ಕರ್ನಾಟಕ

karnataka

ಹಾವೇರಿಯ ಪ್ರಸಿದ್ದ ಏಲಕ್ಕಿ ಹಾರ: ಜಾಗತಿಕ ನಾಯಕರ ಕೊರಳೇರಿದ ಹೆಗ್ಗಳಿಕೆ!

By

Published : Jan 18, 2023, 10:59 AM IST

Updated : Jan 18, 2023, 12:39 PM IST

cardamom garland

ಹಾವೇರಿಯ ಸಾಂಪ್ರದಾಯಿಕ ಏಲಕ್ಕಿ ಹಾರಗಳು ಜನಪ್ರಿಯತೆ ಪಡೆದಿವೆ. ಇಲ್ಲಿನ ಕುಟುಂಬವೊಂದು ದಶಕಗಳಿಂದ ಈ ಹಾರಗಳನ್ನು ತಯಾರಿಸುತ್ತಿದೆ.

ಹಾವೇರಿಯ ಏಲಕ್ಕಿ ಹಾರದ ವಿಶೇಷತೆ ಗೊತ್ತೇ?

ಹಾವೇರಿ: ಏಲಕ್ಕಿ ಕಂಪಿನ ನಗರ ಎಂದೇ ಹಾವೇರಿ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಸಾಂಪ್ರದಾಯಿಕ ಏಲಕ್ಕಿ ಮಾಲೆಗಳು ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅನೇಕ ಭಾರತೀಯ ಮತ್ತು ವಿದೇಶಿ ಗಣ್ಯರ ಕೊರಳೇರಿವೆ. ಅಮೆರಿಕ ಅಧ್ಯಕ್ಷ ಹಾಗೂ ಬ್ರಿಟನ್ ಪ್ರಧಾನಿ ಸುನಕ್ ಕೊರಳು ಅಲಂಕರಿಸಿರುವ ಖ್ಯಾತಿ ಕೂಡ ಹಾವೇರಿ ಏಲಕ್ಕಿ ಮಾಲೆಗಿದೆ.

ಏಲಕ್ಕಿ ಕಂಪಿನ ನಗರಿ ಖ್ಯಾತಿ: ಈ ಹಿಂದೆ ಇಲ್ಲಿಯ ವ್ಯಾಪಾರಿಗಳು ಕಾಸರಗೋಡು ಹಾಗೂ ಕೇರಳದಿಂದ ಏಲಕ್ಕಿ ಮೊಗ್ಗುಗಳನ್ನು ತರಿಸಿಕೊಂಡು ಅದನ್ನು ಹುಬ್ಬಿ ಹಾಕಿ ಸಂಸ್ಕರಣೆ ಮಾಡುತ್ತಿದ್ದರು. ಈ ರೀತಿ ಸಂಸ್ಕರಿಸಿದ ಏಲಕ್ಕಿಗಳನ್ನು ನಗರದ ರಸ್ತೆಗಳಲ್ಲಿ ಒಣಗಲು ಹಾಕುತ್ತಿದ್ದರು. ರಸ್ತೆ ಇಕ್ಕೆಲಗಳಲ್ಲಿ ಒಣಗಲು ಹಾಕುತ್ತಿದ್ದ ಏಲಕ್ಕಿಗಳಿಂದ ದಾರಿಹೋಕರಿಗೆ ಏಲಕ್ಕಿಯ ಕಂಪು ಗಮ್ಮೆನ್ನುತ್ತಿತ್ತು. ಈ ಕಾರಣದಿಂದ ಹಾವೇರಿಗೆ 'ಏಲಕ್ಕಿ ಕಂಪಿನ ನಗರ' ಎಂಬ ಹೆಸರು ಬಂದಿದೆ ಎಂಬುವುದು ಪ್ರತೀತಿ.

ಕಸುಬು ಮಾಡಿಕೊಂಡ ಕುಟುಂಬಗಳು:ಈ ರೀತಿ ಒಣಹಾಕಲಾಗುತ್ತಿದ್ದ ಏಲಕ್ಕಿಗಳನ್ನು ತೆಗೆದುಕೊಂಡ ಕೆಲ ಕುಟುಂಬಗಳು ಏಲಕ್ಕಿ ಮಾಲೆ ತಯಾರಿಸಲು ಆರಂಭಿಸಿದ್ದರು. ಮೊದ ಮೊದಲು ಸ್ಥಳೀಯರಿಗೆ ಇಷ್ಟವಾಗಿದ್ದರಿಂದ ಏಲಕ್ಕಿ ಮಾಲೆ ತಯಾರಿಸುವುದನ್ನ ಕೆಲ ಕುಟುಂಬಗಳು ಕಸುಬು ಮಾಡಿಕೊಂಡವು. ಆರಂಭದಲ್ಲಿ ಏಲಕ್ಕಿಗಳಿಂದ ತಯಾರಾಗುತ್ತಿದ್ದ ಮಾಲೆಗಳಿಗೆ ಅದರಲ್ಲಿ ವಿವಿಧ ಡಿಸೈನ್‌ಗಳು, ಗೊಂಡೆಗಳು, ಎಸಳುಗಳು ಹಾಗೂ ಮಿಂಚುಗಳನ್ನು ಸೇರಿಸಿ ಇನ್ನಷ್ಟು ಸುಂದರಗೊಳಿಸಿದರು. ದೂರದ ಕೇರಳ, ಕಾಸರಗೊಡು ಸೇರಿದಂತೆ ವಿವಿಧಡೆಯಿಂದ ಏಲಕ್ಕಿ ತಂದು ಅದರಲ್ಲಿ ಅತ್ಯುತ್ತಮ ಗುಣಮಟ್ಟದ ಏಲಕ್ಕಿ ಆಯ್ದು ಮಾಲೆ ತಯಾರಿಸಲು ಆರಂಭಿಸಿದರು.

ದೇಶ-ವಿದೇಶಗಳಿಗೆ ಹರಡಿದ ಏಲಕ್ಕಿ ಕಂಪು:ಆರಂಭದಲ್ಲಿ ಅಷ್ಟೇನೂ ದುಬಾರಿಯಲ್ಲದ ಏಲಕ್ಕಿ ಮಾಲೆಗಳನ್ನು ಸ್ಥಳೀಯರು ಅತಿಥಿಗಳಿಗೆ ಹಾಕಿ ಸನ್ಮಾನಿಸುತ್ತಿದ್ದರು. ಬಳಿಕ ಹಾವೇರಿ ಏಲಕ್ಕಿ ಮಾಲೆಯ ಕಂಪು ದೇಶ-ವಿದೇಶಗಳಿಗೆ ಹರಡಿತು. ಹಾವೇರಿಗೆ ಯಾರಾದರೂ ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿದರೆ ಅವರಿಗೆ ಏಲಕ್ಕಿ ಮಾಲೆ ಹಾಕುವ ಸಂಪ್ರದಾಯ ಬೆಳೆದು ಬಂತು. ಈ ರೀತಿಯ ಮಾಲೆಗಳನ್ನು ತಯಾರಿಸುವ ಕೆಲ ಕುಟುಂಬಗಳ ನಡುವೆ ಪಟವೇಗಾರ ಕುಟುಂಬ ಅತಿಹೆಚ್ಚು ಮಾಲೆಗಳನ್ನು ತಯಾರಿಸುವದಲ್ಲದೇ, ವೈವಿಧ್ಯಮಯ ಮಾಲೆಗಳನ್ನು ತಯಾರಿಸುತ್ತಾ ಬಂದಿವೆ. ಇದಕ್ಕಾಗಿ ಈ ಕುಟುಂಬಕ್ಕೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಅಲ್ಲಿಂದ ಏಲಕ್ಕಿ ಮಾಲೆ ನಡೆದಿದ್ದೇ ದಾರಿ ಆಯ್ತು. ಆರಂಭದಲ್ಲಿ ಒಂದೆಳೆ, ಒಂದು ಅಡಿಯಲ್ಲಿ ತಯಾರಾಗುತ್ತಿದ್ದ ಏಲಕ್ಕಿ ಮಾಲೆಗಳು ಈಗ 11, 25 ಎಳೆಯಿಂದ ಹಿಡಿದು 10 ಅಡಿಯವರೆಗೆ ತಯಾರಲಾಗಲಾರಂಭಿಸಿವೆ. ಗ್ರಾಹಕ ಎಷ್ಟು ಅಡಿ ಹೇಳುತ್ತಾನೋ ಅಷ್ಟು ಅಡಿ ಎತ್ತರ ಮತ್ತು ಎಳೆಯ ಮಾಲೆಗಳನ್ನು ತಯಾರಿಸಲಾಗುತ್ತಿದೆ. ಸುಮಾರು 150 ರೂ.ಯಿಂದ ಹಿಡಿದು 30 ಸಾವಿರ ರೂ.ವರೆಗೆ ಮಾಲೆಗಳು ತಯಾರಾಗುತ್ತಿವೆ. ಅದರಲ್ಲೂ ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನ ನಡೆದ ನಂತರ ಏಲಕ್ಕಿ ಮಾಲೆಯ ಕಂಪು ಇನ್ನಷ್ಟು ಹರಡಿದೆ.

ಇದನ್ನೂ ಓದಿ:86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಹಾವೇರಿಯಲ್ಲಿ ಗಣ್ಯರ ಕೊರಳೇರಲು, ಕಂಪು ಸೂಸಲು ಏಲಕ್ಕಿ ಮಾಲೆಗಳು ಸಿದ್ಧ

ಏಲಕ್ಕಿ ಪೇಟ

ಏಲಕ್ಕಿ ಪೇಟ ಸಹ ಪ್ರಸಿದ್ಧಿ:ಇಲ್ಲಿಯ ಏಲಕ್ಕಿ ಮಾಲೆಯ ಬಗ್ಗೆ ತಿಳಿದುಕೊಂಡ ರಾಜ್ಯದ ವಿವಿಧೆಡೆಯಿಂದ ಬಂದ ಜನ ಇದೀಗ ಇಲ್ಲಿಯ ಏಲಕ್ಕಿ ಮಾಲೆ ತಯಾರಕರಿಗೆ ಕರೆ ಮಾಡುತ್ತಿದ್ದಾರೆ. ಏಲಕ್ಕಿ ಮಾಲೆಯ ಬಗ್ಗೆ ತಿಳಿದುಕೊಂಡು ಬೇಡಿಕೆ ನೀಡುತ್ತಿದ್ದಾರೆ. ಇದರಿಂದ ಇಲ್ಲಿಯ ವರ್ತಕರಿಗೆ ಈಗ ಕೆಲಸ ಹೆಚ್ಚು ಸಿಗಲಾರಂಭಿಸಿದೆ. ಸಮ್ಮೇಳನ ಮುಗಿದ ಮೇಲೆ ಅಧಿಕ ಆರ್ಡರ್ ಸಿಗುತ್ತಿದೆ. ಇದೀಗ ಏಲಕ್ಕಿ ಮಾಲೆಯ ಜೊತೆ ಏಲಕ್ಕಿ ಪೇಟ ಸಹ ಪ್ರಸಿದ್ಧಿ ಪಡೆಯಲಾರಂಭಿಸಿದೆ ಎನ್ನುತ್ತಾರೆ ಇಲ್ಲಿನ ವರ್ತಕರು.

ಪ್ರಧಾನಿ ಕೊರಳು ಅಲಂಕರಿಸಿದ ಹೆಗ್ಗಳಿಕೆ: ಸುಮಾರು 20 ವರ್ಷಗಳ ಹಿಂದೆ ವರನಟ ಡಾ.ರಾಜ್​​ ಕುಮಾರ್​ ಅವರಿಗಾಗಿ ಏಲಕ್ಕಿಯಲ್ಲಿ ಪೇಟ ತಯಾರಿಸಲಾಗಿತ್ತು. ಆದರೆ ಹೇಳಿಕೊಳ್ಳುವಂತಹ ಜನಪ್ರಿಯತೆ ಆ ಕಾಲದಲ್ಲಿ ಸಿಗದ ಕಾರಣ ಏಲಕ್ಕಿ ಪೇಟ ತಯಾರಿಕೆ ಅಷ್ಟಕ್ಕೇ ನಿಂತಿತ್ತು. ಆದರೆ ಜ.12 ರಂದು ಹುಬ್ಬಳ್ಳಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಏಲಕ್ಕಿ ಮಾಲೆ ಮತ್ತು ಪೇಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲಂಕರಿಸಿತ್ತು. ಮೋದಿಗೆ ಹಾಕಲಾಗಿದ್ದ ಏಲಕ್ಕಿ ಪೇಟ ಇದೀಗ ಪ್ರಸಿದ್ಧಿ ಪಡೆಯಲಾರಂಭಿಸಿದೆ. ಜನರ ಪಟವೇಗಾರರ ಅಂಗಡಿಗೆ ಬಂದು ಅಧಿಕ ದರವಿದ್ದರೂ ಸಹ ಏಲಕ್ಕಿ ಪೇಟ ಖರೀದಿ ಮಾಡುತ್ತಿದ್ದಾರೆ. ಹಾವೇರಿ ಸಾಹಿತ್ಯ ಸಮ್ಮೇಳನ ಏಲಕ್ಕಿ ಮಾಲೆಯ ಕಂಪು ಹರಡಿದರೆ, ಯುವಜನೋತ್ಸವ ಪೇಟಕ್ಕೆ ಪ್ರಸಿದ್ಧಿ ತಂದುಕೊಡುತ್ತಿದೆ.

ಇದನ್ನೂ ಓದಿ:ದೇಶ ವಿದೇಶಗಳಲ್ಲಿ ಕಂಪು ಚೆಲ್ಲಿದ ಹಾವೇರಿಯ ಏಲಕ್ಕಿ ಮಾಲೆ.. ಕನ್ನಡ ಸಾಹಿತ್ಯ ಜಾತ್ರೆಗೆ ದಿನಗಣನೆ

Last Updated :Jan 18, 2023, 12:39 PM IST

ABOUT THE AUTHOR

...view details