ಕರ್ನಾಟಕ

karnataka

ಸರಳ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣ: ನಾಳೆ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ಫಿಟ್

By

Published : Oct 14, 2021, 4:40 PM IST

Updated : Oct 14, 2021, 9:31 PM IST

jamboosavari

ಶುಕ್ರವಾರ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ದಸರಾದ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆ, ಕಲಾತಂಡ, ಹಾಗೂ ಸ್ತಬ್ಧಚಿತ್ರಗಳು ಈಗಾಗಲೇ ತಯಾರಾಗಿವೆ.

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ, ಕಲಾತಂಡ, ಹಾಗೂ ಸ್ತಬ್ಧಚಿತ್ರಗಳು ಈಗಾಗಲೇ ರೆಡಿಯಾಗಿವೆ.

ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ

ಶುಕ್ರವಾರ ಸಂಜೆ 4.36 ರಿಂದ 4.46 ರೊಳಗೆ ಸಲ್ಲುವ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ನಂತರ ಸಂಜೆ 5 ರಿಂದ 5.30ರೊಳಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.

ಅಂಬಾರಿ ಹೊರಲಿರುವ ಅಭಿಮನ್ಯು ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಆನೆಗಳು ಹೆಜ್ಜೆ ಹಾಕಲಿವೆ. ಅರಮನೆ ಬಲಬದಿಯಲ್ಲಿ ಅಂಬಾರಿ ಕಟ್ಟುವ ಜಾಗದಿಂದ ವರಹಾ ದ್ವಾರಕ್ಕೆ ಗಜಪಡೆ ಬರಲಿದ್ದು, ಬಳಿಕ ಪುಷ್ಪಾರ್ಚನೆಗೆ ಅರಮನೆ ಮುಂಭಾಗ ನಿಂತು, ಬಲರಾಮ ದ್ವಾರದ ಕಡೆ ತೆರಳಲಿವೆ, ಅಲ್ಲಿಂದ ಎಡಕ್ಕೆ ತಿರುವು ಪಡೆದು ಅಂಬಾರಿ ಕಟ್ಟುವ ಜಾಗಕ್ಕೆ ತೆರಳಲಿದ್ದು, ಒಂದು ತಾಸಿನಲ್ಲಿ ಮೆರವಣಿಗೆ ಸಂಪನ್ನಗೊಳ್ಳಲಿದೆ.

ಜಂಬೂಸವಾರಿಗೆ ಸಕಲ ಸಿದ್ಧತೆ

ಕಲಾತಂಡಗಳ ವಿವರ:

ಈ ಬಾರಿ ಜಂಬೂಸವಾರಿಯಲ್ಲಿ 13 ಕಲಾತಂಡಗಳು ಪಾಲ್ಗೊಳ್ಳುತ್ತಿದ್ದು, ಮೆರವಣಿಗೆಯ ಆರಂಭದಲ್ಲಿ ನಿಶಾನೆ, ನಂತರ ನೌಪತ್ ಆನೆಗಳು ಹೊರಡಲಿವೆ. ಬಳಿಕ ನಾದಸ್ವರ ಹಾಗೂ ಸ್ಯಾಕ್ಸೋಪೋನ್ ಕಲಾವಿದರು ಪ್ರದರ್ಶನ ನೀಡುತ್ತಾ ಮುಂದೆ ಹೋಗಲಿದ್ದಾರೆ. ಅವರ ಹಿಂದೆ ವೀರಗಾಸೆ ಕಲಾವಿದರು ಸಾಗಲಿದ್ದಾರೆ.

ಆ ನಂತರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ತಬ್ಧಚಿತ್ರ ಸಾಗಲಿದೆ. ನಂತರ ಕಂಸಾಳೆ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಲಿದ್ದು, ಅದರ ಹಿಂದೆ ಮುಡಾ ಬಹುಮನೆ ಗುಂಪು ವಸತಿ ಸ್ತಬ್ಧಚಿತ್ರ ಸಾಗಲಿದೆ. ನಂತರ ಡೊಳ್ಳುಕುಣಿತ ಕಲಾವಿದರು‌ ಸಾಗಿದರೆ ಅದರ ಹಿಂದೆ ಕೋವಿಡ್ ಸ್ತಬ್ಧ ಚಿತ್ರ, ಬಳಿಕ ನಗಾರಿ, ಪೂಜಾ ಕುಣಿತ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ‌ಸಾಗಲಿದ್ದಾರೆ.‌‌

ಇವರ ಹಿಂದೆಯೇ ಪರಿಸರ ಪ್ರಾಮುಖ್ಯತೆಯ ಸ್ತಬ್ಧಚಿತ್ರ, ಅದರ ಹಿಂದೆ ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ಗಾರುಡಿ ಗೊಂಬೆ, ಕೊಂಬು ಕಹಳೆ, ಗಾರುಡಿ ಗೊಂಬೆ ಸಾಗಲಿದೆ. ನಂತರದಲ್ಲಿ ಕೃಷಿ ಇಲಾಖೆಯ ಸ್ತಬ್ಧಚಿತ್ರ, ಚೆಂಡೆವಾದನ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರೆ ಅನೆ ಬಂಡಿ ಅವರನ್ನು ಹಿಂಬಾಲಿಸಲಿದೆ. ಕೊನೆಯದಾಗಿ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ಸಾಗಲಿದ್ದಾರೆ.

ಅರಮನೆಯ ಧಾರ್ಮಿಕ ಕಾರ್ಯದ ವಿವರ:

ಪಟ್ಟದ ಆನೆ, ಕುದುರೆ, ಹಸುಗಳು,ಒಂಟೆ 5.45ಕ್ಕೆ ಅರಮನೆ ಒಳಾವರಣಕ್ಕೆ ಆಗಮಿಸುತ್ತವೆ.6.13 ರಿಂದ 6.32ರವರೆಗೆ ಕಾಸಾ ಆಯುಧಗಳಿಗೆ ಪೂಜಾ ಕೈಂಕರ್ಯ ನಡೆಯಲಿದ್ದು, ನಂತರ ಯದುವೀರ್ ರಿಂದ ಉತ್ತರ ಪೂಜೆ ನಡೆಯಲಿದೆ‌. ನಂತರ ಪೂಜೆ ಮಾಡಲಾಗುತ್ತದೆ.

ಚಾಮುಂಡಿ ದೇವಿಯ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಗುವುದು.ನಂತರ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಲಾಗುವುದು.
7.20ರಿಂದ 7.40ರವರೆಗೆ ವಿಜಯ ಯಾತ್ರೆ ಆರಂಭಗೊಳ್ಳಲಿದ್ದು, ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯಯಾತ್ರೆ ಮಾಡುತ್ತಾರೆ. ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ.

ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಯದುವೀರ ಒಡೆಯರು ಪೂಜೆ ಮಾಡುವರು,ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್​​ ಆಗಿ‌ ಕಂಕಣ ವಿಸರ್ಜನೆ ಮಾಡುವರು.ಬೆಳಿಗ್ಗೆ 8 ಗಂಟೆಗೆ ಮೈಸೂರು ಅರಮನೆ ದಸರಾ ಕಾರ್ಯಕ್ರಮ ಮುಕ್ತಾಯವಾಗಲಿದೆ.

ನಾಳೆ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ಫಿಟ್:

ನಾಳೆ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲು ಅಭಿಮನ್ಯು ಫಿಟ್ ಆಗಿದ್ದಾನೆ ಎಂದು ಡಿಸಿಎಫ್ ಕರಿಕಾಳನ್ ಹೇಳಿದ್ದಾರೆ.

ಅರಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಂಬೂಸವಾರಿ ಮೆರವಣಿಗೆಯಲ್ಲಿ ಆರು ಆನೆಗಳನ್ನ ಮಾತ್ರ ಬಳಕೆ ಮಾಡಿಕೊಳ್ಳುತ್ತೇವೆ. ಆನೆಗಳು ಹೋಗುವಾಗ ಪಟಾಕಿ ಬಳಸದಂತೆ ಸೂಚನೆ ನೀಡಲಾಗಿದೆ. ಡ್ರೋನ್ ಕೂಡ ಬಳಸುವಾಗ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಆನೆ ನಿರ್ವಹಣೆ ಮಾಡುವವರು ಹಾಗೂ ಆನೆಗಳ ಜೊತೆ ಯಾರು ನಡೆಯಬೇಕು ಎಂಬುವುದರ ಬಗ್ಗೆ ಫೈನಲ್ ಲಿಸ್ಟ್ ಮಾಡಲಾಗಿದೆ. ಅವರು ಮಾತ್ರ ಆನೆಗಳ ಜೊತೆ ಪಾಲ್ಗೊಳ್ಳುತ್ತಾರೆ ಎಂದರು.

ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣ

ಇಂದು ಸಂಜೆಯಿಂದಲೇ ಜಂಬೂಸವಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುವುದು.ಆನೆಗಳಿಗೆ ಅಲಂಕಾರ ಹಾಗೂ ಕುಸುರಿ ಕಟ್ಟಲಾಗುವುದು. ನಾಳೆ ಮಧ್ಯಾಹ್ನ 2.30ಕ್ಕೆ ಒಳ್ಳೆಯ ಸಮಯ ಇರುವುದರಿಂದ ಅಭಿಮನ್ಯು ಪೂಜೆ ಮಾಡಿ,ನಮ್ದಾ ಹಾಗೂ ಗಾದಿ ಕಟ್ಟಲಾಗುವುದು. ಸಂಜೆ 5ರಿಂದ 5.30ರ ಜಂಬೂಸವಾರಿ‌ ನಡೆಯುವುದರಿಂದ,ಒಂದು ಗಂಟೆ ಮುಂಚಿತವಾಗಿಯೇ ಚಿನ್ನದ ಅಂಬಾರಿ ಬೇಕು ಅಂತಾ ಅರಮನೆ ಆಡಳಿತ ಮಂಡಳಿಗೆ ಕೇಳಲಾಗಿದೆ ಎಂದು ಕರಿಕಾಳನ್​ ತಿಳಿಸಿದರು.

Last Updated :Oct 14, 2021, 9:31 PM IST

ABOUT THE AUTHOR

...view details