ಕರ್ನಾಟಕ

karnataka

ಗಂಗಾವತಿಯಲ್ಲಿ ಪರಣ್ಣ ಮುನವಳ್ಳಿ ಪರ ಸಚಿವ ಶ್ರೀರಾಮುಲು ಮತಬೇಟೆ

By

Published : Mar 14, 2023, 9:06 AM IST

ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ಗಂಗಾವತಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಬಹಿರಂಗ ಸಮಾವೇಶ ಉದ್ದೇಶಿಸಿ ಸಚಿವ ಬಿ.ಶ್ರೀರಾಮುಲು ಮಾತನಾಡಿದರು.

Vijaya Sankalpa Yatra in Gangavathi
ಗಂಗಾವತಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಗಂಗಾವತಿ (ಕೊಪ್ಪಳ): "ಆಂಜನೇಯ ಜನಿಸಿದ ನೆಲದಲ್ಲಿ ಧರ್ಮ ಉಳಿಯಬೇಕು. ಸತ್ಯ ಆಳ್ವಿಕೆ ಮಾಡಬೇಕಾದರೆ ಪ್ರಾಮಾಣಿಕ ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿಗೆ ಮತ್ತೊಮ್ಮೆ ಅವಕಾಶ ನೀಡಬೇಕು" ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಪರೋಕ್ಷವಾಗಿ ಆಪ್ತ ಸ್ನೇಹಿತ ಜನಾರ್ದನ ರೆಡ್ಡಿಗೆ ಟಾಂಗ್ ಕೊಟ್ಟರು. ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ಭಾಗವಾಗಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಆಪ್ತ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಕೆಆರ್​​ಪಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಶ್ರೀರಾಮುಲು ಪ್ರಚಾರ ಕಣಕ್ಕೆ ಧುಮಕಿದ್ದಾರೆ.

ಪರಣ್ಣ ಪರ ಬ್ಯಾಟಿಂಗ್: ಬಿಜೆಪಿ ರಾಜ್ಯದಲ್ಲಿ ಇನ್ನೂ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಆದರೆ ನಗರದಲ್ಲಿ ನಡೆದ ವಿಜಯ ಸಂಕಲ್ಪ ರಥಯಾತ್ರೆಯ ಸಂದರ್ಭದಲ್ಲಿ ಸಚಿವ ಶ್ರೀರಾಮುಲು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಎಂದು ಅಧಿಕೃತ ಘೋಷಣೆ ಮಾಡಿದರು. ಇದು ಟಿಕೆಟ್ ಅಕಾಂಕ್ಷಿಗಳಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲು ಅಸ್ಸಾಂ ಮುಖ್ಯಮಂತ್ರಿ ಆಗಮಿಸಿದ್ದಾರೆ. ಪರಣ್ಣ ಮುನವಳ್ಳಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಲು ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಬಂದಿದ್ದಾರೆ. 2023ರಲ್ಲಿ ನಡೆಯುವ ಚುನಾವಣೆಗಿದು ವಿಜಯ ಸಂಕಲ್ಪ ಯಾತ್ರೆಯಾಗಬೇಕು. ಕ್ಷೇತ್ರದಿಂದ ಪರಣ್ಣ ಮುನವಳ್ಳಿ ಗೆಲ್ಲಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಪೈಕಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ಕರಡಿ ಸಂಗಣ್ಣ, ಗಂಗಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.

3 ಗಂಟೆ ವಿಳಂಬ:ವಿಜಯ ಸಂಕಲ್ಪ ರಥಯಾತ್ರೆ ಬೆಳಗ್ಗೆ 10.30ಕ್ಕೆ ನಗರಕ್ಕೆ ಆಗಮಿಸಲಿದೆ ಎಂದು ಪಕ್ಷದಿಂದ ಅಧಿಕೃತ ಮಾಹಿತಿ ನೀಡಲಾಗಿತ್ತು. ಆದರೆ ಕೊಪ್ಪಳದಿಂದ ರಾಷ್ಟ್ರೀಯ ಹೆದ್ದಾರಿ ಬೂದಗುಂಪಾದಿಂದ ರಥಯಾತ್ರೆ ಗಂಗಾವತಿಗೆ ಬಂದಿದ್ದು ಮಧ್ಯಾಹ್ನ 1.30ಕ್ಕೆ. ಉರಿಬಿಸಿಲಿನಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಜನ ಕಾದು ಸುಸ್ತಾದರು. ಬಿಸಿಲ ತಾಪಕ್ಕೆ ಬಳಲಿ ಬೆಂಡಾದ ಜನ ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಮರದ ನೆರಳಲ್ಲಿ ನಿಲ್ಲುತಿದ್ದರು.

ಪತ್ರಕರ್ತನ ಜೇಬಿಗೆ ಕನ್ನ:ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಯ ಬಗ್ಗೆ ವರದಿ ಮಾಡಲು ಆಗಮಿಸಿದ್ದ ರಾಜ್ಯಮಟ್ಟದ ದೈನಿಕವೊಂದರ ವರದಿಗಾರನ ಜೇಜಿಗೆ ಕಳ್ಳರು ಕನ್ನ ಹಾಕಿದ ಘಟನೆಯೂ ನಡೆಯಿತು. ವಿಶ್ವನಾಥ ಬೆಳಗಲ್ಮಠ ಎಂಬವರು ಬ್ಯಾಂಕಿಗೆ ಪಾವತಿಸಲು ತಂದಿದ್ದ ಸುಮಾರು 35 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ಅಸ್ಸೋಂ ಸಿಎಂ ಪಾಲ್ಗೊಂಡಿದ್ದ ರಥಯಾತ್ರೆ ಸಿಬಿಎಸ್ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ವರದಿಗಾರ ತನ್ನ ಜೇಬಿನಿಂದ ಮೊಬೈಲ್ ತೆಗೆದು ಫೋಟೋ ಕ್ಲಿಕ್ಕಿಸಿಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಜನಸಂದಣಿ ಏರ್ಪಟ್ಟಿದ್ದು ಕಳ್ಳರು ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ:ಇನ್ಮುಂದೆ ನನ್ನಿಂದ ಹಲವರಿಗೆ ಶಾಕ್ ಕಾದಿದೆ: ಜನಾರ್ದನ ರೆಡ್ಡಿ ಗುಡುಗು

ABOUT THE AUTHOR

...view details