ಕರ್ನಾಟಕ

karnataka

ಹಾಸನ: ಎರಡು ಪ್ರತ್ಯೇಕ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಂಧನ

By ETV Bharat Karnataka Team

Published : Dec 10, 2023, 3:58 PM IST

ಹಾಸನ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಮಹಿಳೆಯರ ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದರು.

three-arrested-in-two-separate-murders-case-in-hasana-says-sp-mohammed-sujeeta
ಹಾಸನ: ಎರಡು ಪ್ರತ್ಯೇಕ ಕೊಲೆ ಪ್ರಕರಣ.. ಮೂವರು ಬಂಧನ

ಹಾಸನ: ವೃದ್ಧೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ (42) ಬಂಧಿತ ಆರೋಪಿ. ಅರಕಲಗೂಡು ತಾಲೂಕಿನ ಕಾರೇಹಳ್ಳಿ ಗ್ರಾಮದವನಾದ ರವಿಕುಮಾರ್, ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣವನ್ನು ದೋಚಿ ಪಾರಾರಿಯಾಗಿದ್ದ.

ಬಂಧಿತ ಆರೋಪಿ ರವಿಕುಮಾರ್

ಪ್ರಕರಣದ ವಿವರ: ಕಳೆದ 10 ದಿನಗಳ ಹಿಂದೆ ಆರೋಪಿ ರವಿಕುಮಾರ್, ಅರಕಲಗೂಡು ತಾಲೂಕಿನ ಶೆಟ್ಟರಕೊಪ್ಪಲು ಗ್ರಾಮದ ಸರೋಜಮ್ಮನ ಮನೆಗೆ ತೆರಳಿ ಹಸು ವ್ಯಾಪಾರಕ್ಕೆ ಬಂದಿರುವುದಾಗಿ ತಿಳಿಸಿದ್ದ. ಜಾನುವಾರು ಮಾಲೀಕರಾದ ಸರೋಜಮ್ಮ ಮತ್ತು ಅವರ ಸೊಸೆ ರಾಣಿ ಹಸು ಮಾರಾಟ ಮಾಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದರು. ಬಳಿಕ ನ.19ರಂದು ಮತ್ತೆ ಅದೇ ಗ್ರಾಮಕ್ಕೆ ಬಂದು ಮನೆಯಲ್ಲಿ ಯಾರೂ ಇಲ್ಲದ ವಿಚಾರವನ್ನು ತಿಳಿದುಕೊಂಡು ಸರೋಜಮ್ಮನ ಬಳಿ ಹಸುವನ್ನು ಮಾರಾಟ ಮಾಡುವ ವಿಚಾರದಲ್ಲಿ ಸುಖಾಸುಮ್ಮನೆ ಕ್ಯಾತೆ ತೆಗೆದಿದ್ದ.

ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿ ದೊಣ್ಣೆಯಿಂದ ವೃದ್ಧೆಯ ತಲೆಗೆ ಹೊಡೆದಿದ್ದ. ಬಳಿಕ ವೃದ್ಧೆ ಸಾವನ್ನಪ್ಪಿದ ವಿಚಾರ ತಿಳಿದು ಆಕೆಯ ಮೈಮೇಲೆ ಇದ್ದ ಒಂದು ಜೊತೆ ಓಲೆ, 2 ಕಿವಿಯ ಮಾಟಿ, 2 ಕಾಸಿನ ಕರಿಮಣಿಯ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಮೃತಳ ಮಗ ನಾರಾಯಣ್ ಕೊಟ್ಟ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪ್ರಕರಣ ಸಂಬಂಧ ಅರಕಲಗೂಡು ವೃತ್ತ ಸಿಪಿಐ ಎಸ್.ಎಂ.ರಘುಪತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಯನ್ನು ಶನಿವಾರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 65 ಸಾವಿರ ಮೌಲ್ಯದ 10ಗ್ರಾಂ ತೂಕದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ, "ಅರಕಲಗೂಡು ಪೊಲೀಸ್​ ಠಾಣೆಯಲ್ಲಿ ಸರೋಜಮ್ಮ ಎಂಬುವವರ ಕೊಲೆ ಸಂಬಂಧ ಅವರ ಮಗ ನೀಡಿದ ದೂರು ದಾಖಸಿಕೊಂಡಿದ್ದೆವು. ತನಿಖೆ ನಡೆಸಿದಾಗ ರವಿಕುಮಾರ್​ ಎಂಬ ವ್ಯಕ್ತಿ ಚಿನ್ನಕ್ಕಾಗಿ ವೃದ್ಧೆಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಿದ್ದೇವೆ" ಎಂದು ತಿಳಿಸಿದರು.

ಚಿನ್ನಕ್ಕಾಗಿ ವೃದ್ಧೆ ಹತ್ಯೆ, ಇಬ್ಬರ ಬಂಧನ: ಮತ್ತೊಂದೆಡೆ, ಮೇಕೆಯನ್ನು ಮೇಯಿಸಲು ಹೋಗಿದ್ದ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಆಕೆಯ ಮೈ ಮೇಲಿದ್ದ ಚಿನ್ನಾಭರಣವನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಅಡಗೂರು ಗ್ರಾಮದ ಕಾರ್ತಿಕ್ (20) ಮತ್ತು ಅದೇ ಗ್ರಾಮದ ಸಾಗರ್ (20) ಬಂಧಿತ ಆರೋಪಿಗಳು.

ಘಟನೆ ವಿವರ:ಸುಶೀಲಮ್ಮ(65) ಎಂಬುವರು ಮೇಕೆ ಮೇಯಿಸಲು ಹೋಗಿದ್ದಾಗ ಅವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ಶೆಟ್ಟಿಹಳ್ಳಿಯ ಸಮೀಪದ ನಾಯಿಗುಂಡಿ ಹಳ್ಳದ ಬಳಿ ಶವವನ್ನು ಎಸೆದು ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಆಕೆಯ ಪುತ್ರ ಬಸವರಾಜಚಾರಿ ನೀಡಿದ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ಘಟನೆ ಸಂಬಂಧ ಚನ್ನರಾಯಪಟ್ಟಣ ತಾಲೂಕು ಕಸಬಾ ಹೋಬಳಿ ಅಡಗೂರು ಗ್ರಾಮದ ಇಬ್ಬರು ಆರೋಪಿಗಳನ್ನು ಬಂಧಿಸಿ, ವೃದ್ಧೆಯಿಂದ ದೋಚಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ, "ಚನ್ನರಾಯಪಟ್ಟಣ ಪೊಲೀಸ್​ ಠಾಣೆಯಲ್ಲಿ ಸುಶೀಲಮ್ಮ ಎಂಬುವವರ ಕೊಲೆ ಸಂಬಂಧ ಅವರ ಮಗ ನೀಡಿದ ದೂರಿನ ಮೇರೆಗೆ ದೂರು ದಾಖಲಿಸಿಕೊಂಡಿದ್ದೆವು. ತನಿಖೆ ನಡೆಸಿದಾಗ ಅಡಗೂರು ಗ್ರಾಮದ ಕಾರ್ತಿಕ್ ಮತ್ತು ಸಾಗರ್ ಎಂಬುವವರು ಚಿನ್ನಕ್ಕಾಗಿ ವೃದ್ಧೆಯನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಿ 53 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ" ಎಂದರು.

ಇದನ್ನೂ ಓದಿ:ವಿಜಯಪುರ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಹತ್ಯೆ

ABOUT THE AUTHOR

...view details