ಕರ್ನಾಟಕ

karnataka

ಅಪಘಾತಗಳು ಉಂಟಾಗಲು ಕಾರಣಗಳನ್ನು ಗುರುತಿಸಿ ಸರಿಪಡಿಸಿ: ಡಾ.ಕೆ.ವಿ. ರಾಜೇಂದ್ರ

By

Published : Jul 5, 2023, 4:38 PM IST

''ಹೆಚ್ಚು ಅಪಘಾತ ನಡೆಯುತ್ತಿರುವ ವಲಯಗಳನ್ನು ಗುರುತಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಈ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಚಾಲಕರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು'' ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

Identify and correct the causes of accidents: Dr. K.V. Rajendra
ಅಪಘಾತಗಳು ಉಂಟಾಗಲು ಕಾರಣಗಳನ್ನು ಗುರುತಿಸಿ ಸರಿಪಡಿಸಿ: ಡಾ.ಕೆ.ವಿ. ರಾಜೇಂದ್ರ

ಮೈಸೂರು:''ಅಪಘಾತಗಳು ಉಂಟಾಗಲು ಇರುವ ಕಾರಣಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಪಘಾತ ಪ್ರಕರಣಗಳಿಂದ ಆಗುವ ಸಾವು, ನೋವುಗಳನ್ನು ಕಡಿಮೆ ಮಾಡಬೇಕು'' ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ''ಹೆಲ್ಮೆಟ್ ಧರಿಸದೇ ಇರುವುದು, ಸೀಟ್ ಬೆಲ್ಟ್ ಹಾಕದೇ ಇರುವುದು, ಅಜಾಗರೂಕತೆಯಿಂದ ಚಾಲನೆ ಹಾಗೂ ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸುವುದು, ಚಾಲಕರ ನಿರ್ಲಕ್ಷ್ಯ, ರಸ್ತೆಗಳ ದುರಸ್ತಿ ಅಥವಾ ಸರಿಯಾಗಿ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದು ಅಪಘಾತಗಳಿಗೆ ಕಾರಣವಾಗಬಹುದು. ಈ ರೀತಿಯ ನಿಯಮಗಳ ಉಲ್ಲಂಘನೆಗಳನ್ನು ವಾಹನ ಚಾಲಕರು ಮಾಡಬಾರದು'' ಎಂದು ತಿಳಿಸಿದರು.

ಏನಿದು ಬ್ಲ್ಯಾಕ್ ಸ್ಪಾಟ್‌?:ನಗರದ ದೊಡ್ಡ ಆಲದ ಮರ, ವರಕೂಡು ಗೇಟ್, ಮೈಸೂರು ಹುಣಸೂರು ರಸ್ತೆ ಹಿನಕಲ್ ಜಂಕ್ಷನ್, ಬಂಡಿಪಾಳ್ಯ, ನಂಜನಗೂಡು ಎಪಿಎಂಸಿ ಹಾಗೂ ನಗರದ ಜೆ.ಎಲ್.ಬಿ. ರಸ್ತೆ ಜಂಕ್ಷನ್​ಗಳಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳಿನವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇವುಗಳನ್ನು ಬ್ಲ್ಯಾಕ್ ಸ್ಪಾಟ್​ಗಳಾಗಿ ಗುರುತಿಸಲಾಗಿದೆ. ಹೆಚ್ಚು ಅಪಘಾತ ಆಗುತ್ತಿರುವ ವಲಯಗಳನ್ನು ಗುರುತಿಸಿ ಎಚ್ಚರಿಕೆ ಬೋರ್ಡ್​ಗಳನ್ನು ಹಾಕಬೇಕು. ಈ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಚಾಲಕರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು'' ಎಂದು ತಿಳಿಸಿದರು.

''ದೊಡ್ಡ ವಾಹನಗಳನ್ನು ಚಾಲನೆ ಮಾಡುವವರು, ಸಣ್ಣ ವಾಹನಗಳನ್ನು ಚಲಿಸಲು ಅವಕಾಶ ಮಾಡಿಕೊಡಬೇಕು. ಮೆಟ್ರೋಪೋಲ್ ಸಿಗ್ನಲ್​ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ನಿಲುಗಡೆ ಮಾಡುತ್ತಿದ್ದು, ಸ್ವಲ್ಪ ಮುಂದೆ ಬಸ್‌ಗಳನ್ನು ನಿಲ್ಲಿಸಬೇಕು. ಈ ಸಂಬಂಧ ಓರ್ವ ಸಿಬ್ಬಂದಿಯನ್ನು ನೇಮಿಸಿ ಕ್ರಮ ವಹಿಸಬೇಕು'' ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರು.

ವಿವಿಧೆಡೆ ಅಪಘಾತ- 43 ಜನರು ಸಾವು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ''ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಮೇ ತಿಂಗಳಿನಲ್ಲಿ 39 ಅಪಘಾತಗಳು ಸಂಭವಿಸಿದ್ದು, 43 ಜನರು ಮರಣ ಹೊಂದಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರು ರ‍್ಯಾಶ್ ಡ್ರೈವ್ ಮಾಡುತ್ತಿದ್ದಾರೆ. ಕಳೆದ ತಿಂಗಳಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್​ಗಳಿಂದ 10 ಅಪಘಾತಗಳು ಉಂಟಾಗಿದ್ದು, 7 ಮರಣಾಂತಿಕ ಅಪಘಾತಗಳು ಹಾಗೂ 8 ಸಾವು ಸಂಭವಿಸಿವೆ. ಆದ್ದರಿಂದ ಅವರಿಗೆ ಸೂಕ್ತ ತರಬೇತಿ ಕೌನ್ಸಲಿಂಗ್ ಮತ್ತು ಅರಿವು ಕಾರ್ಯಕ್ರಮಗಳ ಆಯೋಜಿಸಬೇಕು'' ಎಂದು ಸೂಚಿಸಿದರು.

ಸಭೆಯಲ್ಲಿ ಮೈಸೂರು ನಗರ ಸಂಚಾರಿ ವಿಭಾಗದ ಡಿ.ಸಿ.ಪಿ ಜಾಹ್ನವಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:Mysore Sandal Soap: ಮೈಸೂರು ಸ್ಯಾಂಡಲ್‌ ಸೋಪ್‌ ಮೌಲ್ಯವೃದ್ಧಿಗೆ ಒತ್ತು; ಪರಿಣತರ ಸಲಹೆ ಕೇಳಿದ ಸಚಿವ ಎಂ.ಬಿ.ಪಾಟೀಲ್

ABOUT THE AUTHOR

...view details