ಹಾಸನ:ಭವಾನಿ ರೇವಣ್ಣಗೆ ಕೊಡಿ ಅಂತ ನಾನು ಹೇಳುತ್ತಿಲ್ಲ. ಜೆಡಿಎಸ್ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ನಮ್ಮ ಕುಟುಂಬದವರಲ್ಲೇ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಿದರೆ ಪಕ್ಷವನ್ನು ಸುಲಭವಾಗಿ ಅಧಿಕಾರಕ್ಕೆ ತರಬಹುದು ಎಂಬುದು ನನ್ನ ಭಾವನೆ. ಈ ಬಗ್ಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಪರೋಕ್ಷವಾಗಿ ತಾಯಿ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.
ಹಾಸನದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಹಾಸನ ಜಿಲ್ಲೆಯು ಜೆಡಿಎಸ್ ಭದ್ರಕೋಟೆಯಾಗಿದೆ. ಆದರೆ, ಕಳೆದ ಬಾರಿ ನಮ್ಮ ಅಸ್ತಿತ್ವ ಕಳೆದುಕೊಂಡಿದ್ದೇವೆ. ಈ ಬಾರಿಯಾದರೂ ನಾವು ಅದನ್ನು ವಾಪಸ್ ಪಡೆಯಬೇಕು. ಕ್ಷೇತ್ರದಲ್ಲಿ ಟಿಕೆಟ್ ಗೊಂದಲಗಳಿ ಇರುವುದು ಸಹಜ. ಆದರೆ, ಟಿಕೆಟ್ಗಾಗಿ ಜನರು ನಡೆಸುತ್ತಿರುವುದು ಪ್ರತಿಭಟನೆ ಅಲ್ಲ, ಇದೊಂದು ಒತ್ತಾಯ ಮಾತ್ರ ಎಂದು ಸೂರಜ್ ಸ್ಪಷ್ಟಪಡಿಸಿದರು.
ಇದು ಪ್ರತಿಭಟನೆ ಇಲ್ಲ, ಪಕ್ಷದ ಕಾರ್ಯಕರ್ತರ ನೋವಾಗಿದೆ. ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ತಮ್ಮ ನೋವನ್ನು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಒಬ್ಬ ಜವಾಬ್ದಾರಿ ನಾಯಕ ಬೇಕಾಗಿದ್ದಾರೆ. ಹಾಗಾಗಿ ನಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರು ಗೆದ್ದರೆ ಒಳಿತು ಎನ್ನುವುದು ಅವರ ಮಾತಾಗಿದೆ. ಹೀಗಾಗಿಯೇ ಅವರು ಒತ್ತಾಯ ಮಾಡುತ್ತಿದ್ದಾರೆ ಎಂದರು.
ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ ಸಂಸದರು:ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಅಂತ ಸಂಸದರ ನಿವಾಸದ ಮುಂದೆ ಕಾರ್ಯಕರ್ತರು ಶಾಮಿಯಾನ ಹಾಕಿ ಭವಾನಿ ರೇವಣ್ಣರ ಭಾವಚಿತ್ರವನ್ನು ಹಿಡಿದು, ಪ್ರತಿಭಟನೆಗೆ ಮುಂದಾಗಿದ್ದರು, ಇದೇ ಸಂದರ್ಭದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ತನಗೇನು ಗೊತ್ತೇ ಇಲ್ಲ ಎಂಬಂತೆ ಏನಿದು ಎಲ್ಲ ಯಾಕೆ ಬಂದು ಇಲ್ಲಿ ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದೀರಾ ಅಂತೆಲ್ಲಾ ವಿಚಾರಿಸಿ, ಕೊನೆಗೆ ನಿಮ್ಮ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಬಂದಿದ್ದವರಿಗೆ ಸಮಾಧಾನ ಹೇಳಿದರು.