ಕರ್ನಾಟಕ

karnataka

ಧರಣಿ ನಡೆಸುತ್ತಿದ್ದ ವೇಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ರೈತರು.. ಡಿಸಿ, ಎಸ್ಪಿ ಭೇಟಿ

By ETV Bharat Karnataka Team

Published : Aug 27, 2023, 8:22 PM IST

ಕಾರಟಗಿಯಲ್ಲಿ ರೈತರು ನಡೆಸುತ್ತಿರುವ ಧರಣಿ ಸಂದರ್ಭದಲ್ಲಿ ಇಬ್ಬರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ಹೀಗಾಗಿ ಆಸ್ಪತ್ರೆಗೆ ಡಿಸಿ ಹಾಗೂ ಎಸ್​ಪಿ ಭೇಟಿ ನೀಡಿದ್ದಾರೆ.

ಆಸ್ಪತ್ರೆಗೆ ಡಿಸಿ ಹಾಗೂ ಎಸ್​ಪಿ ಭೇಟಿ
ಆಸ್ಪತ್ರೆಗೆ ಡಿಸಿ ಹಾಗೂ ಎಸ್​ಪಿ ಭೇಟಿ

ಗಂಗಾವತಿ (ಕೊಪ್ಪಳ) : ಸರಿಯಾದ ಮಳೆ ಇಲ್ಲದಿರುವ ಕಾರಣಕ್ಕೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕಾರಟಗಿಯಲ್ಲಿ ರೈತರು ನಡೆಸುತ್ತಿರುವ ಧರಣಿ ಸಂದರ್ಭದಲ್ಲಿ ಇಬ್ಬರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಆರೋಗ್ಯದಲ್ಲಿ ದಿಢೀರ್ ಏರುಪೇರಿನಿಂದಾಗಿ ಆಸ್ಪತ್ರೆ ಪಾಲಾದ ರೈತರನ್ನು ಕಾರಟಗಿಯ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ನಲೀನ್ ಅತುಲ್ ಕುಮಾರ್ ಹಾಗೂ ಜಿಲ್ಲಾ ಎಸ್ಪಿ ಯಶೋಧಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಬರಪೀಡಿದ ಜಿಲ್ಲೆಗಳೆಂದು ಘೋಷಿಸುವಂತೆ ಹಾಗೂ ತುಂಗಭದ್ರಾ ಎಡದಂಡೆ ನಾಲೆಯ 31ನೇ ವಿತರಣಾ ಕಾಲುವೆಯ ಕೆಳಭಾಗಕ್ಕೆ ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ, ಕೃಷಿ ಕರ್ನಾಟಕ ರಾಜ್ಯ ರೈತ ಸಂಘ ಕಾರಟಗಿಯಲ್ಲಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ತಮ್ಮ ಅಹವಾಲು ಸ್ವೀಕರಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಧರಣಿಯ ಬಗ್ಗೆ ಸಚಿವ ಸ್ಪಂದಿಸಿಲ್ಲ ಎನ್ನಲಾಗಿದ್ದು, ಹೀಗಾಗಿ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರೈತ ಮುಖಂಡರಿಗೆ ತಂಪು ಪಾನೀಯ: ಏತನ್ಮಧ್ಯೆ ರೈತ ಮುಖಂಡರು ಅಸ್ವಸ್ಥಗೊಂಡು ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ರೈತ ಮುಖಂಡರಿಗೆ ತಂಪು ಪಾನೀಯ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಜಿಲ್ಲಾಧಿಕಾರಿ ನಲೀನ್ ಅತುಲ್ ಮಾತನಾಡಿ, ರೈತರು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗಬಾರದು. ಬರ ಪೀಡಿತ ಜಿಲ್ಲೆ ಘೋಷಣೆ ಮಾಡಲಾಗುವುದು. ರಾಜ್ಯ ಸರ್ಕಾರ ಹಾಗೂ ವಿತರಣಾ ಕಾಲುವೆಯ ಕೊನೆಯ ಭಾಗದ ರೈತರಿಗೆ ಸಮರ್ಪಕ ನೀರು ಒದಗಿಸಿ, ಸಮಸ್ಯೆ ಸರಿಪಡಿಸಲಾಗುವುದು ಎಂದು ಅಭಯ ನೀಡಿದರು.

ಸತ್ಯಾಗ್ರಹ ಹಿಂಪಡೆಯುವಂತೆ ಮನವಿ: ಈ ಬಗ್ಗೆ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಹೋರಾಟದ ಬಗ್ಗೆ ಸಚಿವರು ಗಮನಿಸಿದ್ದಾರೆ. ಬರ ಪೀಡಿತ ತಾಲೂಕುಗಳ ಹೆಚ್ಚುವರಿ ಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ. ಅದರಲ್ಲಿ ಕಾರಟಗಿ ಇರಲಿದೆ ಎಂದು ಭರವಸೆ ನೀಡಿದ ಅವರು, ಸತ್ಯಾಗ್ರಹ ಹಿಂಪಡೆಯುವಂತೆ ಮನವಿ ಮಾಡಿದರು.

ಪಟ್ಟು ಬಿಡದ ರೈತರು ಸಚಿವ ಶಿವರಾಜ ತಂಗಡಗಿ ಮಂಗಳವಾರ ಕಾರಟಗಿ ಪಟ್ಟಣಕ್ಕೆ ಬರುತ್ತಾರೆ. ಅವರೊಂದಿಗೆ ಚರ್ಚಿಸಿ ನಮ್ಮ ಬೇಡಿಕೆಗಳನ್ನು ಮುಂದಿಡುತ್ತೇವೆ. ಅವರು ನಮ್ಮ ಬೇಡಿಕೆಗೆ ಸ್ಪಂದಿಸಿ ಒಪ್ಪಿಗೆ ನೀಡಿದರೆ ಧರಣಿ ಹಿಂಪಡೆಯುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಎ.ಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರ್​ ಎಂ ಕುಮಾರಸ್ವಾಮಿ, ಡಿ.ವೈ.ಎಸ್.ಪಿ. ಸಿದ್ಧಲಿಂಗಪ್ಪಗೌಡ ಪಾಟೀಲ್, ಡಿ.ಎಚ್.ಒ ಡಾ. ಲಿಂಗರಾಜ, ಟಿ. ಡಾ. ಶಕುಂತಲಾ ಪಾಟೀಲ್, ಪಿ.ಐ ಸಿದ್ರಾಮಯ್ಯಸ್ವಾಮಿ, ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬಿಲ್ಗಾರ ಇದ್ದರು.

ಇದನ್ನೂ ಓದಿ:ರಾಯಚೂರು: ಕಲುಷಿತ ನೀರು ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ABOUT THE AUTHOR

...view details