ಕಲಬುರಗಿ: ಇದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕೊನೆ ಚುನಾವಣೆ. ಚುನಾವಣೆ ಮುಗಿದ ಮೇಲೆ ಮತ್ತೆ ಕೋಲಾರಕ್ಕೆ ಬೈ ಬೈ ಹೇಳಿ ಹೋಗುತ್ತಾರೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಹಿರೊಳ್ಳಿಯಲ್ಲಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಕೋಲಾರದಲ್ಲಿ ನಿಲ್ಲುವುದಕ್ಕೆ ನಮ್ಮ ಸ್ವಾಗತ ಇದೆ. ಐದು ವರ್ಷದಲ್ಲಿ ಮಾಡಬೇಕಾದ ಅಭಿವೃದ್ಧಿಯಂತೂ ಮಾಡಲಿಲ್ಲ. ಈಗಲಾದರೂ ಇಡೀ ಜಿಲ್ಲೆಯ ಅಭಿವೃದ್ಧಿ ಮಾಡ್ತೀನಿ ಎಂದು ಹೇಳಿದ್ದಾರಾ? ಎಂದು ವ್ಯಂಗ್ಯವಾಡಿದರು.
ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುತ್ತಾರೆ: ನಾವು ಗೆಲ್ಲಲು ಹೋರಾಟ ಮಾಡುತ್ತೇವೆ. ಅವರು ಗೆಲ್ಲಲು ಅವರು ಹೋರಾಟ ಮಾಡುತ್ತಾರೆ. ಕೋಲಾರದಲ್ಲಿ ಜನತೆ ಆಶೀರ್ವಾದದಿಂದ ನಮ್ಮ ಜೆಡಿಎಸ್ ಅಭ್ಯರ್ಥಿ ಗೆದ್ದು ಬರಲಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು. ಇನ್ನು ಐದು ಲಕ್ಷ ಕೋಟಿ ನೀರಾವರಿಗೆ ಕೊಡುವುದಾಗಿ ಹೇಳುವ ಸಿದ್ದರಾಮಯ್ಯ ಅವರು, ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದರು?.ನೀರೇ ಕೊಡದವರು ಮಜ್ಜಿಗೆ ಕೊಡ್ತಾರಾ? ಎಂದು ಟಾಂಗ್ ನೀಡಿದರು.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ :ಮಾಜಿ ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ತಮ್ಮ ಕ್ಷೇತ್ರವನ್ನು ಘೋಷಿಸಿಕೊಂಡಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಎಲ್ಲರೂ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕೆ.ಹೆಚ್.ಮುನಿಯಪ್ಪ ಸೇರಿದಂತೆ ಎಲ್ಲರೂ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು. ಇನ್ನು ಕ್ಷೇತ್ರದ ಜನರು ನಮಗೆ ಮುಖ್ಯ. ಆಮೇಲೆ ನಾಯಕರುಗಳು. ಜನರ ಆಶೀರ್ವಾದ ಇದ್ದರೆ ಮಾತ್ರ ರಾಜಕೀಯದಲ್ಲಿ ಉಳಿಯಲು ಸಾಧ್ಯ. ಕೆಲವು ದಿನಗಳ ಹಿಂದೆ ಕೋಲಾರಕ್ಕೆ ಬಂದಿದ್ದೆ. ಎಲ್ಲ ಕಡೆ ಕೋಲಾರ ಕ್ಷೇತ್ರದಿಂದ ನಿಲ್ಲಬೇಕೆಂದು ಜನರು ಒತ್ತಾಯಿಸಿದರು. ಹಾಗಾಗಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಅವರು ಹೇಳಿದ್ದಾರೆ.