ಹಾವೇರಿ :ಪ್ರಸ್ತುತ ದಿನಮಾನಗಳಲ್ಲಿ ಮಹಿಳೆ ಪುರುಷನಿಗೆ ಸಮನಾಗಿ ಆರ್ಥಿಕತೆಯ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಸಾಮರ್ಥ್ಯ ತೋರುತ್ತಲೇ ಬಂದಿದ್ದಾಳೆ. ಪುರುಷರಿಗೆ ಮೀಸಲಾಗಿರುವ ಸಕಲ ರಂಗಗಳಲ್ಲಿಯೂ ಮಹಿಳೆಯರು ಸೈ ಎನಿಸಿಕೊಂಡಿದ್ದಾರೆ. ಆದರೆ ಈ ಹಿಂದೆಲ್ಲ ಇಂಥ ಸ್ವಾತಂತ್ರ್ಯ ಹೆಣ್ಣು ಮಕ್ಕಳಿಗೆ ಇರಲಿಲ್ಲ. ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ತನ್ನ ಜೀವನವನ್ನೇ ಆಕೆ ಕಳೆಯುತ್ತಿದ್ದಳು. ಒಮ್ಮೆ ಮನೆ ಬಿಟ್ಟು ಹೊರನಡೆಯಬೇಕಾದರೆ ಅದಕ್ಕೆ ಹಲವು ಕಟ್ಟುಪಾಡುಗಳಿದ್ದವು. ಆದರೀಗ ಸ್ತ್ರೀಯರೊಂದಿಗೆ ಇಡೀ ಸಮಾಜವೇ ಬದಲಾಗಿದೆ. ಮಹಿಳೆಯರನ್ನು ಮನೆಯಿಂದ ಹೊರಕಳುಹಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪುರುಷರಷ್ಟೇ ಮಹಿಳೆಗೆ ಸಮಾನ ಅವಕಾಶ ನೀಡಿದ ಧಾರ್ಮಿಕ ಕ್ಷೇತ್ರವೊಂದು ಹಾವೇರಿ ಜಿಲ್ಲೆಯಲ್ಲಿದೆ.
ಇದು ಸವಣೂರು ತಾಲೂಕಿನ ಮಂತ್ರೋಡಿ ಕ್ಷೇತ್ರ. ಇಲ್ಲಿ ಶತಶತಮಾನಗಳ ಹಿಂದೆಯೇ ಪುರುಷರಿಗೆ ನೀಡಿದಷ್ಟೇ ಪ್ರಾಧಾನ್ಯತೆಯನ್ನು ಅಂದಿನ ರೇವಣ ಸಿದ್ದೇಶ್ವರ ಶ್ರೀಗಳು ನೀಡಿದ್ದಾರೆ. ಮಠದಲ್ಲಿ ಪ್ರತಿವರ್ಷಅಮಾವಾಸ್ಯೆಯಂದು ಶಿವನ ರಥೋತ್ಸವ ನಡೆದರೆ ಮರುದಿನ ಪಾರ್ವತಿಯ ರಥೋತ್ಸವ ನಡೆಯುತ್ತೆ. ಮೊದಲ ದಿನ ನಡೆಯುವ ರೇವಣ ಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವದಲ್ಲಿ ಪುರುಷರು ರಥ ಎಳೆದು ಸಂಭ್ರಮಿಸುತ್ತಾರೆ. ಮರುದಿನ ನಡೆಯುವ ಪಾರ್ವತಿ ದೇವಿ ರಥೋತ್ಸವದಲ್ಲಿ ಮಹಿಳೆಯರು ಮಾತ್ರ ರಥ ಎಳೆಯುತ್ತಾರೆ.
ಕೆಂಜಡೇಶ್ವರ ಮಠದಿಂದ ಪಾದಗಟ್ಟೆಯವರಿಗೆ ಮತ್ತು ಪಾದಗಟ್ಟಿಯಿಂದ ಮಠದವರೆಗೆ ಸುಮಾರು 800 ಮೀಟರ್ ದೂರದಷ್ಟು ಮಹಿಳೆಯರೇ ರಥ ಎಳೆದು ಸಂಭ್ರಮಿಸುತ್ತಾರೆ. ಪಾದಗಟ್ಟಿಯಿಂದ ಮಠಕ್ಕೆ ಹೋಗುವ ದಾರಿ ಬೆಟ್ಟದ ಮೇಲಿದ್ದರೂ ಸಹ ಮಹಿಳೆಯರು ರಥ ಎಳೆದು ಖುಷಿಪಡುತ್ತಾರೆ. ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈ ರೀತಿ ಮಹಿಳೆಯರು ಮಾತ್ರ ರಥ ಎಳೆಯುವ ಸಂಪ್ರದಾಯ ಪುರಾತನ ಕಾಲದಿಂದಲೂ ಇರುವುದು ಸವಣೂರು ತಾಲೂಕಿನ ಮಂತ್ರೋಡಿ ಗ್ರಾಮದಲ್ಲಿ ಮಾತ್ರವಂತೆ. ಶನಿವಾರ ಇಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ. ರವಿವಾರ ಮಹಿಳಾ ರಥೋತ್ಸವ ನಡೆದಿದೆ.