ಕರ್ನಾಟಕ

karnataka

ಚರಂಡಿ ನೀರು ಸ್ಥಗಿತ: ಕಸಕಡ್ಡಿಯಿಂದ ಗಂಗಾವತಿ ತಹಶೀಲ್ದಾರ್ ಮನೆಗೇ ದಿಗ್ಬಂಧನ

By ETV Bharat Karnataka Team

Published : Dec 12, 2023, 2:06 PM IST

ಗಂಗಾವತಿಯಲ್ಲಿ ತಹಶೀಲ್ದಾರ್ ಅವರ ಮನೆಯ ಸುತ್ತಲೂ ಚರಂಡಿ ನೀರು ಸ್ಥಗಿತವಾಗಿದ್ದು, ದಿಗ್ಬಂಧನ ವಿಧಿಸಿದಂತಾಗಿದೆ.

ತಹಶೀಲ್ದಾರ್ ಮನೆ ದಿಗ್ಬಂಧನ
ತಹಶೀಲ್ದಾರ್ ಮನೆ ದಿಗ್ಬಂಧನ

ಗಂಗಾವತಿ:ನಗರದಲ್ಲಿ ಬೀದಿಗಳ ಕಸಗೂಡಿಸುವಿಕೆ, ಚರಂಡಿ ಸ್ವಚ್ಛತೆಯ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ. ನಗರಸಭೆಯ ಸಿಬ್ಬಂದಿ ದಿನಕ್ಕೆ ಎರಡು ಮೂರು ವಾರ್ಡ್​ಗಳಲ್ಲಿ ಸಂಚರಿಸಿ ಸಮಸ್ಯೆ ಶಮನಕ್ಕೆ ಶ್ರಮಿಸುತ್ತಿದ್ದಾರೆ. ಅದಾಗ್ಯೂ ಕಸ ಮತ್ತು ಚರಂಡಿ ಸ್ವಚ್ಛತೆ ನಗರಸಭೆಗೆ ಸವಾಲಿನ ಕೆಲಸವಾಗುತ್ತಿದೆ. ಇದೀಗ ತಹಶೀಲ್ದಾರ್ ಅವರ ಮನೆಯ ಸುತ್ತಲೂ ಚರಂಡಿ ನೀರು ಸ್ಥಗಿತವಾಗಿದ್ದು, ದಿಗ್ಬಂಧನ ವಿಧಿಸಿದಂತಾದ ಪರಿಸ್ಥಿತಿ ಎದುರಾಗಿದೆ.

ಕನಕಗಿರಿ ಮತ್ತು ಗಂಗಾವತಿಯ ಪ್ರಭಾರಿ, ತಹಶೀಲ್ದಾರ್ ವಿಶ್ವನಾಥ ಮುರಡಿ ಅವರ ಮನೆಯ ಸುತ್ತಲೂ ಇರುವ ಚರಂಡಿಯ ನೀರು ಸರಾಗವಾಗಿ ಹರಿಯದೇ ಬ್ಲಾಕ್ ಆಗಿದ್ದು, ಮನೆಗೆ ಪ್ರವೇಶಕ್ಕೆ ಅವಕಾಶವಿಲ್ಲದಂತೆ ದಿಗ್ಬಂಧನದಂತಾಗಿದೆ. ನಗರಸಭೆಯ 20ನೇ ವಾರ್ಡ್​ ಕಂಬಾಳಿ ಮಠ ಏರಿಯಾದಲ್ಲಿ ಬಹುತೇಕ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದ ಪರಿಣಾಮ ರಸ್ತೆಯ ಮೇಲೆಕ್ಕೆ ಚರಂಡಿ ನೀರು ಹರಿಯುತ್ತಿದೆ. ಹೀಗಾಗಿ ಇಡೀ ಏರಿಯಾದಲ್ಲಿ ಮಲೀನತೆ ಕಂಡು ಬರುತ್ತಿದೆ. ಇದೇ ಪರಿಸರದಲ್ಲಿ ಜೈನ ಸಮಾಜಕ್ಕೆ ಸೇರಿದ ಮಂದಿರವಿದ್ದು, ಸುತ್ತಲೂ ಕಸಕಡ್ಡಿ ಸಂಗ್ರಹವಾಗಿದೆ.

ಚರಂಡಿಯಲ್ಲಿ ಹರಿಯಬೇಕಿದ್ದ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಪರಿಣಾಮ ನಾನಾ ಕೆಲಸ ಕಾರ್ಯಗಳಿಗಾಗಿ ತಹಶೀಲ್ದಾರ್ ವಿಶ್ವನಾಥ ಮುರುಡಿ ಮನೆಗೆ ಹೋಗಬೇಕಿದ್ದ ಸಾರ್ವಜನಿಕರು, ಇಲಾಖೆಯ ಸಿಬ್ಬಂದಿ ವರ್ಗ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ.

ಹತ್ತಾರು ಬಾರಿ ಗಮನಕ್ಕೆ:ಓಣಿಯಲ್ಲಿ ಹೊಸ ಚರಂಡಿ, ರಸ್ತೆ ನಿರ್ಮಾಣ ಮಾಡಬೇಕಿದೆ. ಅಲ್ಲಿವರೆಗೂ ಚರಂಡಿ ತುಂಬಿ ರಸ್ತೆಗೆ ಹರಿಯದಂತೆ ಆಗಾಗ ಸ್ವಚ್ಛಗೊಳಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ಹಲವು ಬಾರಿ ತಿಳಿಸಲಾಗಿದೆ. ಅಲ್ಲದೇ ನಗರ ಯೋಜನಾ ನಿರ್ದೇಶಕಿ ಅವರ ಗಮನಕ್ಕೂ ತರಲಾಗಿದೆ. ಆದರೆ ಯಾವ ಪ್ರಯೋಜನವಾಗಿಲ್ಲ. ಇದರಿಂದ ನನಗಷ್ಟೇ ಅಲ್ಲ, ಸರ್ಕಾರಿ ಕೆಲಸ ಕಾರ್ಯಕ್ಕೆ ಎಂದು ಬರುವ ಇಲಾಖೆಗಳ ಸಿಬ್ಬಂದಿ, ಜನಸಾಮಾನ್ಯರಿಗೆ ಮತ್ತು ಓಣಿಯ ಜನರಿಗೆ ಇನ್ನಿಲ್ಲದ ಸಮಸ್ಯೆ ನಿರ್ಮಾಣವಾಗಿದೆ ಎಂದು ತಹಶೀಲ್ದಾರ್ ವಿಶ್ವನಾಥ ಮುರಡಿ ಹೇಳಿದ್ದಾರೆ.

ಶೀಘ್ರ ಕಾಮಗಾರಿ:ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಾರ್ಡ್​ನ ಸದಸ್ಯೆ ಜಯಶ್ರೀ ಸಿದ್ದಾಪುರ, ಈ ಸಮಸ್ಯೆ ಪರಿಹಾರಕ್ಕೆ ನಗರೋತ್ಥಾನದಲ್ಲಿ ಅನುದಾನ ಮೀಸಲಿಡಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಿಲ್ಲ.
ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 1.20 ಕೋಟಿ ಮೊತ್ತದ ಅನುದಾನ ಮೀಡಲಿಸಲಾಗಿದೆ. ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ ಪೌರಾಯುಕ್ತರನ್ನು ಸ್ಥಳಕ್ಕೆ ಕರೆಯಿಸಿ ಅವರ ಗಮನಕ್ಕೆ ತರಲಾಗುವುದು. ಶೀಘ್ರ ನಗರೋತ್ಥಾನ ಕಾಮಗಾರಿ ಆರಂಭವಾಗಲಿದ್ದು, ಅಲ್ಲಿವರೆಗೂ ನಿಗದಿತವಾಗಿ ಚರಂಡಿ ಕ್ಲೀನ್ ಮಾಡಿಸಿ, ಬ್ಲೀಚಿಂಗ್ ಪೌಡರ್ ಹಾಕಿಸಲಾಗುವುದು ಎಂದರು.

ಚರಂಡಿ ಒತ್ತುವರಿ:ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೌರಾಯುಕ್ತ ಆರ್.ವಿರೂಪಾಕ್ಷ, 20ನೇ ವಾರ್ಡ್​ನ ಹಳೇಯ ಏರಿಯಾದಲ್ಲಿ ಬಹುತೇಕರು ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಿಂದ ಸ್ವಚ್ಛತೆಗೆ ತೊಂದರೆಯಾಗುತ್ತಿದೆ. ಈ ಹಿಂದೆ ಸಮಸ್ಯೆ ಗಮನಕ್ಕೆ ಬಂದಾಗ ಎರಡ್ಮೂರು ಬಾರಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈಗ ಮತ್ತೆ ಭೇಟಿ ನೀಡುತ್ತೇನೆ. ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಲಾಗುವುದು. ರಸ್ತೆ, ಚರಂಡಿ ನಿರ್ಮಾಣಕ್ಕೆಂದು ಈ ಹಿಂದೆ ಒಂದೂವರೆ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿತ್ತು. ಸಮಸ್ಯೆ ಗಮನಕ್ಕೆ ಬಂದಾಗ ಎರಡ್ಮೂರು ಬಾರಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈಗ ಮತ್ತೆ ಭೇಟಿ ನೀಡುತ್ತೇನೆ. ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ:ಬರ ಪರಿಹಾರ ಕಡಿಮೆ ಮಾಡಿದ್ದಕ್ಕೆ ಕಿಡಿ; ಸರ್ಕಾರಕ್ಕೆ ತಲಾ 1 ಸಾವಿರ ರೂ. ಕೊಡಲು ಮುಂದಾದ ಹಾವೇರಿ ರೈತರು

ABOUT THE AUTHOR

...view details