ಬೆಂಗಳೂರು: ಸಚಿವರ ವಿರುದ್ಧದ ದೂರಿನ ಪತ್ರದ ಬಗ್ಗೆ ಮಂಡ್ಯ ಜಿಲ್ಲೆಯ ಎಸ್ಪಿ ಜೊತೆ ಮಾತನಾಡಿ ವರದಿ ತರಿಸಿ ಕೊಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಚೆಲುವರಾಯಸ್ವಾಮಿ ವಿರುದ್ಧವಾಗಿ ಯಾರೋ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬರೆದಿರುವ ಪತ್ರ ನಕಲಿ ಇದೆ. ಅಧಿಕಾರಿಗಳು ನಾವು ಯಾರು ಪತ್ರ ಬರೆದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಮಂಡ್ಯ ಎಸ್ಪಿ ಜೊತೆ ಮಾತನಾಡಿ ನಾನು ವರದಿ ತರಿಸಿ ಕೊಡುತ್ತೇನೆ. ಅಧಿಕಾರಿಗಳು ನಾವು ಯಾರು ಪತ್ರ ಬರೆದಿಲ್ಲ ಎಂದು ದೂರು ನೀಡಿದ್ದಾರಂತೆ. ವರದಿ ಬಂದ ನಂತರ ಸಿಎಂ ಜೊತೆಗೆ ಚರ್ಚೆ ಮಾಡಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೇವೆ. ನಕಲಿ ಪತ್ರ ಹೆಚ್ಚಾಗಿರುವ ಈ ಹಿನ್ನೆಲೆಯಲ್ಲಿ ಐಟಿ, ಗೃಹ ಇಲಾಖೆ ಕಠಿಣ ಕಾನೂನು ತರುವ ಬಗ್ಗೆ ಚರ್ಚೆ ಆಗುತ್ತಿದೆ. ಸೈಬರ್ ಕ್ರೈಂನವರು ಈಗಾಗಲೇ ಯಾರು ಹೀಗೆ ಪತ್ರಗಳನ್ನು ಬರೆಯುವವರು ಎಂಬುದನ್ನು ಕಂಡುಹಿಡಿಯುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಚಿವ ಚಲುವರಾಯಸ್ವಾಮಿ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ರಾಜ್ಯಪಾಲರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪರಿಶೀಲಿಸುವಂತೆ ಸೂಚಿಸಿರುವ ಪತ್ರದ ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ನಕಲಿ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಹೇಳಿದ್ದರು.
ಇದನ್ನೂ ಓದಿ: ಸಚಿವರ ವಿರುದ್ಧದ ನಕಲಿ ಪತ್ರದ ಸೃಷ್ಟಿಕರ್ತರು ಬಿಜೆಪಿಯವರೋ ಅಥವಾ ನಿಮ್ಮ 'ಬ್ರದರ್ರೋ': ಸಿಎಂ
ಸಚಿವ ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾದುದು ಎಂದು ಬಯಲಾಗಿದೆ. ಅಂತಹ ಅಧಿಕಾರಿಗಳು ಯಾರು ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡುಬಂದಲ್ಲಿ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದರು.
ಚಲುವರಾಯಸ್ವಾಮಿ ಪ್ರತಿಕ್ರಿಯೆ: ಇದಕ್ಕೂ ಮೊದಲು ತಮ್ಮ ಮೇಲೆ ಬಂದಿರುವ ಲಂಚ ಆರೋಪದ ಕುರಿತು ಸಚಿವ ಚಲುವರಾಯಸ್ವಾಮಿ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು. "ಈ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳ ಬಳಿಯಲ್ಲಿ ನಾನು ಕೇಳಿಕೊಂಡಿದ್ದೇನೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರನ್ನು ಕರೆದು ಈ ಬಗ್ಗೆ ಸ್ವತಃ ನಾನೇ ಮಾತನಾಡಿರುವೆ. ಪ್ರಾಥಮಿಕ ತನಿಖೆ ಮಾಡುವಂತೆಯೂ ಹೇಳಿದ್ದೇನೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ’’ಸಚಿವರ ಸುಲಿಗೆಯನ್ನೇ ಸಮರ್ಥಿಸಿಕೊಳ್ಳುವ ಸಿದ್ದಕಲೆ ಅಸಹ್ಯ ತರಿಸುತ್ತಿದೆ’’: ಸಿಎಂ ವಿರುದ್ಧ ಹೆಚ್ಡಿಕೆ ಕಿಡಿ