ಕರ್ನಾಟಕ

karnataka

ವೈಭವದ ಮೈಸೂರು ದಸರಾ: ಅ. 9ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

By ETV Bharat Karnataka Team

Published : Oct 5, 2023, 1:51 PM IST

ಮೈಸೂರು ದಸರಾ ಎಂದರೆ ವಿಶೇಷ ಆಕರ್ಷಣೆ, ಅದರಲ್ಲೂ ಮೈಸೂರು ಅರಮನೆಯ ವೈಭವದ ಆಚರಣೆ ನೋಡಲು ಇನ್ನೂ ಚಂದ. ಅಂತಹ ಅರಮನೆಯ ಶರನ್ನವರಾತ್ರಿಯ ಕಾರ್ಯಕ್ರಮಗಳ ವಿವರ ಇಲ್ಲಿದೆ.

ರತ್ನ ಖಚಿತ ಸಿಂಹಾಸನ
ರತ್ನ ಖಚಿತ ಸಿಂಹಾಸನ

ಮೈಸೂರು: ಈ ಬಾರಿ ದಸರಾದಲ್ಲಿ ರಾಜ ವಂಶಸ್ಥರ ಶರನ್ನವರಾತ್ರಿ ಪೂಜಾ ಕೈಂಕರ್ಯಗಳ ವಿವರಗಳು ನಿಗದಿಯಾಗಿದೆ. ಅದರಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ, ಖಾಸಗಿ ದರ್ಬಾರ್, ಅರಮನೆಯಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ರಾಜವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ನಡೆಸುವ ರಾಜ ಪರಂಪರೆಯ ಶರನ್ನವರಾತ್ರಿಯ ಪೂಜಾ ವಿವರಗಳು ಹೀಗಿವೆ.

ಮೈಸೂರು ದಸರಾದ ವೈಭವ

ಅ. 9ರಂದು ರತ್ನ ಖಚಿತ ಸಿಂಹಾಸನ ಜೋಡಣೆ:ರಾಜ ಪರಂಪರೆಯ ಶರನ್ನವರಾತ್ರಿಯ ಪ್ರಮುಖ ಆಕರ್ಷಣೆಯಾದ ರತ್ನ ಖಚಿತ ಸಿಂಹಾಸನ ಜೋಡಣೆ ಅ. 9ರಂದು ಅರಮನೆಯ ದರ್ಬಾರ್ ಹಾಲ್​ನಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಗೆಜ್ಜಗಳ್ಳಿಯ ನುರಿತ ಕೆಲಸಗಾರರಿಂದ ಆಗಲಿದೆ. ಅದಕ್ಕೂ ಮುನ್ನ ಅರಮನೆಯಲ್ಲಿ ಬೆಳಗ್ಗೆಯಿಂದಲೇ ನವಗ್ರಹ ಪೂಜೆ, ಹೋಮಹವನಗಳು ನಡೆಯಲಿವೆ. ಆನಂತರ ಅರಮನೆಯ ನೆಲ ಮಾಳಿಗೆಯ ಸ್ಟ್ರಾಂಗ್ ರೂಂನಲ್ಲಿರುವ ಬಿಡಿ ಬಿಡಿ ಭಾಗದ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್​ಗೆ ತಂದು, 10.05ರಿಂದ 10.35ರ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ನಡೆಯಲಿದೆ. ಆನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಅರಮನೆಗೆ ಆಗಮಿಸಲಿದ್ದು, ಅವುಗಳಿಗೆ ಪೂಜೆ ಸಲ್ಲಿಸಲಿದ್ದಾರೆ.

ಅ. 15ರಂದು ಖಾಸಗಿ ದರ್ಬಾರ್: ಅರಮನೆಯ ರಾಜಪರಂಪರೆಯಂತೆ ಶರನ್ನವರಾತ್ರಿಯ ಮೊದಲ ದಿನ ಅ. 15ರಂದು ಅರಮನೆಯ ದರ್ಬಾರ್ ಹಾಲ್​ನಲ್ಲಿರುವ ರತ್ನ ಖಚಿತ ಆಸನಕ್ಕೆ ಅಂದು ಬೆಳಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹ ಜೋಡಣೆ ಮಾಡಲಾಗುತ್ತದೆ. ಆಗ ಆಸನ ಸಿಂಹಾಸನವಾಗುತ್ತದೆ. ಆನಂತರ ಬೆಳಗ್ಗೆ ಅರಮನೆಯ ಒಳಗೆ ಗಣಪತಿ ಹೋಮ, ನವಗ್ರಹ ಹೋಮ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಅನಂತರ ಬೆಳಗ್ಗೆ 7.05ರಿಂದ 7.45ರ ಶುಭ ಲಗ್ನದಲ್ಲಿ ರಾಜ ವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಕಂಕಣ ಧಾರಣೆ ಮಾಡಿಕೊಳ್ಳುತ್ತಾರೆ. ಆ ಬಳಿಕ ಅ. 15ರ ಭಾನುವಾರ ಬೆಳಗ್ಗೆ 9.45ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿಗೆ ಪೂಜೆ ಸಲ್ಲಿಸಿದ ಬಳಿಕ, 11.30ರಿಂದ 11.50ಕ್ಕೆ ದರ್ಬಾರ್ ಹಾಲ್​ನಲ್ಲಿ ಸಿಂಹಾಸನಕ್ಕೆ ರಾಜ ಪರಂಪರೆಯಂತೆ ಪೂಜೆ ಸಲ್ಲಿಸಿ, ರಾಜ ವಂಶಸ್ಥರು ರತ್ನ ಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ನಿತ್ಯ ಸಂಜೆ ಶರನ್ನವರಾತ್ರಿ ದಿನಗಳಲ್ಲಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಮೈಸೂರು ದಸರಾದ ವೈಭವ

ಅ. 20ಕ್ಕೆ ಸರಸ್ವತಿ ಪೂಜೆ: ರಾಜ ವಂಶಸ್ಥರು ಬಳಸುತ್ತಿದ್ದ ವೀಣೆ, ಧರ್ಮ ಗ್ರಂಥಗಳನ್ನು ಶಾರದಾ ದೇವಿಯ ಫೋಟೋದ ಮುಂದೆ ಇಟ್ಟು ವಿದ್ಯಾ ದೇವತೆಯಾದ ಸರಸ್ವತಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಅ. 21ರಂದು ಕಾಳರಾತ್ರಿ ಪೂಜೆ ಹಾಗೂ 22ರಂದು ದುರ್ಗಾಷ್ಠಮಿ ಪೂಜೆ ನೆರವೇರಲಿವೆ. ರಾಜ ವಂಶಸ್ಥರು ಈ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಿದ್ದಾರೆ.

ಮೈಸೂರು ದಸರಾದ ವೈಭವ

ಅ. 23ರಂದು ಆಯುಧ ಪೂಜೆ: ಅರಮನೆಯ ಶರನ್ನವರಾತ್ರಿಯ ಪ್ರಮುಖ ಪೂಜೆ ಆಯುಧ ಪೂಜೆ. ಅಂದು ಬೆಳಗ್ಗೆ ಅರಮನೆಯಲ್ಲಿ ಚಂಡಿಕಾ ಹೋಮ ಪೂಜೆ ನಡೆಯಲಿದೆ. ಬೆಳಗ್ಗೆ 5.30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಅರಮನೆಯ ಆನೆ ಬಾಗಿಲಿಗೆ ಆಗಮಿಸಿ, ಅರಮನೆಯಲ್ಲಿರುವ ಖಾಸಾ ಆಯುಧಗಳನ್ನು ಬೆಳಗ್ಗೆ 6.05ರಿಂದ 6.15ರವರೆಗಿನ ಸಮಯದಲ್ಲಿ ಅರಮನೆಯ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಖಾಸಾ ಆಯುಧಗಳನ್ನು ಸ್ವಚ್ಛಗೊಳಿಸಿ, ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಾಪಸ್ ತರಲಾಗುವುದು. ನಂತರ 11.45ಕ್ಕೆ ಪುನಃ ಅರಮನೆಯ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಿದಾಗ ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಮೈಸೂರು ದಸರಾದ ವೈಭವ

ಇದಾದ ನಂತರ ಅ. 23ರ ಮಧ್ಯಾಹ್ನ 12.20ರಿಂದ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಯುಧ ಪೂಜಾ ಕಾರ್ಯಗಳನ್ನು ಆರಂಭಿಸಲಿದ್ದು, 12.45ರವರೆಗೆ ಆಯುಧಗಳಿಗೆ ಪೂಜೆ ಹಾಗೂ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ, ಅರಮನೆಯ ಆನೆ ಹಾಗೂ ರಾಜರು ಉಪಯೋಗಿಸುವ ದುಬಾರಿ ಬೆಲೆಯ ಖಾಸಗಿ ಕಾರುಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಅದಾದ ಬಳಿಕ ಆಯುಧ ಪೂಜೆ ದಿನ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್ ನಡೆಸುವ ರಾಜ ವಂಶಸ್ಥರು ಆನಂತರ ಅದೇ ದಿನ ರತ್ನ ಖಚಿತ ಸಿಂಹಾಸನದಿಂದ ಸಿಂಹ ಲಾಂಛನವನ್ನು ವಿಸರ್ಜನೆ ಮಾಡುತ್ತಾರೆ.

ಅ. 24ರ ಮಂಗಳವಾರ ವಿಜಯದಶಮಿ:ರಾಜ ಪರಂಪರೆಯಂತೆ ಅ. 24ರಂದು ಅರಮನೆಯ ಆನೆ ಬಾಗಿಲಿನಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ. ಅಲ್ಲಿಂದ ರಾಜರು ಬಳಸುತ್ತಿದ್ದ ಆಯುಧಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಇಟ್ಟು, 11ರಿಂದ 11.40ರ ಶುಭ ಸಮಯದಲ್ಲಿ ವಿಜಯದಶಮಿ ಮೆರವಣಿಗೆ ಆನೆ ಬಾಗಿಲಿನಿಂದ ಅರಮನೆಯ ಒಳಗಡೆ ಇರುವ ಭುವನೇಶ್ವರಿ ದೇವಾಲಯದವರೆಗೆ ರಾಜ ವಂಶಸ್ಥರು ಮೆರವಣಿಗೆಯಲ್ಲಿ ಆಗಮಿಸಿ ದೇವಾಲಯದ ಆವರಣದಲ್ಲಿರುವ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅರಮನೆಗೆ ವಾಪಸ್ ಆಗಲಿದ್ದಾರೆ. ಅಲ್ಲಿಗೆ ರಾಜ ವಂಶಸ್ಥರ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆ ಕೊನೆಗೊಳ್ಳಲಿದೆ. ಆನಂತರ ನವೆಂಬರ್ 8 ರಂದು ರತ್ನ ಖಚಿತ ಸಿಂಹಾಸನವನ್ನು ಧಾರ್ಮಿಕ ಪೂಜಾ ಕೈಂಕರ್ಯಗಳ ನಂತರ ವಿಸರ್ಜನೆ ಮಾಡಿ, ಭದ್ರತಾ ಕೊಠಡಿಯಲ್ಲಿ ಇರಿಸಲಾಗುವುದು.

ಇದನ್ನೂ ಓದಿ :ಮೈಸೂರು ದಸರಾ : ಅಕ್ಟೋಬರ್​ 6 ರಿಂದ 13ರ ವರೆಗೆ ಯುವ ಸಂಭ್ರಮ.. ಎಸ್​ಪಿ ಸೀಮಾ ಲಾಟ್ಕರ್

ABOUT THE AUTHOR

...view details