ಣ ಬೈರೇಗೌಡ ಕೆಂಡ ಕಾರಿದರು.

Revenue Minister Krishna Byre Gowda
Revenue Minister Krishna Byre Gowda

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡುತ್ತಿರುವುದು

ಮೈಸೂರು:ಸುಳ್ಳು ಪತ್ರ ಹಾಗೂ ದಾಖಲೆ ಸೃಷ್ಟಿಸಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ. ಇದೊಂದು ರಾಜಕೀಯ ಆಟವಾಗಿದ್ದರಿಂದ ಇದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಮೈಸೂರಿನ ಜಲದರ್ಶಿನಿಯ ಅತಿಥಿ ಗೃಹದಲ್ಲಿ ಇಂದು ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಶಾಸಕರ ಪತ್ರವನ್ನೇ ನಕಲು ಮಾಡಿದ್ದರು. ಅದಕ್ಕೆ ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ಕೂಡ ಸಿಕ್ಕಿತು. ಸಚಿವ ಚಲುವರಾಯಸ್ವಾಮಿ ವಿಚಾರದಲ್ಲೂ ಅದೇ ರೀತಿ ಮಾಡಲಾಗುತ್ತಿದೆ. ಅಧಿಕಾರಿಗಳು ಈಗಾಗಲೇ ಈ ಪತ್ರದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಇದು ನಕಲಿ ಪತ್ರವಾಗಿದ್ದು, ತಾವುಗಳ್ಯಾರೂ ಈ ಪತ್ರವನ್ನು ಬರೆದಿಲ್ಲ, ಅಲ್ಲದೇ ಈ ವಿಚಾರ ಕೂಡ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದು ಸರ್ಕಾರದ ಮೇಲೆ ಕೆಟ್ಟ ಹೆಸರು ತರುವ ಪ್ರಯತ್ನವಲ್ಲದೇ ಮತ್ತೇನು ಅಲ್ಲವೆಂದು ಸಚಿವರು ಹೇಳಿದರು.

ಅಧಿಕಾರಿಗಳಿಗೆ ತೊಂದರೆಯಾದರೆ ನೇರವಾಗಿ ಲೋಕಾಯುಕ್ತಕ್ಕೆ ದೂರು ನೀಡಬಹುದು. ಲೋಕಾಯುಕ್ತ ಅಧಿಕಾರಿಗಳಿಗೆ ತನಿಖೆ ಮಾಡಲು ಮುಕ್ತ ಅವಕಾಶವಿದೆ. ಆದರೆ, ಈ ರೀತಿ ನಕಲಿ ದಾಖಲೆ ಹಾಗೂ ನಕಲಿ ಪತ್ರಗಳನ್ನು ಸೃಷ್ಟಿಸಿ ಸರ್ಕಾರದ ಜನಪ್ರಿಯತೆ ಕುಗ್ಗಿಸುವಂತಹ ಕೆಲಸ ಮಾಡಬಾರದು. ಇದೆಲ್ಲವೂ ರಾಜಕೀಯ ಕುತಂತ್ರ ಅನ್ನೊದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಹಾಗಾಗಿ ಕಾಂಗ್ರೆಸ್​ ಪಕ್ಷ ಇದನ್ನು ರಾಜಕೀಯವಾಗಿಯೇ ಎದುರಿಸುತ್ತದೆ.

ಕೆಲವರಿಗೆ ಸರ್ಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಂದ ಎರಡೇ ತಿಂಗಳಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಈ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ನಾವು ಜಾರಿ ಮಾಡಿ ತೋರಿಸಿದ್ದೇವೆ. ಹಾಗಾಗಿ ಕೆಲವರು ಹೊಟ್ಟೆಕಿಚ್ಚಿನಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಕೃಷ್ಣ ಬೈರೇಗೌಡ ಕೆಂಡ ಕಾರಿದರು.

ದೇಶದಲ್ಲಿ 'ಇಂಡಿಯಾ' ಪ್ರಬಲವಾಗುತ್ತಿದೆ: ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. 'ಇಂಡಿಯಾ' ಮೈತ್ರಿ ಕೂಟ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದೆ. ರಾಹುಲ್ ಗಾಂಧಿಯವರ ವಿರುದ್ಧ ತಪ್ಪು ಕೇಸ್​ಗಳನ್ನು ಹಾಕಿದ್ದರು. ಇದರ ವಿರುದ್ಧ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದನ್ನು ಅರಿತ ಪ್ರತಿಪಕ್ಷದವರು ರಾಜ್ಯ ಸರ್ಕಾರದ ಜನಪ್ರಿಯತೆಯನ್ನು ಕುಗ್ಗಿಸಲು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಪ್ರತಿದಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಚಿವರು, ದೇಶದಲ್ಲಿ ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ಬಡವರ ಸ್ಥಿತಿ ಕುಗ್ಗುತ್ತಿದೆ. ಮುಂಬರುವ ದಿನಗಳಲ್ಲಿ ಜನರೇ ಇದಕ್ಕೆ ಪಾಠ ಕಲಿಸುತ್ತಾರೆ ಎಂದರು.

ಕುಮಾರಸ್ವಾಮಿ ಆರೋಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ವೈಎಸ್​ಟಿ ಟ್ಯಾಕ್ಸ್ ವಿಚಾರದಲ್ಲಿ ನಿರ್ದಿಷ್ಟವಾದ ದಾಖಲೆಗಳಿದ್ದರೆ ಕೊಡಲಿ, ತನಿಖೆ ಮಾಡಿಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ಅದನ್ನು ಬಿಟ್ಟು ಕುಮಾರಸ್ವಾಮಿ ಹಿಟ್ ಅಂಡ್​​​ ರನ್ ಮಾಡುವುದು ಸರಿಯಲ್ಲ ಎಂದರು.

ಒತ್ತುವರಿ ತೆರವು ಅಭಿಯಾನ: ಸದ್ಯದಲ್ಲೇ ರಾಜ್ಯಾದ್ಯಂತ ಒತ್ತುವರಿ ತೆರವು ಅಭಿಯಾನ ನಡೆಯಲಿದೆ. ಸರ್ಕಾರದ ಭೂಮಿಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಿಸಲಾಗುವುದು. ಮೊದಲು ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಒತ್ತುವರಿ ತೆರವು ಮಾಡಲಾಗುವುದು. ನಂತರ ರಾಜ್ಯಾದ್ಯಂತ ಈ ಅಭಿಯಾನ ಮಾಡಲಾಗುತ್ತದೆ. ನಮ್ಮ ಮೇಲೆ ಯಾವುದೇ ಒತ್ತಡ ಇಲ್ಲ, ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರು ಒತ್ತುವರಿ ತೆರವು ಮಾಡಲಾಗುವುದು ಎಂದರು.

ಇದನ್ನೂ ಓದಿ: ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಮಂಡ್ಯ ಎಸ್​ಪಿಯಿಂದ ವರದಿ ತರಿಸುತ್ತೇನೆ: ಗೃಹ ಸಚಿವ ಪರಮೇಶ್ವರ್​

ABOUT THE AUTHOR

...view details