ಕರ್ನಾಟಕ

karnataka

ಗದಗಕ್ಕೆ ವೋಲ್ವೊ ಬಸ್‌ ನೀಡುವಂತೆ ಸುನಿಲ್ ಜೋಶಿ ಮನವಿ: ಸಾರಿಗೆ ಸಚಿವ ಶ್ರೀರಾಮುಲು ಸ್ಪಂದನೆ

By

Published : Jan 6, 2023, 10:43 PM IST

Sunil Joshi and Sriramulu

ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಅವರು ಮಾಡಿದ್ದ ಟ್ವೀಟ್‌ಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಿಂದ ಗದಗಕ್ಕೆ ವೋಲ್ವೊ ಬಸ್‌ನ ಅಗತ್ಯವಿದೆ. ಇದಕ್ಕಾಗಿ ನಾವು 25 ವರ್ಷಗಳಿಂದ ಕಾಯುತ್ತಿದ್ದೇವೆ. ಗದಗಕ್ಕೆ ಐರಾವತ ಬಸ್‌ ಸೇವೆ ನೀಡಲು ಇದು ಸಕಾಲ ಎಂದು ಸುನೀಲ್‌ ಜೋಶಿ ಅವರು ಬುಧವಾರ ಟ್ವೀಟ್‌ ಮಾಡಿದ್ದರು. ಇದಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗದಗ: ನಗರಕ್ಕೆ ವೋಲ್ವೊ ಬಸ್‌ ನೀಡುವಂತೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರು ಇತ್ತೀಚೆಗೆ ಮಾಡಿದ್ದ ಮನವಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಂದಿಸಿದ್ದಾರೆ. ಜನವರಿ 9ರಿಂದಲೇ ಬೆಂಗಳೂರಿನಿಂದ ವೋಲ್ವೊ ಬಸ್ ಸೇವೆ ಆರಂಭಿಸುವುದಾಗಿ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.

ಗುರುವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಬೆಂಗಳೂರು ನಗರದಿಂದ ಗದಗಕ್ಕೆ ವೋಲ್ವೊ ಬಸ್ ಸೇವೆ ಆರಂಭ ಮಾಡುವುದಾಗಿ ಹೇಳಿದ್ದಾರೆ. 'ನಾವು ಜನರ ಸೇವೆಗಾಗಿಯೇ ಇದ್ದೇವೆ. ಜನವರಿ 9ರ ಸೋಮವಾರದಿಂದಲೇ ಕೆಎಸ್‌ಆರ್‌ಟಿಸಿ ಗದಗಕ್ಕೆ ವೋಲ್ವೊ ಬಸ್ ಸೇವೆ ಆರಂಭಿಸಲಿದೆ. ಗದಗ ಪುಟ್ಟರಾಜ ಗವಾಯಿಗಳ ಪುಣ್ಯಭೂಮಿ. ನನ್ನ ಹೃದಯಕ್ಕೆ ಹತ್ತಿರವಾದ ಜನರಿಗಾಗಿ ಬಸ್ ಸೇವೆ ಆರಂಭಿಸಲಾಗುತ್ತದೆ ಎಂದು ಟ್ವೀಟ್‌ನಲ್ಲಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ.

ಬಿ. ಶ್ರೀರಾಮುಲು ಹಿಂದೆ ಗದಗ ಜಿಲ್ಲಾ ಉಸ್ತುವಾರಿಯಾಗಿದ್ದರು. ಜಿಲ್ಲೆಯ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇದೆ. ಕೆಲವು ದಿನಗಳ ಹಿಂದೆ ಗದಗದಲ್ಲಿ ವಾಯುವಿಹಾರ ಮಾಡುವಾಗ ಅಭಿಮಾನಿ ಕೋರಿಕೆಯಂತೆ ಆಟೋ ಓಡಿಸಿ ಗಮನ ಸೆಳೆದಿದ್ದರು. ಜತೆಗೆ ಜಿಲ್ಲಾ ಉಸ್ತುವಾರಿಯಾಗಿದ್ದಾಗ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡವರು. ಗದಗ ಜಿಲ್ಲೆಗೂ ನನಗೂ ಬಿಡಿಸಲಾಗದ ಅವಿನಾಭಾವ ಸಂಬಂಧವಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ಇಲ್ಲಿನ ಜನತೆ ತೋರಿದ ಅಭಿಮಾನಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದರು.

ಇನ್ನು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಮೂಲತಃ ಗದಗದವರು. ನಗರದ ಗದುಗಿನ ವಿಡಿಎಸ್​ಟಿಸಿ ಹೈಸ್ಕೂಲ್‌ನಲ್ಲಿ ಓದಿದ ಅವರು, ಎಎಸ್​ಎಸ್​​ ವಾಣಿಜ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದವರು. ಕ್ರಿಕೆಟ್‌ ರಂಗದ ಹಲವು ಹಂತಗಳನ್ನು ದಾಟಿ ಬಿಸಿಸಿಐನ ಆಯ್ಕೆ ಸಮಿತಿಯ ಮುಖ್ಯಸ್ಥರು ಆಗಿದ್ದ ಜೋಶಿ ಅವರ ಕ್ರಿಕೆಟ್‌ ಅಭ್ಯಾಸ ಆರಂಭವಾಗಿದ್ದು ಗದುಗಿನಲ್ಲೇ ಎಂಬುದು ವಿಶೇಷ. ಕೆಲವು ದಿನಗಳ ಕಾಲ ಅಭ್ಯಾಸಕ್ಕಾಗಿ ಪ್ರತಿದಿನ ಬೆಳಗ್ಗೆ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು ಅನ್ನೋದು ಕೂಡ ವಿಶೇಷ.

ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿಗಳ ಖಾತೆ, ಬಸವರಾಜ ಬೊಮ್ಮಾಯಿ ವೈಯಕ್ತಿಕ ಖಾತೆಯನ್ನು ಟ್ಯಾಗ್ ಮಾಡಿ ಸುನಿಲ್ ಜೋಶಿ ಟ್ವೀಟ್ ಮಾಡಿದ್ದರು. 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನ್ನದೊಂದು ವಿನಮ್ರ ಮನವಿ. ಬೆಂಗಳೂರಿನಿಂದ ಗದಗಕ್ಕೆ ವೋಲ್ವೊ ಬಸ್‌ನ ಅಗತ್ಯವಿದೆ. ಇದಕ್ಕಾಗಿ ನಾವು 25 ವರ್ಷಗಳಿಂದ ಕಾಯುತ್ತಿದ್ದೇವೆ. ಗದಗಕ್ಕೆ ಐರಾವತ ಬಸ್‌ ಸೇವೆ ನೀಡಲು ಇದು ಸಕಾಲ’ ಎಂದು ಸುನೀಲ್‌ ಜೋಶಿ ಅವರು ಬುಧವಾರ ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ ಇ ಕ್ರಾಂತಿಗೆ ಮುನ್ನುಡಿ ಬರೆದ ಕೆಎಸ್ಆರ್‌ಟಿಸಿ.. ಶೂನ್ಯ ಮಾಲಿನ್ಯದತ್ತ ಸಾರಿಗೆ ಸಂಸ್ಥೆ ಚಿತ್ತ

ಟೀಮ್ ಇಂಡಿಯಾ ಚೀಫ್‌ ಸೆಲೆಕ್ಟರ್‌ ಸುನಿಲ್‌ ಜೋಶಿ:ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಎಡಗೈ ಸ್ಪಿನ್ನರ್‌ ಸುನಿಲ್‌ ಜೋಶಿ, 1995-96ರ ರಣಜಿ ಟ್ರೋಫಿಯಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸುವುದರ ಜೊತೆಗೆ 50ಕ್ಕೂ ಹೆಚ್ಚು ವಿಕೆಟ್‌ ಪಡೆಯುವ ಮೂಲಕ ಅಪರೂಪದ ಸಾಧನೆಯೊಂದಿಗೆ ಬೆಳಕಿಗೆ ಬಂದಿದ್ದರು. ಬಳಿಕ 1996ರಲ್ಲಿ ಭಾರತ ಟೆಸ್ಟ್‌ ಮತ್ತು ಏಕದಿನ ತಂಡಗಳಿಗೆ ಪದಾರ್ಪಣೆ ಮಾಡಿದರು. ಆ ಕಾಲಕ್ಕೆ ತಂಡದ ಖಾಯಂ ಸದಸ್ಯನಾಗಿದ್ದರೂ ಕೂಡ ಅವರನ್ನು 1999ರ ಏಕದಿನ ವಿಶ್ವಕಪ್‌ ಟೂರ್ನಿಗೆ ಆಯ್ಕೆ ಮಾಡಲಾಗಿರಲಿಲ್ಲ.

ಆಡಿರುವ 15 ಟೆಸ್ಟ್‌ ಪಂದ್ಯಗಳಿಂದ ಜೋಶಿ ಒಟ್ಟು 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ 69 ಪಂದ್ಯಗಳಿಂದ ಅಷ್ಟೇ ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಅದರಲ್ಲೂ 1999ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅವರ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ಮೂಡಿಬಂದಿದ್ದು, 10 ಓವರ್‌ಗಳಲ್ಲಿ ಕೇವಲ 6 ರನ್‌ ಬಿಟ್ಟುಕೊಟ್ಟು ಅಷ್ಟೇ ಮೇಡಿನ್‌ ಓವರ್‌ ಸಹಿತ 5 ವಿಕೆಟ್‌ಗಳನ್ನು ಪಡೆದಿದ್ದರು. ಈ ಪ್ರದರ್ಶನಕ್ಕೆ 2002ರಲ್ಲಿ ವಿಸ್ಡನ್‌ನ ಸಾರ್ವಕಾಲಿಕ ಶ್ರೇಷ್ಠ ಒಡಿಐ ಬೌಲಿಂಗ್‌ ಪ್ರದರ್ಶನಗಳ ಪಟ್ಟಿಯಲ್ಲಿ 7ನೇ ಸ್ಥಾನ ಲಭ್ಯವಾಗಿತ್ತು.

​ರಣಜಿ ಟ್ರೋಫಿ ಇತಿಹಾಸದಲ್ಲಿ 3ನೇ ಅತ್ಯುತ್ತಮ ಬೌಲರ್‌:ಕರ್ನಾಟಕದ ಪರ ರಣಜಿ ಟ್ರೋಫಿಯಲ್ಲಿ 1992/93 ರಿಂದ 2010/11ರವರೆಗೆ ಸೇವೆ ಸಲ್ಲಿಸಿರುವ ಸ್ಪಿನ್‌ ಮಾಂತ್ರಿಕ ಜೋಶಿ ಒಟ್ಟು 479 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಹಾಗೂ ಕರ್ನಾಟಕದ ಪರ ಗರಿಷ್ಠ ವಿಕೆಟ್‌ ಟೇಕರ್‌ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನೂ ಜೋಶಿ ಪ್ರತಿನಿಧಿಸಿದ್ದಾರೆ.

ABOUT THE AUTHOR

...view details