ಕರ್ನಾಟಕ

karnataka

ಪಿಎಸ್ಐ ನೇಮಕಾತಿ ಅಕ್ರಮ: ಕಿಂಗ್‌ಪಿನ್‌ ಆರ್.ಡಿ.ಪಾಟೀಲ್‌ ವಿರುದ್ದ ಹೊಸ ಪ್ರಕರಣ ದಾಖಲು

By

Published : Jan 20, 2023, 12:46 PM IST

Accused R D Patil
ಆರೋಪಿ ಆರ್ ಡಿ ಪಾಟೀಲ್‌ ()

ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಲಬುರಗಿಯ ಸೆಂಟ್ರಲ್​ ಜೈಲ್​ನಲ್ಲಿದ್ದ ಆರೋಪಿ ಆರ್.ಡಿ.ಪಾಟೀಲ್​ಗೆ ಡಿಸೆಂಬರ್​ನಲ್ಲಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಈಗ ನ್ಯಾಯಾಲಯದ ಷರತ್ತುಗಳನ್ನು ಪಾಟೀಲ್​ ಮೀರಿದ್ದಾರೆ.

ಕಲಬುರಗಿ:ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್ಐ) ನೇಮಕಾತಿ ಅಕ್ರಮದ ಕಿಂಗ್‌ಪಿನ್ ಆರ್‌.ಡಿ.ಪಾಟೀಲ್‌ಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಗುರುವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಆರ್.ಡಿ.ಪಾಟೀಲ್​ ಮನೆಗೆ ದಾಳಿ ಮಾಡಿದ್ದರು. ಇದಾದ ಬಳಿಕ ರಾತ್ರಿ ಬಂಧನಕ್ಕೆ‌‌ ತೆರಳಿದ್ದ ಸಿಐಡಿ ಅಧಿಕಾರಿಗಳಿಂದ ಪಾಟೀಲ್​ ತಪ್ಪಿಸಿಕೊಂಡು ಮನೆಯಿಂದ ಪರಾರಿಯಾಗಿದ್ದಾರೆ ಎಂದು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ‌ ಜೈಲು ಸೇರಿ ಜಾಮೀನಿನ ಮೇಲೆ‌ ಹೊರಬಂದಿರುವ ಪ್ರಮುಖ ಆರೋಪಿಗಳ ಮನೆಗಳ ಮೇಲೆ‌ ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ತೆಲಂಗಾಣ ಪಾಸಿಂಗ್ ಹೊಂದಿದ್ದ ಒಂದು ಟೆಂಪೋ ಟ್ರಾವೆಲ್ಲರ್ ಹಾಗೂ ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಆರ್.ಡಿ.ಪಾಟೀಲ್​ ಹಾಗೂ ಆತನ ಸಹೋದರ ಮಹಾಂತೇಶ ಪಾಟೀಲ, ಜ್ಞಾನಜ್ಯೋತಿ‌ ಶಾಲೆಯ ಒಡತಿ ದಿವ್ಯಾ ಹಾಗರಗಿ, ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಚಿಲ್ಲ ಮತ್ತು ಮಂಜುನಾಥ ಮೇಳಕುಂದಿಯ ಮನೆಗಳ ಮೇಲೆ ದಾಳಿ ಮಾಡಿ ರಾತ್ರಿಯವರೆಗೆ ತನಿಖೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಆರ್.ಡಿ.ಪಾಟೀಲ್​ಗೆ ಸೇರಿದ ನಗರದ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಮನೆ‌ ಶೋಧಿಸಿದ ಇಡಿ ಅಧಿಕಾರಿಗಳು ರಾತ್ರಿ ಹೊರಬಂದ ಬಳಿಕ ಅಲ್ಲಿಗೆ ಸಿಐಡಿ‌‌ ಅಧಿಕಾರಿಗಳು ತೆರಳಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ದಾಖಲಾದ ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತಾದ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪಾಟೀಲ್​ನನ್ನು ಬಂಧಿಸಲು ಮುಂದಾದಾಗ, ಯಾವ ಕೇಸು? ನನಗೇನೂ ಗೊತ್ತಿಲ್ಲ ವಿನಾಕಾರಣ ನೀವು ಕಿರುಕುಳ ನೀಡುತ್ತಿದ್ದೀರಿ ಎಂದು ಹೇಳುತ್ತಲೇ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಅಶೋಕ ನಗರ ಠಾಣೆಗೆ ಸಿಐಡಿ ಡಿಟೆಕ್ಟಿವ್ ಸಬ್ ಇನ್​ಸ್ಪೆಕ್ಟರ್ ಆನಂದ್ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

ಆರ್.ಡಿ.ಪಾಟೀಲ್‌ಗೆ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಆದರೆ ಪಾಟೀಲ್, ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು, ಜಾಮೀನು ರದ್ದುಗೊಳಿಸಬೇಕೆಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಇನ್ನಷ್ಟೇ ಮೇಲ್ಮನವಿ ವಿಚಾರಣೆಗೆ ಬರಬೇಕಿದೆ. ಈ ನಡುವೆ ಮತ್ತೊಂದು ಪ್ರಕರಣ ದಾಖಲಾಗಿರುವುದು ಆರ್ ಡಿ ಪಾಟೀಲ್​ಗೆ ಉರುಳಾಗುವ ಸಾಧ್ಯತೆ ಇದೆ.

ಮೇಲ್ಮನವಿ ಯಾಕೆ?:ನ್ಯಾಯಾಲಯದ ಷರತ್ತಿನ ಅನ್ವಯ ಆರ್.ಡಿ.ಪಾಟೀಲ್ ಮೊಬೈಲ್ ಸಂಖ್ಯೆ ಬದಲಾಯಿಸಬಾರದು, ನ್ಯಾಯಾಲಯಕ್ಕೆ ನೀಡಿರುವ ವಿಳಾಸದ ಮನೆಯಲ್ಲಿಯೇ ಲಭ್ಯವಿರಬೇಕು. ಜಿಲ್ಲೆಯಿಂದ ಹೊರಗೆ ಹೋಗುವಂತಿಲ್ಲ. ಹೀಗೆ ಹಲವು ಷರತ್ತುಗಳನ್ನು ನ್ಯಾಯಾಲಯ ಜಾಮೀನು ನೀಡಿದಾಗ ತಿಳಿಸಿತ್ತು. ಆದರೆ ಸಿಐಡಿ ಅಧಿಕಾರಿಗಳು ಆತ ನೀಡಿದ ವಿಳಾಸದ ಮನೆಗೆ ಎರಡು ಬಾರಿ ತೆರಳಿದಾಗಲೂ ಆರ್.ಡಿ.ಪಾಟೀಲ್ ಸಿಕ್ಕಿರಲಿಲ್ಲ. ಆತನ ಮೊಬೈಲ್​ಗೆ ಕರೆ ಮಾಡಿದಾಗ ಸಂಖ್ಯೆ ಸ್ವಿಚ್​ ಆಫ್ ಬಂದಿದೆ. ಎರಡು ಬಾರಿ ನೋಟಿಸ್ ನೀಡಿದ್ದರೂ ಪಾಟೀಲ್​ ಅಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ ಸಿಐಡಿ ಅಧಿಕಾರಿಗಳು ಜಾಮೀನು ರದ್ದು ಕೋರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಪಿಎಸ್ಐ ಅಕ್ರಮ: ಕಿಂಗ್‌ಪಿನ್ ಆರ್ ಡಿ ಪಾಟೀಲ್ ಜೈಲಿನಿಂದ ಬಿಡುಗಡೆ

ABOUT THE AUTHOR

...view details